ಕೇಂದ್ರದ ಕೃಷಿ ಮಸೂದೆ ಬಗ್ಗೆ ರೈತರಿಗೇಕೆ ಬೇಸರ: ಇಲ್ಲಿದೆ ಕಾರಣ
ನವದೆಹಲಿ, ಸೆಪ್ಟೆಂಬರ್ 18: ಲೋಕಸಭೆಯಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದ ಮೂರು ಮಹತ್ವದ ಮಸೂದೆಗಳಿಗೆ ಗುರುವಾರ ಅನುಮೋದನೆ ನೀಡಲಾಗಿದೆ.
ಆದರೆ ಈ ಕೃಷಿ ಮಸೂದೆಗಳುರೈತರಿಗೆ ಸಂತಸ ತಂದಿಲ್ಲ ಬದಲಾಗಿ ಬೇಸರ ವ್ಯಕ್ತಪಡಿಸಿದ್ದಾರೆ.ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವ್ಯವಹಾರಗಳ ಮಸೂದೆ, ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ.
ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಹೆಚ್ಚಿನ ದರಕ್ಕೆ ದೇಶದ ಯಾವುದೇ ಕಡೆಯಲ್ಲಿ ಮಾರಾಟ ಮಾಡಲು ಅನುಕೂಲವಾಗಲಿದೆ. ರಾಜ್ಯಸಭೆಯ ಅನುಮೋದನೆಯ ಬಳಿಕ ಈ ಮಸೂದೆಗಳು ಕಾಯ್ದೆಯ ಸ್ವರೂಪವನ್ನು ಪಡೆಯಲಿವೆ.
ರೈತರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ: ಪ್ರಧಾನಿ ಮೋದಿ ಆರೋಪ
ಇದೇ ವೇಳೆ ಮಸೂದೆಗಳು ಪಾಸ್ ಆಗಿರುವುದನ್ನು ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ, ಇವು ಕೃಷಿ ಕ್ಷೇತ್ರದಲ್ಲಿ ಮಧ್ಯವರ್ತಿಗಳ ಹಾವಳಿತಡೆಗಟ್ಟಲು ನೆರವಾಗಲಿದೆ. ರೈತರಿಗೆ ಹೊಸ ಅವಕಾಶಗಳನ್ನು ಕಲ್ಪಿಸಲಿವೆ.
ರೈತರು ತಮ್ಮ ಉತ್ಪನ್ನಗಳನ್ನು ಹೆಚ್ಚಿನ ಲಾಭಕ್ಕೆ ಮಾರಾಟ ಮಾಡಿಕೊಳ್ಳಬಹುದಾಗಿದೆ. ಕೃಷಿ ವಲಯ ಹೊಸ ತಂತ್ರಜ್ಞಾನದ ಲಾಭ ಪಡೆಯಲಿದ್ದು, ಸಬಲೀಕರಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ರಾಜೀನಾಮೆ
ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವ್ಯವಹಾರಗಳ ಮಸೂದೆ 2020
ಕೃಷಿಕರು ಹಾಗೂ ವ್ಯಾಪಾರಸ್ಥರು ತಮ್ಮ ನಿಗದಿತ ಮಾರುಕಟ್ಟೆಯ ಹೊರತಾಗಿ ಬೇರೆ ಕಡೆಯೂ ಸರಾಗವಾಗಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದಾದ ವಾತಾವರಣವನ್ನು ನಿರ್ಮಿಸಲಾಗುತ್ತೆ. ರಾಜ್ಯದೊಳಗೆ ಮತ್ತು ಅಂತಾರಾಜ್ಯ ಕೃಷಿ ಮಾರುಕಟ್ಟೆಗೆ ಅವಕಾಶ ಒದಗಲಿದೆ. ಇದು ದೇಶದೊಳಗಿನ ಕೃಷಿ ಮಾರುಕಟ್ಟೆಯ ಮೇಲಿನ ನಿಯಂತ್ರಣಕ್ಕೆ ಅಂತ್ಯ ಬೀಳಲಿದೆ. ಇದರಿಂದ ಕೃಷಿಕರು ತಮ್ಮ ಉತ್ಪನ್ನಗಳನ್ನು ತಮಗೆ ಬೇಕಾದ ಮಾರುಕಟ್ಟೆಗೆ ಹೋಗಿ ವ್ಯಾಪಾರ ಮಾಡಬಹುದಾಗಿದೆ.
ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ 2020
ಇದರಿಂದ ಕೃಷಿಕರು ಹಾಗೂ ಕೃಷಿ ಉದ್ಯಮದ ನಡುವಿನ ಒಪ್ಪಂದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಇದರಿಂದ ಕೃಷಿ ಉತ್ಪನ್ನಗಳ ಮೇಲಿನ ಬೆಲೆ ಅನಿಶ್ಚಿತತೆ ದೂರವಾಗಲಿದೆ.
ರೈತರ ಆತಂಕವೇನು?
ಇವೆರಡೂ ಮಸೂದೆಗಳಿಂದ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ದೂರವಾಗಲಿದೆ, ಕನಿಷ್ಠ ಬೆಂಬಲ ಬೆಲೆಯಿಂದ ನುಣುಚಿಕೊಳ್ಳಲು ಸರ್ಕಾರ ಈ ನೂತನ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಕೃಷಿ ಉದ್ಯಮ ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಕೃಷಿಕರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಲಿದ್ದಾರೆ. ಇದರಿಂದ ಮುಂದೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕೂಡ ಗಗನ ಕುಸುಮವಾಗಲಿದೆ. ಕಾರ್ಪೊರೇಟ್ ಕಂಪನಿಗಳ ತಾಳಕ್ಕೆ ತಕ್ಕಂತೆ ರೈತರು ಕುಣಿಯಬೇಕಾಗುತ್ತದೆ. ದೇಶದ ಕೃಷಿ ವಲಯವನ್ನು ಕಾರ್ಪೊರೇಟ್ ಕಂಪನಿಗಳಿಗೆ ಕೊಡುವ ಹುನ್ನಾರವಿದು ಎಂದು ರೈತ ಸಂಘಟನೆಗಳು ವಾದಿಸುತ್ತಿವೆ.
ಸರ್ಕಾರದ ವಾದವೇನು?
ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದುವರೆಯಲಿದೆ. ಇದನ್ನು ಅಂತ್ಯಗೊಳಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ. ರೈತರಿಗೆ ಮುಕ್ತ ಮಾರುಕಟ್ಟೆ ಸಿಗಲಿದೆಯೇ ಹೊರತು ರೈತರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.