ರೈತ ವಿರೋಧಿ ರಾಜಕಾರಣಿಗಳಿಗೆ ಪ್ರವೇಶವಿಲ್ಲ; ಉತ್ತರಾಖಂಡ ಗ್ರಾಮಸ್ಥರ ವಿಭಿನ್ನ ಪ್ರತಿಭಟನೆ
ಉತ್ತರಾಖಂಡ, ಜನವರಿ 12: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಉತ್ತರಾಖಂಡದ ಬಾಝ್ಪುರದಲ್ಲಿನ ಜನರು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ವಿರೋಧಿ ರಾಜಕಾರಣಿಗಳನ್ನು ನಮ್ಮ ಗ್ರಾಮಕ್ಕೆ ಬಿಟ್ಟುಕೊಳ್ಳುವುದಿಲ್ಲ ಎಂದು ಶಪಥ ಮಾಡಿ ಹಳ್ಳಿಯ ಮುಂದೆಯೇ ಬ್ಯಾನರ್ ಹಾಕಿದ್ದಾರೆ.
"ರೈತ ವಿರೋಧಿ ರಾಜಕೀಯ ನಾಯಕರಿಗೆ ಈ ಹಳ್ಳಿಗೆ ಪ್ರವೇಶವಿಲ್ಲ" ಎಂದು ಬ್ಯಾನರ್ ಹಾಕಿರುವ ಗ್ರಾಮಸ್ಥರು, ನಮ್ಮ ಹಳ್ಳಿಗಳಿಗೆ ಅಂಥ ರಾಜಕಾರಣಿಗಳ ಅವಶ್ಯಕತೆ ಇಲ್ಲ. ಹೀಗಾಗಿ ಅವರನ್ನು ಒಳಗೆ ಬಿಡುವುದಿಲ್ಲ ಎಂದಿದ್ದಾರೆ.
"ಸುಪ್ರೀಂ ಕೋರ್ಟ್ ನೇಮಿಸುವ ಯಾವ ಸಮಿತಿ ಸಭೆಗಳಿಗೂ ನಾವು ಹೋಗಲ್ಲ"
ಈಚೆಗೆ ಉತ್ತರಾಖಂಡದ ಶಿಕ್ಷಣ ಸಚಿವ ಅರವಿಂದ್ ಪಾಂಡೆ ಅವರು ಕಾರ್ಯಕ್ರಮದ ಸಲುವಾಗಿ ಗ್ರಾಮಕ್ಕೆ ಆಗಮಿಸಿದ್ದು, ಅವರನ್ನು ಗ್ರಾಮಸ್ಥರು ತಡೆಹಿಡಿದಿದ್ದರು. ಆನಂತರ ಈ ಬ್ಯಾನರ್ ಅಳವಡಿಸಿದ್ದಾರೆ. "ರೈತ ವಿರೋಧಿ ರಾಜಕಾರಣಿಗಳು ನಮ್ಮ ಹಳ್ಳಿಗೆ ಬರಲು ನಾವು ಬಿಡುವುದಿಲ್ಲ. ಅವರು ಬಂದರೆ ತಡೆಯುತ್ತೇವೆ. ನಮ್ಮ ಭಾವನೆಗಳೊಂದಿಗೆ ಆಟವಾಡಲು ಅವಕಾಶ ನೀಡುವುದಿಲ್ಲ" ಎಂದಿದ್ದಾರೆ ರೈತ ಮೀನಾಕ್ಷಿ ಸೂರ್ಯ.
"ಕೇಂದ್ರ ಪರಿಚಯಿಸಿರುವ ಕೃಷಿ ಕಾಯ್ದೆಗಳನ್ನು ನಾವು ವಿರೋಧಿಸುತ್ತೇವೆ. ಈ ಕಾಯ್ದೆಗಳನ್ನು ಬೆಂಬಲಿಸುವ ಯಾವುದೇ ನಾಯಕರು ಇಲ್ಲಿಗೆ ಬಂದರೂ ನಾವು ಸಹಿಸುವುದಿಲ್ಲ. ಈ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಅವರ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ" ಎಂದಿದ್ದಾರೆ. ಇಲ್ಲಿನ ಶಿವಪುರಿ ಹಳ್ಳಿಯಲ್ಲಿಯೂ ಇಂಥದ್ದೇ ಬ್ಯಾನರ್ ಹಾಕಲಾಗಿದೆ.
ಬಾಝ್ಪುರ ಹಳ್ಳಿಯಲ್ಲಿನ ಹಲವು ರೈತರು ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ.