ಸರ್ಕಾರಕ್ಕೆ ನೆಮ್ಮದಿಯಿಂದ ಕೂರಲು ಬಿಡುವುದಿಲ್ಲ: ಟಿಕಾಯತ್
ಕರ್ನಲ್, ಫೆಬ್ರವರಿ 15: ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಭಾರತೀಯ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ಟಿಕಾಯತ್, ತಮ್ಮ ಬೇಡಿಕೆಗಳು ಈಡೇರುವವರೆಗೂ ಸರ್ಕಾರವು ನೆಮ್ಮದಿಯಿಂದ ಕುಳಿತುಕೊಳ್ಳಲು ಸರ್ಕಾರ ಬಿಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ಹರ್ಯಾಣದ ಕರ್ನಲ್ನಲ್ಲಿ ಭಾನುವಾರ ರೈತರ ಮಹಾಪಂಚಾಯತ್ನಲ್ಲಿ ಮಾತನಾಡಿದ ಟಿಕಾಯತ್, ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯನ್ನು 40 ನಾಯಕರು ಮುನ್ನಡೆಸುತ್ತಿದ್ದಾರೆ. ಇದು ಇಡೀ ದೇಶಕ್ಕೆ ವ್ಯಾಪಿಸಲಿದ್ದು, ಪ್ರತಿಭಟನೆಯ ಕಿಚ್ಚು ಮತ್ತಷ್ಟು ಹೆಚ್ಚಲಿದೆ ಎಂದಿದ್ದಾರೆ.
ದೆಹಲಿ ಹಿಂಸಾಚಾರ: ರೈತರ ವಿರುದ್ಧ ಎಫ್ಐಆರ್ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹ
'ಈ ಸಮಯದವರೆಗೂ ಸರ್ಕಾರವು ನಮ್ಮ ಪರವಾಗಿ ಯಾವ ನಿರ್ಧಾರಗಳನ್ನೂ ತೆಗೆದುಕೊಂಡಿಲ್ಲ. ಸಮಿತಿ ಜತೆಗಿನ ಸಭೆಗಳಲ್ಲಿ ಅವರು ನಮ್ಮ ಬೇಡಿಕೆಗಳನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಸರ್ಕಾರವು ನೆಮ್ಮದಿಯಿಂದ ಕುಳಿತುಕೊಳ್ಳಲು ನಾವು ಬಿಡುವುದಿಲ್ಲ' ಎಂದು ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನೇ ರದ್ದುಗೊಳಿಸಲಿದೆ. ಈ ಕಾಯ್ದೆಗಳು ರೈತರು ಮಾತ್ರವಲ್ಲ, ಸಣ್ಣಪುಟ್ಟ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು ಮತ್ತು ಇತರೆ ವರ್ಗದವರಿಗೂ ಸಂಕಷ್ಟ ತಂದೊಡ್ಡಲಿವೆ ಎಂದು ಆರೋಪಿಸಿದ್ದಾರೆ.
ಕೃಷಿ ಭಾರತ ಮಾತೆಗಾಗಿಯೇ ಹೊರತೂ ಉದ್ಯಮಿಗಳಿಗಾಗಿ ಅಲ್ಲ: ರಾಹುಲ್ ಗಾಂಧಿ
ಈ ಕಾನೂನುಗಳನ್ನು ಜಾರಿಗೆ ತರಲು ಸರ್ಕಾರದ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ಟಿಕಾಯತ್, 'ಗೋದಾಮುಗಳನ್ನು ಮೊದಲು ನಿರ್ಮಿಸಲಾಗಿತ್ತು. ಕಾನೂನುಗಳಿ ಬಳಿಕ ಬಂದವು. ಈ ಕಾನೂನುಗಳು ದೊಡ್ಡ ಕಾರ್ಪೊರೇಟ್ಗಳ ಪರವಾಗಿ ಇರುವುದು ರೈತರಿಗೆ ತಿಳಿದಿಲ್ಲವೇ? ಈ ದೇಶದಲ್ಲಿ ಹಸಿವಿನ ಮೇಲೆ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ' ಎಂದು ಹೇಳಿದ್ದಾರೆ.