"ಸುಪ್ರೀಂ ಕೋರ್ಟ್ ನೇಮಿಸುವ ಯಾವ ಸಮಿತಿ ಸಭೆಗಳಿಗೂ ನಾವು ಹೋಗಲ್ಲ"
ನವದೆಹಲಿ, ಜನವರಿ 12: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ದೆಹಲಿ ಗಡಿಗಳಲ್ಲಿ ಒಂದೂವರೆ ತಿಂಗಳಿನಿಂದಲೂ ರೈತರ ಪ್ರತಿಭಟನೆ ನಡೆಯುತ್ತಿದೆ. ಸೋಮವಾರ ಕೃಷಿ ಕಾಯ್ದೆಗಳ ವಿರುದ್ಧ ದಾಖಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೃಷಿ ಕಾಯ್ದೆಗಳಿಗೆ ನೀವು ತಡೆ ನೀಡುತ್ತೀರೋ ಅಥವಾ ನಾವೇ ತಡೆ ನೀಡಬೇಕೋ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಜೊತೆಗೆ ಈ ಕೃಷಿ ಕಾಯ್ದೆಗಳ ಒಳಿತು ಕೆಡಕುಗಳ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸುವಂತೆ ಆದೇಶಿಸಿದೆ. ಆದರೆ, ಈ ಕೃಷಿ ಕಾಯ್ದೆಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಎಂಬುದು ಹೋರಾಟ ನಡೆಸುತ್ತಿರುವ ಎಲ್ಲ ರೈತ ಸಂಘಟನೆಗಳ ಸರ್ವಾನುಮತದ ನಿರ್ಧಾರ. ನಾವು ಸಮಿತಿಯ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ತಿಳಿಸಿದೆ. ಮುಂದೆ ಓದಿ...
"ನಮ್ಮ ಸಮಸ್ಯೆ ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದ"
ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ನಡೆದ ವಿಚಾರಣೆ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ವಿಚಾರಣೆ ವೇಳೆ ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಮತ್ತು ಹಿತಕರವಾದ ಮಾತುಗಳನ್ನು ಆಡಿದ್ದಕ್ಕೆ ನಾವು ಸುಪ್ರೀಂ ಕೋರ್ಟ್ಗೆ ಗೌರವವನ್ನು ವ್ಯಕ್ತಪಡಿಸುತ್ತೇವೆ ಎಂದಿದೆ.
ರೈತರಿಗೆ ಮೊದಲ ಜಯ, ಕೃಷಿ ಕಾಯ್ದೆಗಳಿಗೆ ತಡೆ ನೀಡಲು ಸುಪ್ರೀಂಕೋರ್ಟ್ ಸೂಚನೆ
"ಸಮಿತಿ ಸಭೆಗಳಲ್ಲಿ ನಾವು ಭಾಗವಹಿಸುವುದಿಲ್ಲ"
ಕೃಷಿ ಕಾಯ್ದೆಗಳ ಜಾರಿ ತಡೆಯುವ ಸುಪ್ರೀಂ ಕೋರ್ಟ್ ಸಲಹೆಯನ್ನು ಎಲ್ಲ ಸಂಘಟನೆಗಳು ಸ್ವಾಗತಿಸುತ್ತವೆ. ಆದರೆ ರೈತ ಸಂಘಟನೆಗಳು ಸಾಮೂಹಿಕವಾಗಿ ಹಾಗೂ ವ್ಯಕ್ತಿಗತವಾಗಿ ಸುಪ್ರೀಂ ಕೋರ್ಟ್ ನೇಮಿಸಲಿರುವ ಸಮಿತಿಯ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ. ಸುಪ್ರೀಂ ಕೋರ್ಟ್ ಸಮಿತಿ ರಚಿಸುವ ಪ್ರಸ್ತಾವ ಇಟ್ಟಿದ್ದು, ಸಮಿತಿಯ ಮುಂದೆಯೂ ಕಾಯ್ದೆಗಳನ್ನು ಹಿಂಪಡೆಯಲು ಒಪ್ಪುವುದಿಲ್ಲ ಎಂಬುದನ್ನು ನ್ಯಾಯಾಲಯದಲ್ಲಿ ಸರ್ಕಾರ ತನ್ನ ಧೋರಣೆ ಮತ್ತು ನಡೆಗಳಿಂದ ಸ್ಪಷ್ಟಪಡಿಸಿದೆ. ಹೋರಾಟದಲ್ಲಿ ಪಾಲ್ಗೊಂಡಿರುವ ಯಾವುದೇ ಸಂಘಟನೆಗಳೊಂದಿಗೆ ಸಮಾಲೋಚಿಸದೇ ನೇಮಿಸುವ ಸಮಿತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ನ್ಯಾಯಾಲಯದಲ್ಲಿ ನಮ್ಮ ವಕೀಲರು ತಿಳಿಸಿದ್ದರು. ವಿಚಾರಣೆ ಬಳಿಕ ಸಮಾಲೋಚನೆ ನಡೆಸಿದ್ದು, ನಾವು ಯಾವುದೇ ಸಮಿತಿಯ ಎದುರು ಹೋಗದಿರಲು ಸರ್ವಾನುಮತದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿಕೆ ತಿಳಿಸಿದೆ.
ಸಲಹೆಗೆ ಸಮ್ಮತಿ ಪಡೆಯಲು ಸೂಚಿಸಿದ್ದ ಕೋರ್ಟ್
ಸುಪ್ರೀಂ ಕೋರ್ಟ್ ನಮ್ಮ ವಕೀಲರು ಹಾಗೂ ಇತರೆ ವಕೀಲರ ಮೂಲಕ ಮಂಗಳವಾರ ವಿಚಾರಣೆ ನಡೆಸಲು ಮತ್ತು ಸುಪ್ರೀಂ ಕೋರ್ಟ್ ಸಲಹೆಗೆ ಸಮ್ಮತಿ ಪಡೆಯಲು ಮನವಿ ಮಾಡಿತ್ತು. ಹೀಗಾಗಿ ನಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಲು ಈ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ಸಂಯುಕ್ತ ಮೋರ್ಚಾದ ದರ್ಶನ್ ಪಾಲ್ ತಿಳಿಸಿದ್ದಾರೆ.
ಕೃಷಿ ಕಾಯ್ದೆ: ರೈತರನ್ನು ಪ್ರತಿನಿಧಿಸುವ ಸಮಿತಿ ಸದಸ್ಯರ ಕಿರು ಪರಿಚಯ
ರೈತರು ಮತ್ತು ಅವರ ಪ್ರತಿನಿಧಿಗಳಾಗಿ ನಾವು ಸುಪ್ರೀಂ ಕೋರ್ಟ್ಗೆ ಕೃತಜ್ಞತೆ ಸಲ್ಲಿಸುತ್ತೇವೆ. ಜೊತೆಗೆ ಕೋರ್ಟ್ ಸಲಹೆ ಒಪ್ಪಿಕೊಳ್ಳದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಆದರೆ ದೇಶದಲ್ಲಿರುವ ಲಕ್ಷಾಂತರ ರೈತರ ಒಳಿತಿಗಾಗಿ ನಮ್ಮ ಹೋರಾಟ ನಡೆಯುತ್ತಿದೆ" ಎಂದು ಹೇಳಿಕೆ ತಿಳಿಸಿದೆ.
"ಎಲ್ಲೆಡೆಯೂ ನಡೆಯುತ್ತಿದೆ ಹೋರಾಟ"
ಸರ್ಕಾರವು ಈ ಪ್ರತಿಭಟನೆಯನ್ನು ಪಂಜಾಬ್ ರೈತರಿಗಷ್ಟೇ ಸೀಮಿತಗೊಳಿಸುತ್ತಿದ್ದು, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಿಂದ ಆಗಮಿಸಿದ ರೈತರು ದೆಹಲಿ ಗಡಿಯಲ್ಲಿ ಸೇರಿದ್ದಾರೆ. ಅಷ್ಟೇ ಅಲ್ಲ ವಿವಿಧ ರಾಜ್ಯಗಳಲ್ಲೂ ಪ್ರತಿಭಟನೆ ನಡೆಯುತ್ತಿದೆ ಎಂದು ಸಂಘಟನೆ ತಿಳಿಸಿದೆ.
ಮೋರ್ಚಾದ ಎಸ್ ಬಲ್ವೀರ್, ಎಸ್ ರಾಜೇವಾಲ್, ಡಾ. ದರ್ಶನ್ ಪಾಲ್, ಎಸ್ ಪ್ರೇಮ್ ಎಸ್ ಭಂಗು, ಎಸ್ ರಾಜೀಂದರ್ ಸಿಂಘ್ದೀಪ್, ಸಿಂಘ್ ವಾಲ ಮತ್ತು ಎಸ್ ಜಗ್ ಮೋಹನ್ ಸಿಂಘ್ ಅವರು, ವಕೀಲರಾದ ದುಶ್ಯಂತ ದಾವೆ, ಎಸ್ ಪ್ರಶಾಂತ್ ಭೂಷಣ್, ಎಸ್ ಕಾಲಿನ್ ಗೋನ್ಸಾವ್ಲಿಸ್ ಮತ್ತು ಎಚ್ ಎಸ್ ಫೂಲ್ಕಾ ಅವರೊಂದಿಗೆ ನಡೆಸಿದ ಸಮಾಲೋಚನೆ ಬಳಿಕ ಈ ಹೇಳಿಕೆ ನೀಡಿರುವುದಾಗಿ ಸಂಘಟನೆ ತಿಳಿಸಿದೆ.
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ದೆಹಲಿ ಗಡಿಗಳಲ್ಲಿ ಸುಮಾರು 40 ರೈತ ಸಂಘಟನೆಯ ರೈತ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಅವರ ಪ್ರತಿಭಟನೆ 48ನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಹಾಗೂ ಕೇಂದ್ರದ ನಡುವಿನ ಮುಂದಿನ ಮಾತುಕತೆ ಜನವರಿ 15ಕ್ಕೆ ನಿಗದಿಯಾಗಿದೆ.