ದಿಲ್ಲಿಯಲ್ಲಿ ಏನಾಗುತ್ತಿದೆ; ಕಮ್ಮರಡಿ, ನಾಗೇಂದ್ರ ಅವರ ಪ್ರಾಸ್ತಾವಿಕ ಮಾತು
ಬೆಂಗಳೂರು, ಜನವರಿ 16: ದೆಹಲಿಯ ರೈತ ಹೋರಾಟ ಕೇಂದ್ರದೊಡನೆ ನಡೆಯುತ್ತಿರುವ 'ಮಾತುಕತೆ' ಮತ್ತು ಇತ್ತೀಚೆಗೆ ಸರ್ವೋಚ್ಚ ನ್ಯಾಯಲಯದ ಮಧ್ಯ ಪ್ರವೇಶದ ನೈಜ ಚಿತ್ರಣದ ಕುರಿತು ಶನಿವಾರ (ಜನವರಿ 16) ಬೆಳಿಗ್ಗೆ 11-45ಕ್ಕೆ ಆರಂಭವಾದ ಸಭೆಯಲ್ಲಿ ಪ್ರಸ್ತಾವಿಕ ಮಾತನಾಡಿದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟದ ಪ್ರಮುಖರೂ ಆದ ಡಾ.ಪ್ರಕಾಶ ಕಮ್ಮರಡಿ ಮಾತನಾಡಿದರು.
ಕಾರ್ಯಕ್ರಮದ ಉದ್ದೇಶ-ದೆಹಲಿಯ ರೈತ ಹೋರಾಟ ಇಂದಿಗೆ 51 ನೇ ದಿನಕ್ಕೆ ಕಾಲಿರಿಸಿದೆ. ಈವರೆಗೆ 9 ಸುತ್ತಿನ ಮಾತುಕತೆ ನಡೆದಿದೆ. ಇದರ ಜೊತೆಗೆ ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶ ಮಾಡಿದೆ. ಈ ಎಲ್ಲಾ ಸಂಗತಿಗಳ ನೈಜ ವಿಚಾರಗಳನ್ನು ನಮ್ಮ ನಡುವೆ ಹಂಚಿಕೊಳ್ಳಲಿಕ್ಕೆ ಯುದ್ಧವೀರ ಸಿಂಗ್ ಮತ್ತು ಯೋಗೇಂದ್ರ ಯಾದವ್ ಇಂದು ದಿಲ್ಲಿಯಿಂದ ಬರುತ್ತಿದ್ದಾರೆ.
ಡಾ.ಪ್ರಕಾಶ ಕಮ್ಮರಡಿ ಮಾತು
ಹಿಂದೆ ರೇಡಿಯೋ ಬಿಟ್ಟು ಏನೂ ಇರಲಿಲ್ಲ. ಆದರೀಗ ಎಷ್ಟು ದೊಡ್ಡ ಸುದ್ದಿ ಮಾಧ್ಯಮವಿದೆ. ಆದರೂ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ನೈಜ ಚಿತ್ರಣವೇ ನಮಗೆ ತಿಳಿಯುತ್ತಿಲ್ಲ. ಅಂದ ಮೇಲೆ ವಾಸ್ತವ ಚಿತ್ರಣ ನಮಗೆ ಸಿಗದ ಹಾಗೆ ಮಾಡಲಾಗುತ್ತಿದೆ. ಯಾವುದು ಸತ್ಯ ಯಾವುದು ನಿಜ ಎಂಬುದು ನಮಗೆ ತಿಳಿಯುತ್ತಿಲ್ಲ. ಕೇಂದ್ರ ಸರ್ಕಾರ 9 ಸುತ್ತಿನ ಮಾತುಕತೆ ಮಾಡುವ ಸನ್ನಿವೇಶ ಏನುಂಟು ? ತಪ್ಪು ಅಭಿಪ್ರಾಯ, ಸುಳ್ಳು ಸುದ್ಧಿಗಳನ್ನು ಹರಿಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಭೆಯನ್ನು ಏರ್ಪಾಡು ಮಾಡಲಾಗಿದೆ.
"ದೇಶದ ಎಲ್ಲಾ ರೈತರಿಗೂ ಮೋದಿ ಕ್ಷಮೆ ಕೇಳಬೇಕು"
ಅಸತ್ಯದ ಆಟಾಟೋಪ ನಡೀತಿದೆ. ಸತ್ಯ ಕಂಗೆಟ್ಟು ದಾರಿಕಾಣದಾಗಿದೆ. ರೈತರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂರೂ ಕಾಯಿದೆಗಳನ್ನು ಹಿಂಪಡೆಯಬೇಕು ಎಂದು ಹೇಳಿ ಆಗಿದೆ. ಮತ್ತೇನು 'ಮಾತುಕತೆ' ಎಂಬ ನಾಟಕ.
ಹೋರಾಟದ ಕಿಚ್ಚಿಗೂ ರಾಜ್ಯದ ಕೊಡುಗೆ ಇದೆ
ಇದು ಕೋರ್ಟ್ ವಿಚಾರವಲ್ಲ. ಪಾರ್ಲಿಮೆಂಟಿನ ಪರಮಾಧಿಕಾರ ಇದೆ. ಇಲ್ಲಿ ಕೋರ್ಟ್ ಪ್ರವೇಶಕ್ಕೆ ಅವಕಾಶವಿದೆ. ಈ ಕಾನೂನುಗಳನ್ನು ತರಲು ಏನಾದರೂ ಸಂವಿಧಾನಿಕ ಬಿಕ್ಕಟ್ಟುಗಳಿವೆಯೇ ಎಂಬುದರ ಬಗ್ಗೆ ಮಾತನಾಡಬೇಕಿತ್ತು. ಆದರೆ ಕೋರ್ಟ್ ಆ ಕೆಲಸ ಮಾಡಿಲ್ಲ.
ಈ ಕಾನೂನುಗಳನ್ನು ತರೋಕೆ ನಿಮಗೆ ಅಧಿಕಾರವಿಲ್ಲ ಎಂದು ಕೋರ್ಟ್ ಹೇಳಿದ್ದಲ್ಲಿ ಸರ್ಕಾರ ಕೂಡಲೇ ಕಾಯಿದೆಗಳನ್ನು ಹಿಂಪಡೆಯುವ ಕೆಲಸ ಮಾಡ್ತಿತ್ತು. ಈಗ ದಿಲ್ಲಿಯಲ್ಲಿ ನಡೀತಿರೋದು ಹೋರಾಟದ ಆಚರಣೆ. ಇಡೀ ವಿಶ್ವಕ್ಕೆ ಮಾದರಿಯಾಗಿದೆ.
ಈ ಚಾರಿತ್ರಿಕ ಹೋರಾಟದ ಹಿನ್ನೆಲೆಯಲ್ಲಿ ಏನೆಲ್ಲಾ ಆಗಿದೆ ಯತಾವತ್ತಾಗಿ ದಾಖಲಾಗಬೇಕು ಎಂದು ಪ್ರಸ್ತಾವಿಕ ಭಾಷಣ ಮಾಡಿದ ಪ್ರಕಾಶ್ ಕಮ್ಮರಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೃಷಿಯಲ್ಲಿ ಕರ್ನಾಟಕ ಅನೇಕ ಮೊದಲುಗಳಿಗೆ ಕಾರಣವಾಗಿದೆ. ಈಗ ನಡೆಯುತ್ತಿರುವ ದಿಲ್ಲಿ ಹೋರಾಟದ ಕಿಚ್ಚಿಗೂ ರಾಜ್ಯದ ಕೊಡುಗೆ ಇದೆ ಎಂದರು.
ಬಡಗಲಪುರ ನಾಗೇಂದ್ರ ಮಾತು
ಬಿಜೆಪಿ ಪಕ್ಷ ಅಥವಾ ಅದರ ಅಂಗ ಸಂಘಟನೆಗಳು ಬಹಳ ಸರಳ ಭಾಷೆಯಲ್ಲಿ ಕೃಷಿ ಕಾನೂನುಗಳ ಬಗ್ಗೆ ಪುಸ್ತಕಗಳನ್ನು ತಂದಿದ್ದಾರೆ. ಅವರು ಅಷ್ಟಕ್ಕೇ ನಿಂತಿಲ್ಲ ಎಪಿಎಂಸಿ ಗಳಲ್ಲಿ ವಹಿವಾಟು ಮಾಡುವ ರೈತರು ಹಾಗೂ ವರ್ತಕರಿಗೆ ರೈತ ದ್ರೋಹಿ ವಿಚಾರಗಳನ್ನು ತುಂಬಾ ಒಳ್ಳೆದು ಅಂತಾ ಹೇಳ್ತಿದ್ದಾರೆ.
ಇದನ್ನು ನಂಬಿದ ನಮ್ಮ ಜನ ನಮಗೇ ಕೇಳ್ತಾರೆ "ನೀವ್ಯಾಕೆ ವಿರೋಧ ಮಾಡ್ತೀರಿ" ಅಂತಾ. ಸಂಘಟನೆಗಳಲ್ಲಿರೋ ಅನೇಕರಿಗೆ ಈ ಕಾನೂನುಗಳ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲವಾಗಿ, ಅವರಿಗೂ ಹೇಳಿಕೊಡುವ ಕೆಲಸ ಮಾಡಬೇಕಾಯ್ತು. ಈಗಿನ್ನು ನಾವು ಜನಗಳ ನಡುವೆ ಹೋಗಬೇಕು.
ಸಂವಿಧಾನವನ್ನು ರಕ್ಷಿಸುವ ಅಧಿಕಾರ ಕೋರ್ಟ್ ಗೆ ಇದೆ
541 ಸಂಘಟನೆಗಳು ಸಂಯುಕ್ತ ಮೋರ್ಚಾ ಅಂತಾ ಮಾಡಿಕೊಂಡಾಗಿದೆ. ಆ ಸಂಸ್ಥೆ ಏನು ಪ್ರಕಟಣೆ ಕೊಡುತ್ತೋ ಅದು ಈಗ ದಿಲ್ಲಿ ಹೋರಾಟದ ಮಾತು. ಬಿಡಿ ಬಿಡಿ ನಾಯಕರು ಕೊಡುವ ಹೇಳಿಕೆಗಳಿಗೆ ಹೋರಾಟ ಜವಾಬ್ದಾರವಾಗುವುದಿಲ್ಲ.
ಸಂವಿಧಾನವನ್ನು ರಕ್ಷಿಸುವ ಅಧಿಕಾರ ಕೋರ್ಟ್ ಗೆ ಇದೆ. ಸ್ವಾಯತ್ತ ಸಂಸ್ಥೆಗಳು ಪ್ರಭುತ್ವಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗಿರುವಾಗ ನಾವೆಲ್ಲಾ ನಾಗರೀಕರು ಸೇರಿ ಮಾಡಬೇಕಿದೆ. ಅದಕ್ಕೆ ರೈತರ ಪರೇಡ್ ಅನ್ನು ಗಣರಾಜ್ಯದ ದಿನದಂದು ಮಾಡುತ್ತಿದ್ದೇವೆ. ಯಾಕೆಂದರೆ ಗಣರಾಜ್ಯಕ್ಕೆ ಅಪಾಯವಿದೆ. ದೇಶವನ್ನು ಉಳಿಸಿಕೊಳ್ಳಬೇಕಾದ ಜನರೇ ಪರ್ಯಾಯವಾದ ಹೋರಾಟ ಮಾಡ್ತೇವೆ.