PM-PRANAM scheme : ಪಿಎಂ ಪ್ರಣಾಮ್ ಯೋಜನೆಯಿಂದ ರೈತರು, ಕೃಷಿಗೆ ಆಗುವ ಲಾಭವೇನು?
ಬೆಂಗಳೂರು, ಸೆಪ್ಟಂಬರ್ 21: ಕೃಷಿ ಕ್ಷೇತ್ರದಲ್ಲಿನ ರಸಾಯನಿಕ ರಸಗೊಬ್ಬರಗಳ ಬಳಕೆ ತಗ್ಗಿಸಲು ಹಾಗೂ ನೈಸರ್ಗಿಕ ಕೃಷಿ ಚಟುವಟಿಕೆಗೆ ಪೂರಕವಾದ, ಬೆಳೆಯ ಇಳುವರಿ ಹೆಚ್ಚಿಸಲು ಕೇಂದ್ರ ಸರ್ಕಾರ 'ಪಿಎಂ ಪ್ರಣಾಮ್' ಯೋಜನೆ ರೂಪಿಸಲು ಮುಂದಾಗಿದೆ.
'ಪಿಎಂ ಪ್ರಣಾಮ್' ಅಥವಾ ''ಪ್ರಧಾನ ಮಂತ್ರಿ-ಪರ್ಯಾಯ ಪೌಷ್ಟಿಕ ಮತ್ತು ಕೃಷಿ ನಿರ್ವಹಣೆಯ ಉತ್ತೇಜನ (PM-PRANAM) ಯೋಜನೆ'ಯು ಕೃಷಿ ವಲಯದಲ್ಲಿ ಬದಲಾವಣೆ ತರಲಿದೆ. ರೈತರ ಆದಾಯವನ್ನು ಹೆಚ್ಚಿಸಲಿದೆ.
ಪಿಎಂ ಕೇರ್ಸ್ ಫಂಡ್ನ ಅಡಳಿತ ವ್ಯವಸ್ಥೆಯಲ್ಲಿ ಸುಧಾ ಮೂರ್ತಿ, ರತನ್ ಟಾಟಾ ಮತ್ತಿತರರು
ರೈತರು ಹೆಚ್ಚು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 15ರಂದು ಭಾಷಣದ ವೇಳೆ ಸಾವಯವ ಕೃಷಿ ವಿಧಾನಗಳನ್ನು ಬಳಸಲು ಪ್ರೋತ್ಸಾಹಿಸಿದರು. ದೇಶದೆಲ್ಲಡೆ ನೈಸರ್ಗಿಕ ಕೃಷಿ ಅಳವಡಿಕೆ ಜತೆಗೆ ರಾಸಾಯನಿಕ ಮುಕ್ತವಾಗಬೇಕು ಎಂದು ಪ್ರಧಾನಿ ಹೇಳಿದ್ದರು.
ಕಳೆದ ಜುಲೈನಲ್ಲಿ ನಡೆದ ನೈಸರ್ಗಿಕ ಕೃಷಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ ಅವರು, ನೈಸರ್ಗಿಕ ಕೃಷಿ ಎಂಬುದು ಸಮೃದ್ಧಿಯ ಸಾಧನ. ನೈಸಗಿರ್ಕ ಕೃಷಿಯಿಂದ ತಾಯಿ ಭೂಮಿಯನ್ನು ಗೌರವಿಸಿದಂತಾಗುತ್ತದೆ. ನೀವು ನೈಸರ್ಗಿಕ ಕೃಷಿ ಮಾಡುವಾಗ, ನೀವು ಭೂಮಿ ತಾಯಿಗೆ ಸೇವೆ ಸಲ್ಲಿಸುತ್ತೀರಿ, ಮಣ್ಣಿನ ಗುಣಮಟ್ಟ ಮತ್ತು ಅದರ ಉತ್ಪಾದಕತೆ ರಕ್ಷಣೆ ಮಾಡುತ್ತೀರಿ. ಅಲ್ಲದೇ ಪ್ರಕೃತಿ ಮತ್ತು ಪರಿಸರಕ್ಕೆ ಸೇವೆ ಸಲ್ಲಿಸಿದಂತಾಗುತ್ತದೆ ಎಂದು ರೈತರಿಗೆ ಮೋದಿ ನೆನಪಿಸಿದ್ದರು.
'ಪಿಎಂ ಪ್ರಣಾಮ್' ಸುಸ್ಥಿರ ಕೃಷಿ ಉತ್ತೇಜಿಸಲಿದೆ
ವರದಿಗಳ ಪ್ರಕಾರ, ಸರ್ಕಾರವು ನೈಸರ್ಗಿಕ ಕೃಷಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. 'ಪ್ರಧಾನ ಮಂತ್ರಿ-ಪರ್ಯಾಯ ಪೌಷ್ಟಿಕ ಮತ್ತು ಕೃಷಿ ನಿರ್ವಹಣೆಯ ಉತ್ತೇಜನ (ಪಿಎಂ ಪ್ರಣಾಮ್) ಯೋಜನೆ'ಯು ರಾಸಾಯನಿಕ ಗೊಬ್ಬರಗಳ ಬಳಕೆ ತಗ್ಗಿಸುವ ಗುರಿ ಉದ್ದೇಶ ಹೊಂದಿದೆ. ಸುಸ್ಥಿರ ಕೃಷಿ ಪದ್ಧತಿಯನ್ನೂ ಇದು ಉತ್ತೇಜಿಸಲಿದೆ ಎಂದು ವರದಿ ತಿಳಿಸಿದೆ.
'ಪಿಎಂ ಪ್ರಣಾಮ್ ಯೋಜನೆ'ಯು ನೈಸರ್ಗಿಕ ಕೃಷಿ ಉತ್ತೇಜಿಸುವುದರ ಜೊತೆಗೆ ಸರ್ಕಾರಕ್ಕೆ ರಸಗೊಬ್ಬರ ಸಬ್ಸಿಡಿಯ ಆರ್ಥಿಕ ಹೊರೆಯನ್ನು ಸಹ ಕಡಿಮೆ ಮಾಡಲಿದೆ. ಕಳೆದ ಕೇಂದ್ರ ಸರ್ಕಾರ ರಸಗೊಬ್ಬರ ಸಹಾಯಧನಕ್ಕಾಗಿ ಸುಮಾರು 1.62 ಲಕ್ಷ ಕೋಟಿ ರೂ.ವ್ಯಯಿಸಿತ್ತು. 2022-2023ರ ಪ್ರಸಕ್ತ ಸಾಲಿನಲ್ಲಿ 2.25 ಲಕ್ಷ ಕೋಟಿಗೂ ಹೆಚ್ಚು ಹಣ ವ್ಯಯಿಸುವ ನಿರೀಕ್ಷೆ ಇದೆ.
ಸಬ್ಸಡಿ ಹಣ ವಿವಿಧ ಕಾರಣಕ್ಕೆ ಬಳಕೆ
ಯೋಜನೆಯಿಂದ ಉಳಿತಾಯ ಆಗಲಿರುವ ಇಷ್ಟೊಂದು ಪ್ರಮಾಣದ ಹಣವನ್ನು ಕೇಂದ್ರ ಸರ್ಕಾರ ಸುಮಾರು ಶೇ. 70ರಷ್ಟು ರೈತರ ಕಲ್ಯಾಣ ಮತ್ತು ಸಂಬಂಧಿತ ಬೆಳವಣಿಗೆಗಳಿಗೆ ಬಳಸಬಹುದು. ಉಳಿದ ಹಣವನ್ನು ರಸಗೊಬ್ಬರ ಬಳಕೆ ಕಡಿಮೆಗೊಳಿಸಲು ನೆರವಾದ ಪಂಚಾಯತಿಗಳು, ರೈತರು ಮತ್ತು ಸ್ವ-ಸಹಾಯ ಗುಂಪುಗಳನ್ನು ಉತ್ತೇಜಿಸಲು ಬಳಸಲು ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಸರ್ಕಾರದ ಮಾಹಿತಿ ಪ್ರಕಾರ, ರಸಗೊಬ್ಬರದ ಅವಲಂಬನೆ ಹೆಚ್ಚಾಗಿದೆ. 2017-2018 ಹಾಗೂ 2021-2022ರ ಮಧ್ಯದಲ್ಲಿ ಯೂರಿಯಾ, ಡಿಎಪಿ (ಡೈ-ಅಮೋನಿಯಂ ಫಾಸ್ಫೇಟ್), ಎಂಒಪಿ (ಮ್ಯೂರಿಯೇಟ್ ಆಫ್ ಪೊಟ್ಯಾಷ್), ಎನ್ಪಿಕೆಎಸ್ (ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್) ಗಳ ಸಂಯೋಜಿತ ಬೇಡಿಕೆ ಪ್ರಮಾಣ 528.86 ಲಕ್ಷ ಮೆಟ್ರಿಕ್ ಟನ್ಗಳಿಂದ ಶೇ.21ರಷ್ಟು ಅಧಿಕವಾಗಿದೆ. ಇದಕ್ಕೆ ನೀಡುವ ಸಹಾಯಧನ ಪ್ರಮಾಣದಲ್ಲೂ ತುಸು ಏರಿಕೆ ಆಗಿದೆ. 'ಪಿಎಂ ಪ್ರಣಾಮ್ ಯೋಜನೆ' ಜಾರಿಯ ದಿನದ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ತಿಳಿದು ಬಂದಿದೆ.