ಮೈಸೂರಿನಲ್ಲಿ ಕೃಷಿ ಮಸೂದೆ ಹಿಂಪಡೆಯುವಂತೆ ರೈತಪರ ಸಂಘಟನೆಗಳ ಹೋರಾಟ
ಮೈಸೂರು, ಸೆಪ್ಟೆಂಬರ್ 25: ಕೇಂದ್ರ ಮತ್ತು ರಾಜ್ಯ ಸರ್ಕಾರ, ರೈತ ಹಾಗೂ ಕೃಷಿ ಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿಯಾದ ಮಸೂದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಇಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದವು.
ಕರ್ನಾಟಕ ಸರ್ಕಾರ ಇತ್ತೀಚೆಗೆ ಘೋಷಿಸಿದ ಕೃಷಿ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ 2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ 2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020, ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ 2020 ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಮುಂತಾದ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯಬೇಕು. ಅವುಗಳನ್ನು ಶಾಸನಗಳನ್ನಾಗಿ ರೂಪಿಸುವ ಪ್ರಯತ್ನಗಳನ್ನು ತಕ್ಷಣವೇ ಕೈಬಿಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ ಸೇರಿದಂತೆ ಸಂಘಟನೆಗಳು ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆ ಚಳವಳಿ ನಡೆಸಿದವು.
ಕೃಷಿ ಮಸೂದೆ ವಿರೋಧಿಸಿ ಭಾರತ ಬಂದ್: ಯಾವ ರಾಜ್ಯದಲ್ಲಿ ಹೇಗಿದೆ ಚಿತ್ರಣ?
ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಈ ಕರಾಳ ಕಾಯ್ದೆಯಿಂದ ಬಾಧಿತರಾಗಿರುವ ಎಲ್ಲ ಜನರು, ಸಮುದಾಯಗಳು ಸ್ವಯಂ ಪ್ರೇರಣೆಯಿಂದ ತಮ್ಮ ಎಲ್ಲಾ ಕೆಲಸ ಕಾರ್ಯ ಮತ್ತು ವಹಿವಾಟು ಸ್ಥಗಿತಗೊಳಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಜೆಪಿಸಿಗಳಿಗೆ ಒಪ್ಪಿಸಿ ಹಾಗೂ ಸಾರ್ವಜನಿಕವಾಗಿ ಚರ್ಚಿಸಿ ನಂತರ ಪಾರ್ಲಿಮೆಂಟಿನಲ್ಲಿ ವಿವರವಾಗಿ ಪರಿಶೀಲಿಸಿ ಸಾವಧಾನವಾಗಿ ಈ ಮಸೂದೆಗಳ ಕುರಿತು ನಿರ್ಧರಿಸಬಹುದಾಗಿತ್ತು. ಇಷ್ಟೊಂದು ಅವಸರದಿಂದ, ಅದೂ ಕೋವಿಡ್-19ನಿಂದ ತೀವ್ರವಾಗಿ ಬಾಧಿತರಾಗಿರುವಾಗ ಇದರ ಕುರಿತು ಗಮನ ಹರಿಸಿ ಜನತೆಯನ್ನು ರಕ್ಷಿಸುವ ಬದಲು ಇಷ್ಟೊಂದು ಅವಸರ ಮತ್ತು ಬಲವಂತವಾಗಿ ಪಾರ್ಲಿಮೆಂಟ್ ನೀತಿಗಳನ್ನು ಉಲ್ಲಂಘಿಸಿ ಈ ಬಿಲ್ ಗಳನ್ನು ದೇಶದ ಮೇಲೆ ಹೇರುವ ಅವಶ್ಯಕತೆಯಾದರೂ ಏನಿತ್ತು? ಯಾರ ಒತ್ತಡವಿತ್ತು? ಯಾರನ್ನು ತೃಪ್ತಿಪಡಿಸಬೇಕಿತ್ತು ಎಂದು ಪ್ರಶ್ನಿಸಿದರು.
ಮಸೂದೆ ವಿರುದ್ಧ ಪ್ರತಿಭಟಿಸುವ ಶಕ್ತಿಯೂ ಇಲ್ಲ ರೈತರ ಸ್ಥಿತಿ
ಒಂದು ವೇಳೆ ಸರ್ಕಾರ ತನ್ನ ಹಟವನ್ನು ಮುಂದುವರಿಸಿ ಸುಗ್ರೀವಾಜ್ಞೆಗಳನ್ನು ಕಾಯ್ದೆಯನ್ನಾಗಿಸಲು ಮುಂದಾದಲ್ಲಿ ಸ್ವಯಂ ಪ್ರೇರಿತ ಬಂದ್ ಮಾತ್ರವಲ್ಲ ಮತ್ತಷ್ಟು ತೀವ್ರವಾಗಿ ಚಳವಳಿಯನ್ನು ಸಂಘಟಿಸುವುದಾಗಿ ಎಚ್ಚರಿಕೆ ನೀಡಿದರು. ಭೂಸುಧಾರಣಾ ಕಾಯಿದೆ ತಿದ್ದುಪಡಿ ಹಿಂಪಡೆಯಬೇಕೆಂದು ರಾಜ್ಯ ಸರ್ಕಾರಕ್ಕೆ ಈ ಸಂಜೆಯವರೆಗೆ ಗಡುವು ನೀಡಿದ್ದೇವೆ. ಇಲ್ಲದಿದ್ದರೆ ಮುಂದೆ ರಾಜ್ಯ ವ್ಯಾಪ್ತಿಯಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.