ಲಾಕ್ಡೌನ್ ಎಫೆಕ್ಟ್: 3 ಎಕರೆ 60 ಸೆಂಟ್ಸ್ ಬಾಳೆಯನ್ನು ನೆಲಸಮ ಮಾಡಿದ ರೈತ
ವಿಜಯನಗರ, ಮೇ 14: ಕೊರೊನಾ ಸೋಂಕು ನಿಯಂತ್ರಸುವ ಸಲುವಾಗಿ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಇದರ ಪರಿಣಾಮವಾಗಿ ರೈತನೊಬ್ಬ ಸೂಕ್ತ ಬೆಲೆ ಸಿಗದೆ 3 ಎಕರೆ 60 ಸೆಂಟ್ಸ್ ಬಾಳೆಯನ್ನು ನೆಲಸಮ ಮಾಡಿದ್ದಾನೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಿರಾಕೊರನಹಳ್ಳಿಯ ಗ್ರಾಮದ ಮಾಸಲವಾಡ ಶಿವಕುಮಾರ ರೈತನ ವ್ಯಥೆ ಇದಾಗಿದೆ. ಲಾಕ್ಡೌನ್ ಇರುವುದರಿಂದ ಬಾಳೆ ಬೆಳೆಯನ್ನು ಯಾರೂ ಕೇಳದಂತಾಗಿದ್ದು, ದರ ಕೂಡಾ ಕುಸಿದಿದೆ.
ಕೊರೊನಾ ಲಾಕ್ಡೌನ್ ನಿಂದಾಗಿ ರೈತರ ಬೆಳೆಗಳು ಮಾರುಕಟ್ಟೆ ತಲುಪುತ್ತಿಲ್ಲ, ಮಾರುಕಟ್ಟೆ ಖರೀದಿದಾರರು ಬರುತ್ತಿಲ್ಲ. ಬೆಳೆಗಳಿಗೆ ಉತ್ತಮ ಬೆಲೆಯೂ ಸಿಗದೆ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ನನ್ನನ್ನು ನೀರಿನಲ್ಲಿ ನಿಲ್ಲಿಸು, ನಿನ್ನನ್ನು ಊರಿನಲ್ಲಿ ನಿಲ್ಲಿಸುತ್ತೇನೆ
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಹಿರಿಯರ ನಾಣ್ಣುಡಿಯಂತೆ, "ಬಾಳೆ ಹೇಳುತ್ತದೆ ನನ್ನನ್ನು ನೀರಿನಲ್ಲಿ ನಿಲ್ಲಿಸು, ನಿನ್ನನ್ನು ಊರಿನಲ್ಲಿ ನಿಲ್ಲಿಸುತ್ತೇನೆ' ಎಂದು, ಅಂದರೆ ಈ ನಾಣ್ಣುಡಿಯ ಅರ್ಥ ನನಗೆ ನೀರು ಹಾಕಿ, ಗೊಬ್ಬರ ಹಾಕಿ ಚೆನ್ನಾಗಿ ಪೋಷಿಸು. ಸಮೃದ್ಧವಾಗಿ ಗೊನೆ ತೆಗೆದು, ಆರ್ಥಿಕವಾಗಿ ನಿನ್ನನ್ನು ಸಬಲರನ್ನಾಗಿ ಮಾಡುವಂತೆ ಊರಿನಲ್ಲಿ ಶ್ರೀಮಂತಿಕೆಯಿಂದ ನೀನು ಮೆರೆಯುವಂತೆ ಮಾಡುತ್ತೇನೆಂದು ಇದರ ಅರ್ಥ. ಆದರೆ ಮಸಲವಾಡದ ಶಿವಕುಮಾರ ಈತನ ವಿಚಾರದಲ್ಲಿ ಅದು ಸಂಪೂರ್ಣವಾಗಿ ಸುಳ್ಳಾಗಿದೆ. ಉತ್ತಮ ಬೆಲೆ ಸಿಗದೆ, ಹಾಕಿದ ಬಂಡವಾಳದ ಅರ್ಧದಷ್ಟು ಕೂಡಾ ಬಾರದೆ, ತನ್ನ ಎಲ್ಲಾ 3 ಎಕರೆ 60 ಸೆಂಟ್ಸ್ ಬಾಳೆ ತೋಟವನ್ನು ಟ್ರ್ಯಾಕ್ಟರ್ (ಪಟ್ಲರ್) ಮೂಲಕ ನೆಲಸಮ ಮಾಡಿದ್ದಾನೆ.
ಎರಡು ಲಕ್ಷದ ಎಂಬತ್ತು ಸಾವಿರ ರೂ. ಖರ್ಚು
ತನ್ನ 3 ಎಕರೆ 60 ಸೆಂಟ್ಸ್ ಹೊಲದಲ್ಲಿ ಎರಡು ಲಕ್ಷದ ಎಂಬತ್ತು ಸಾವಿರ ರೂ. ಖರ್ಚು ಮಾಡಿ ಬಾಳೆಯನ್ನು ಹಾಕಿದ್ದು, ಮೊದಲಿಗೆ ಉತ್ತಮ ರೀತಿಯಲ್ಲಿ ಫಸಲು ಬಂದರೂ ಬೆಲೆಯಲ್ಲಿ ಭಾರೀ ಕುಸಿತ ಕಂಡು ಮೊದಲ ವರ್ಷ ಸಂಪೂರ್ಣವಾಗಿ ನಷ್ಟವಾಗಿತ್ತು. ಇಲ್ಲಿನ ಅಕ್ಕಪಕ್ಕದಲ್ಲಿ ಕೇಳುವವರೇ ಇಲ್ಲದಂತಾಗಿದೆ. ಇಲ್ಲಿಂದ ಹೊಸಪೇಟೆಗೆ ಗಾಡಿ ಬಾಡಿಗೆ ಮಾಡಿಕೊಂಡು ಹೋದರು. ಅಲ್ಲಿ ಒಂದು ಕೆಜಿಗೆ 25 ದಂತೆ ಮಾರಾಟವಾಯಿತು. ಗಾಡಿ ಬಾಡಿಗೆ ಖರ್ಚು ವೆಚ್ಚ ಸೇರಿದಂತೆ ಲೆಕ್ಕ ಹಾಕಿದರೆ ಬಾಳೆಯ ಬೆಳೆಗಿಂತ ಬಾಡಿಗೆ ಖರ್ಚು ಹೆಚ್ಚಾಗುತ್ತದೆ.
ಒಂದು ಲೋಡ್ ಗಾಡಿಯನ್ನು ತೆಗೆದುಕೊಂಡು ಹೋದರೆ ಹತ್ತರಿಂದ ಹನ್ನೆರಡು ಸಾವಿರ ರೂ. ಸಿಗುತ್ತಿತ್ತು. ಮೊದಲನೇ ವರ್ಷ ಸಾಕಷ್ಟು ನಷ್ಟ ಅನುಭವಿಸಿದರೂ ಧೃತಿಗೆಡದೆ ಮುಂದಿನ ವರ್ಷ ಲಾಭ ಸಿಗುವ ನಿರೀಕ್ಷೆಯಿಟ್ಟುಕೊಂಡು ಪುನಃ ಗೊಬ್ಬರ ನೀರು ಹಾಕುತ್ತಾ ಚೆನ್ನಾಗಿ ಲಾಲನೆ-ಪಾಲನೆ ಮಾಡಿ ಪೊಷಣೆ ಮಾಡಿದರು.
ಕೆಜಿಗೆ 12 ರಿಂದ15 ರೂಪಾಯಿ
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಒಳ್ಳೆಯ ಫಸಲು ಬಂದ ಸಮಯದಲ್ಲಿ ಲಾಕ್ಡೌನ್ ಜಾರಿಯಾದ ಹಿನ್ನೆಲೆ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದಂತಾಗಿ ಕೆಜಿಗೆ 12 ರಿಂದ15 ರೂಪಾಯಿ ಮಾರಾಟವಾಯಿತು. ಎರಡು ವರ್ಷದಲ್ಲಿ ಬಾಳೆತೋಟದಿಂದ ಇವರಿಗೆ ಬಂದ ಹಣ 80 ಸಾವಿರ ರೂ ಅಷ್ಟೇ, ಅಂದರೆ ಎರಡು ವರ್ಷದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ನಷ್ಟ ಅನುಭವಿಸಿದ್ದು, ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಒಂದು ಕಡೆ ಹಾಕಿದ ಬಂಡವಾಳವು ಬಾರದೆ, ಮತ್ತೊಂದು ಕಡೆ ತೋಟಗಾರಿಕೆಯ ಇಲಾಖೆಯ ವತಿಯಿಂದ ಸಹಾಯಧನದ ರೂಪದಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡ ಹಣವು ಬಾರದೆ, ಕಂಗಾಲಾಗಿ ನೋವಿನಿಂದ ಜಿಗುಪ್ಸೆಗೊಂಡು ಇಡೀ ತನ್ನ ಎಲ್ಲಾ ಬಾಳೆಯನ್ನು ಪಟ್ಲರ (ಟ್ರ್ಯಾಕ್ಟರ್) ಮೂಲಕ ನೆಲಸಮ ಮಾಡಿದ್ದಾನೆ.
Recommended Video
ಸರ್ಕಾರ ಸ್ವಲ್ಪಮಟ್ಟಿಗಾದರೂ ಸಹಾಯ ಮಾಡಬೇಕು
3 ಎಕರೆ 60 ಸೆಂಟ್ಸ್ ಹೊಲದಲ್ಲಿ ಬಾಳೆ ಗಿಡ ನೆಡಲು 2,80,000 ರೂಪಾಯಿ ಖರ್ಚಾಗಿದೆ. ಉತ್ತಮ ಫಸಲು ಬಂದರೂ ಸರಿಯಾಗಿ ಬೆಲೆ ಸಿಗದೆ, ಸಾಕಷ್ಟು ನಷ್ಟವಾಗಿದೆ. ಬಾಳೆ ತೋಟಕ್ಕೆ ನೀರು ಹಾಯಿಸಲು ತೋಟಗಾರಿಕೆ ಇಲಾಖೆಯ ವತಿಯಿಂದ ಸಬ್ಸಿಡಿಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಮಾಡಿಕೊಂಡಿದ್ದೆ. ಉತ್ತಮ ಬೆಲೆ ಸಿಗದೆ, ತೋಟಗಾರಿಕೆ ಇಲಾಖೆಯ ಸಬ್ಸಿಡಿ ಹಣ ಬಾರದೆ ಕಂಗಾಲಾಗಿ ಸಂಪೂರ್ಣವಾಗಿ ಬಾಳೆಯನ್ನು ನೆಲಸಮ ಮಾಡಿದೆ. ಸರ್ಕಾರ ಸ್ವಲ್ಪಮಟ್ಟಿಗಾದರೂ ನಮ್ಮ ಸಹಾಯಕ್ಕೆ ಬಂದು ನಷ್ಟವನ್ನು ತುಂಬಿಕೊಡುವ ಕೆಲಸ ಮಾಡಬೇಕು ಬೇಕೆಂದು ಮಾಸಲವಾಡ ಶಿವಕುಮಾರ ಆಗ್ರಹಿಸಿದ್ದಾರೆ.