ನಾನೂ ರೈತನ ಮಗಳು, ಆದರೆ ಸಮವಸ್ತ್ರಕ್ಕೆ ದ್ರೋಹ ಮಾಡಲಾರೆ; ವೈರಲ್ ಆದ ಮಹಿಳಾ ಪೊಲೀಸ್ ವಿಡಿಯೋ
ನವದೆಹಲಿ, ಜನವರಿ 29: ಗಣರಾಜ್ಯೋತ್ಸವದಂದು ರಾಜಧಾನಿ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಜಾಥಾ ವೇಳೆ ನಡೆದ ಗಲಭೆ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆಯ ದಿಕ್ಕನ್ನೇ ಬದಲಿಸಿತು. ನಂತರ ದೆಹಲಿಯಲ್ಲಿ ಘಟಿಸಿದ ಗಲಭೆ ಕುರಿತ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಾಗೆಯೇ ಹಿಂಸಾಚಾರ ಸಂದರ್ಭ ರೈತರನ್ನು ತಡೆಯಲು ಯತ್ನಿಸಿದ ಮಹಿಳಾ ಪೊಲೀಸೊಬ್ಬರ ವಿಡಿಯೋ ಇದೀಗ ವೈರಲ್ ಆಗಿದೆ.
ಜನವರಿ 26ರಂದು ಘಾಜಿಪುರ ಗಡಿ ದಾಟಿ ನಗರದೊಳಗೆ ನುಗ್ಗುತ್ತಿದ್ದ ರೈತರನ್ನು ತಡೆಯಲು ಮಹಿಳಾ ಪೊಲೀಸೊಬ್ಬರು ಲಾಠಿ ಹಿಡಿದು ಪ್ರತಿಭಟನಾಕಾರರೊಂದಿಗೆ ಮಾತಿಗಿಳಿದಿರುವ ಈ ವಿಡಿಯೋ ವೈರಲ್ ಆಗಿದೆ. ಗಲಭೆ ಆಗದಂತೆ ತಡೆಯಲು ಪ್ರತಿಭಟನಾಕಾರರ ನಡುವೆ ಕದಲದೇ ನಿಂತು ಮಾತನಾಡಿರುವ ವಿಡಿಯೋ ಮೆಚ್ಚುಗೆಯನ್ನೂ ಗಳಿಸಿದೆ. ಆ ವಿಡಿಯೋದಲ್ಲಿ ಏನಿದೆ? ಮುಂದೆ ಓದಿ...
"ನಾನೂ ರೈತನ ಮಗಳು, ಆದರೆ..."
ದೆಹಲಿ ನಗರಕ್ಕೆ ನುಗ್ಗಲು ರೈತರು ಯತ್ನಿಸಿದ್ದು, ಬ್ಯಾರಿಕೇಡ್ ಮುರಿದು ನುಗ್ಗಿದ ಸಂದರ್ಭ ವಾಹನಗಳನ್ನು ಮಹಿಳಾ ಪೊಲೀಸ್ ತಡೆದಿದ್ದಾರೆ. "ನಾನೂ ರೈತನ ಮಗಳು. ಆದರೆ ನನ್ನ ಸಮವಸ್ತ್ರಕ್ಕೆ ದ್ರೋಹ ಮಾಡಲಾರೆ" ಎಂದು ಅವರು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರೈತರ ಪ್ರತಿಭಟನೆ ಸಂದರ್ಭ ಪರಿಸ್ಥಿತಿ ಕೈಮೀರುತ್ತಿದ್ದರೂ ಜಗ್ಗದೇ ಮಾತಿಗಿಳಿದಿದ್ದಾರೆ.
ರೈತ ಸಂಘಟನೆಗಳ ಮನಸು ಕೆಡಿಸಿದ ದೆಹಲಿ ಹಿಂಸಾಚಾರ?
"ನೀವೂ ದ್ರೋಹ ಮಾಡಿದಂತೆ ಎಂಬುದನ್ನು ಮರೆಯಬೇಡಿ"
ಮಹಿಳಾ ಪೊಲೀಸ್ ಅನ್ನು ಪುಷ್ಪಲತಾ ಎಂದು ಗುರುತಿಸಲಾಗಿದೆ. ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಜಾಥಾ ಕೈಗೊಂಡಿದ್ದ ರೈತರು ನಗರದೊಳಗೆ ನುಗ್ಗುತ್ತಿದ್ದಂತೆ ಅವರನ್ನು ಸಮಾಧಾನಪಡಿಸಲು ಪುಷ್ಪಲತಾ ಪ್ರಯತ್ನಿಸಿದ್ದಾರೆ. ಆಗ ರೈತರು, ನೀವು ದೇಶದ ಬಾವುಟ ಹಾರಿಸುವುದನ್ನು ತಡೆಯುತ್ತಿದ್ದೀರ ಎಂದು ಕೂಗಾಡಿದ್ದಾರೆ. ಆಗ ಉತ್ತರಿಸಿದ ಅವರು "ನಿಮ್ಮನ್ನು ತಡೆಯದೇ ನನ್ನ ಸಮವಸ್ತ್ರಕ್ಕೆ ನಾನು ದ್ರೋಹ ಬಗೆದರೆ, ನೀವೂ ದೇಶಕ್ಕೆ ದ್ರೋಹ ಮಾಡಿದಂತೆ" ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ರೈತ ಸಂಘದ ಮುಖಂಡ
ವೈರಲ್ ಆಗಿರುವ ಈ ವಿಡಿಯೋದಲ್ಲಿ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ತಾಕೈಟ್ ಕೂಡ ಇದ್ದಾರೆ. ಗಲಭೆಗೆ ಸಂಬಂಧಿಸಿದಂತೆ ರಾಕೇಶ್ ತಾಕೈಟ್ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಘಟನೆ ನಂತರ ಕೆಲವು ರೈತ ಸಂಘಗಳು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುತ್ತಿದ್ದು, ರಾಕೇಶ್ ತಾಕೈಟ್ ಮಾತ್ರ ತಮ್ಮ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ..
ದೆಹಲಿ ಗಲಭೆ ಆರೋಪ ಕೇಳಿಬರುತ್ತಿದ್ದಂತೆ ನಾಪತ್ತೆಯಾದ ನಟ
ಗಲಭೆಗೆ ತಿರುಗಿದ ಪ್ರತಿಭಟನೆ
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದ ದೆಹಲಿ ಗಡಿಗಳಲ್ಲಿ ಸುಮಾರು 40 ರೈತ ಸಂಘಟನೆಯ ರೈತ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಜಾಥಾ ಹಮ್ಮಿಕೊಳ್ಳಲು ರೈತರು ನಿರ್ಧರಿಸಿದ್ದರು. ಇದಕ್ಕೆ ಅನುಮತಿಯನ್ನೂ ಪಡೆದುಕೊಂಡಿದ್ದರು. ಆದರೆ ಜನವರಿ 26ರ ಬೆಳಿಗ್ಗೆ ಟ್ರ್ಯಾಕ್ಟರ್ ಗಳೊಂದಿಗೆ ಬಂದ ರೈತರನ್ನು ಗಡಿಯಲ್ಲಿ ಪೊಲೀಸರು ತಡೆದಿದ್ದು, ಇದೇ ಗಲಭೆಗೆ ಕಾರಣವಾಗಿದೆ. ಪ್ರತಿಭಟನೆ ಗಲಭೆ ರೂಪ ಪಡೆದುಕೊಂಡು, ಘಟನೆಯಲ್ಲಿ ಹಲವರು ಗಾಯಗೊಂಡರು. ಒಬ್ಬರು ಸಾವನ್ನಪ್ಪಿದರು. ದೆಹಲಿ ಪ್ರವೇಶಿಸಿದ ರೈತರು ಕೆಂಪುಕೋಟೆ ಮೇಲೆ ಧ್ವಜ ಹಾರಿಸಿದ್ದರು.