'ನಮಗೆ ತಾಳ್ಮೆಯ ಪಾಠ ಮಾಡಬೇಡಿ': ಕೃಷಿ ಕಾಯ್ದೆ ಬಗ್ಗೆ 'ಸುಪ್ರೀಂ'ನ 5 ಪ್ರಮುಖ ಹೇಳಿಕೆಗಳು
ನವದೆಹಲಿ, ಜನವರಿ 11: ಕೃಷಿ ಕಾಯ್ದೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ನಡೆಯುತ್ತಿರುವ ತಿಕ್ಕಾಟದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿದೆ. ಕೆಲವು ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗಳಿಗೆ ಸೌಹಾರ್ದ ಪರಿಹಾರ ನೀಡಲು ಬಯಕೆ ವ್ಯಕ್ತಪಡಿಸಿದೆ. ಎಂಟು ಸುತ್ತಿನ ಮಾತುಕತೆಗಳು ನಡೆದರೂ ಕೇಂದ್ರ ಮತ್ತು ರೈತರ ನಡುವಿನ ಕಗ್ಗಂಟು ಸಡಿಲಗೊಂಡಿಲ್ಲ. ಈ ಬಗ್ಗೆ ಅಸಮಾಧಾನಗೊಂಡಿರುವ ಸುಪ್ರೀಂಕೋರ್ಟ್, ಕೃಷಿ ಕಾಯ್ದೆಗಳ ಜಾರಿಯನ್ನು ನೀವೇ ತಡೆಯುತ್ತೀರೋ, ನಾವು ತಡೆ ನೀಡಬೇಕೋ ಎಂದು ಪ್ರಶ್ನಿಸಿದೆ.
ಜತೆಗೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ, 'ನಮಗೆ ತಾಳ್ಮೆಯ ಉಪದೇಶ ಮಾಡಬೇಡಿ. ಸುದೀರ್ಘ ಸಮಯ ನೀಡಲಾಗಿದೆ. ನೀವು ಸಮಸ್ಯೆಯ ಭಾಗವೇ ಅಥವಾ ಪರಿಹಾರದ ಭಾಗವೇ? ಎಂದು ವಿಚಾರಣೆ ಸಂದರ್ಭದಲ್ಲಿ ಸಿಜೆಐ ಪ್ರಶ್ನಿಸಿದ್ದಾರೆ.
ರೈತರಿಗೆ ಮೊದಲ ಜಯ, ಕೃಷಿ ಕಾಯ್ದೆಗಳಿಗೆ ತಡೆ ನೀಡಲು ಸುಪ್ರೀಂಕೋರ್ಟ್ ಸೂಚನೆ
ಸೋಮವಾರ ಕೃಷಿ ಕಾಯ್ದೆಗಳ ವಿರುದ್ಧ ಸಲ್ಲಿಸಲಾಗಿದ್ದ ರೈತ ಸಂಘಟನೆಗಳ ಪರವಾದ ವಿವಿಧ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆಗೆ ಒಳಪಡಿಸಿದ ಸಿಜೆಐ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ, ಕೃಷಿ ಕಾಯ್ದೆ ಹಾಗೂ ಪ್ರತಿಭಟನೆಗಳ ಕುರಿತು ಐದು ಪ್ರಮುಖ ಹೇಳಿಕೆಗಳನ್ನು ನೀಡಿದೆ. ಮುಂದೆ ಓದಿ.
ಇಲ್ಲಿ ಪ್ರತಿಷ್ಠೆ ಏನಿದೆ?
'ನಾವು ಕೃಷಿ ಮತ್ತು ಆರ್ಥಿಕತೆಯ ಪರಿಣತರಲ್ಲ. ಈ ಕಾಯ್ದೆಗಳನ್ನು ನೀವು ತಡೆ ಹಿಡಿಯುತ್ತೀರೋ ಅಥವಾ ನಾವು ಮಾಡಬೇಕೋ ಎಂದು ಹೇಳಿ. ಇಲ್ಲಿ ಪ್ರತಿಷ್ಠೆಯ ವಿಚಾರ ಏನು? ನೀವು ಪರಿಹಾರದ ಭಾಗವೋ ಅಥವಾ ಸಮಸ್ಯೆಯ ಭಾಗವೋ ಗೊತ್ತಾಗಿಲ್ಲ'.
ರಕ್ತ ಅಂಟುವುದನ್ನು ಬಯಸುವುದಿಲ್ಲ
'ಇಲ್ಲಿ ಶಾಂತಿಯ ಉಲ್ಲಂಘನೆಯಾಗಿರಬಹುದು ಎಂದು ನಾವು ಗ್ರಹಿಸಿದ್ದೇವೆ. ಏನೇ ತಪ್ಪು ಸಂಭವಿಸಿದರೂ ನಾವು ಪ್ರತಿಯೊಬ್ಬರೂ ಅದಕ್ಕೆ ಹೊಣೆಗಾರರಾಗುತ್ತೇವೆ. ನಮ್ಮ ಕೈಗಳಿಗೆ ಯಾವುದೇ ಗಾಯ ಅಥವಾ ರಕ್ತ ಅಂಟುವುದನ್ನು ನಾವು ಬಯಸುವುದಿಲ್ಲ'.
ಸಮಾಲೋಚನೆ ನಡೆದಿದೆಯೋ ಗೊತ್ತಿಲ್ಲ
'ರೈತರ ಪ್ರತಿಭಟನೆಯ ವಿಚಾರವನ್ನು ಸರ್ಕಾರ ನಿಭಾಯಿಸಿದ ರೀತಿಯಿಂದ ತೀವ್ರ ನಿರಾಶೆಯಾಗಿದೆ. ಈ ಸಮಸ್ಯೆಯನ್ನು ನೀವು ಪರಿಣಾಮಕಾರಿಯಾಗಿ ಎದುರಿಸುತ್ತಿರುವುದು ನಮಗೆ ಕಾಣಿಸಿಲ್ಲ. ಯಾವ ಸಮಾಲೋಚನೆಗಳು ನಡೆದಿದೆಯೋ ನಮಗೆ ಗೊತ್ತಿಲ್ಲ. ಬಹು ದೊಡ್ಡ ಪ್ರಮಾಣವು ಕಾನೂನುಗಳು ಒಳ್ಳೆಯದು ಎಂದರೆ ಅದನ್ನು ಸಮಿತಿಯ ಮುಂದೆ ಹೇಳಲಿ. ನಮ್ಮ ಬಯಕೆ ಸೌಹಾರ್ದಯುತ ಪರಿಹಾರವನ್ನು ತರುವುದು'.
ಶಾಂತಿಯುತ ಪ್ರತಿಭಟನೆ ಹಕ್ಕು
'ಪ್ರತಿಭಟನೆಯ ಹಕ್ಕನ್ನು ಪ್ರಶ್ನಿಸಲಾಗದು. ಮಹಾತ್ಮ ಗಾಂಧಿ ಅವರ ಸತ್ಯಾಗ್ರಹದಂತೆ ಪ್ರತಿಭಟನೆಯ ಹಕ್ಕನ್ನು ನಡೆಸಬೇಕು. ಅದನ್ನು ಶಾಂತಿಯುತವಾಗಿ ಮಾಡಿ. ಇದಕ್ಕೆ ಹಿಂದಿನ ಸರ್ಕಾರಗಳನ್ನು ದೂಷಿಸಲು ಸಾಧ್ಯವಿಲ್ಲ'.
ವೃದ್ಧರು, ಮಹಿಳೆಯರು ಏಕಿದ್ದಾರೆ?
'ಕಳೆದ ವಿಚಾರಣೆಯಲ್ಲಿಯೇ ನಾವು ಕೇಳಿದ್ದೆವು. ಆದರೆ ಉತ್ತರ ಬಂದಿರಲಿಲ್ಲ. ಈಗ ಪರಿಸ್ಥಿತಿ ಕೈಮೀರಿದೆ. ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಾತಾವರಣದಲ್ಲಿ ವೃದ್ಧರು ಮತ್ತು ಮಹಿಳೆಯರು ಏಕೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ? ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ಮನೆಗೆ ಮರಳಲಿ'.