ಕೃಷಿ ಇಲಾಖೆಯಿಂದ ರೈತರಿಗೆ ಉಪಯುಕ್ತ ಮಾಹಿತಿ
ಕರ್ನಾಟಕ ರಾಜ್ಯ ಕೃಷಿ ಇಲಾಖೆ ರೈತರಿಗೆ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದೆ. ವಿವಿಧ ಬೆಳೆಗಳನ್ನು ಬೆಳೆಯುತ್ತಿರುವ ರೈತರು ಇದರ ಸದುಪಯೋಗಪಡಿಸಿಕೊಳ್ಳಬಹುದು.
Recommended Video
ಸೂರ್ಯಕಾಂತಿ ಬಿತ್ತನೆಯ ನಂತರ 10-15 ದಿನಗಳೊಳಗಾಗಿ ಗುಂಡಿಗೆ ಒಂದರಂತೆ ಆರೋಗ್ಯವಾದ ಒಂದು ಸಸಿಯನ್ನು ಬಿಟ್ಟು ಮಿಕ್ಕ ಸಸಿಗಳನ್ನು ಕಿತ್ತು ಹಾಕಿ. ಅಗತ್ಯ ಪ್ರಮಾಣದ ಪೊಟ್ಯಾಷ್ ಬಳಸುವುದರಿಂದ ಸಸ್ಯಗಳಲ್ಲಿ ಕೀಟ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ, ನೀರಿನ ಕೊರತೆಯನ್ನು ತಡೆದುಕೊಳ್ಳುವ ಶಕ್ತಿ ಹೆಚ್ಚುತ್ತದೆ. ಫಸಲಿನ ಗುಣಮಟ್ಟ ಹೆಚ್ಚುತ್ತದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತದೆ.
ರೈತರಿಂದ ನೇರ ಗ್ರಾಹಕರಿಗೆ: ಹೀಗೊಂದು ಹೆಜ್ಜೆ...
ನೆಲಗಡಲೆ ಬೆಳೆಯಲ್ಲಿ ಕಂಡುಬರುವ ಕೆಂಪು ತಲೆ ಕಂಬಳಿ ಹುಳುಗಳ ಸಮರ್ಥ ನಿರ್ವಹಣೆಗಾಗಿ ಬಿತ್ತನೆ ಮೊದಲ್ಗೊಂಡು ಬೆಳವಣಿಗೆ ಕಾಲಾವಧಿವರೆಗೆ ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. ಮಳೆಯಾಶ್ರಿತ ಪ್ರದೇಶದಲ್ಲಿ ಹತ್ತಿ ಬಿತ್ತನೆ ನಂತರ 3-5 ಬಾರಿ ಆಳವಾಗಿ ಎಡೆ ಹೊಡೆಯುವುದರಿಂದ ತೇವಾಂಶ ಸಂರಕ್ಷಣೆಯ ಜೊತೆ ಕಳೆಯನ್ನು ಸಹ ನಿಯಂತ್ರಿಸಬಹುದು.
ಬೆಳೆಗಳಿಗೆ ರಸಗೊಬ್ಬರ ಕೊಡುವುದು ಲಾಭದಾಯಕ
ಬತ್ತದ ಬೆಳೆಯಲ್ಲಿ ನೀರಿನ ಮಿತ ಬಳಕೆ ಹಾಗೂ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಲು ಶ್ರೀ ಪದ್ಧತಿಯಲ್ಲಿ ಬೇಸಾಯ ಮಾಡುವುದು. ಹೆಸರು ಕಾಯನ್ನು ಒಣಗಿದ ತಕ್ಷಣವೇ ಕೊಯ್ಲು ಮಾಡುವುದರಿಂದ ಕಾಳುಗಳು ಗಟ್ಟಿಯಾಗುವುದನ್ನು ಕಡಿಮೆ ಮಾಡಬಹುದು. ಖುಷ್ಕಿಯಲ್ಲಿ ಬಿತ್ತನೆ ಮಾಡುವ ಯಾವುದೇ ಬೆಳೆಯನ್ನು ಇಳಿಜಾರಿಗೆ ಅಡ್ಡಲಾಗಿ ಅಗತ್ಯ ಪ್ರಮಾಣದ ಅಂತರವುಳ್ಳ ಸಾಲುಗಳಲ್ಲಿ ಬಿತ್ತನೆ ಮಾಡಬೇಕು.
ಮಣ್ಣು ಪರೀಕ್ಷಾ ಫಲಿತಾಂಶಗಳನ್ನಾಧರಿಸಿ ಬೆಳೆಗಳಿಗೆ ರಸಗೊಬ್ಬರ ಕೊಡುವುದು ಲಾಭದಾಯಕ. ಶುಷ್ಕ ಹವೆ ಇರುವಾಗ ಸಾರಜನಕ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ಕೊಡುವ ಬದಲಾಗಿ ಸಿಂಪರಣೆ ಮೂಲಕ ಒದಗಿಸುವುದು ಉತ್ತಮ. ಆಮ್ಲದಿಂದ ಸಂಸ್ಕರಿಸಿದ ಗುಂಜು ರಹಿತ ಹತ್ತಿ ಬೀಜಗಳನ್ನು ಉಪಯೋಗಿಸುವುದರಿಂದ ಒಂದೇ ಸಮನಾಗಿ ಬೀಜ ಮೊಳಕೆಯಾಗುವುದಲ್ಲದೇ ನಿರೀಕ್ಷಿಸಿದಷ್ಟು ಸಸಿ ನಿಲ್ಲುತ್ತದೆ.
ರಾಸಾಯನಿಕ ರೋಗನಾಶಕಗಳನ್ನು ಮಣ್ಣಿಗೆ ಸೇರಿಸಬಾರದು
ಕಬ್ಬು ಬೆಳೆಯಲ್ಲಿ ಕಂಡು ಬರುವ ಕಾಂಡ ಕೊರೆಯುವ ಹುಳುವಿನ ಹತೋಟಿಗೆ ಟ್ರೈಕೋಗ್ರಾಮ ಪರತಂತ್ರ ಜೀವಿಯ ಮೊಟ್ಟೆಗಳ ಹಾಳೆಯನ್ನು ಕಬ್ಬಿನ ಎಲೆಗಳಿಗೆ ಸಿಕ್ಕಿಸಬೇಕು. ಸೂಕ್ಷ್ಮ ಜೀವಿಗಳನ್ನು ಬಳಸುವಾಗ ಇತರೆ ರಾಸಾಯನಿಕ ರೋಗನಾಶಕಗಳನ್ನು ಮಣ್ಣಿಗೆ ಸೇರಿಸಬಾರದು. ರಾಸಾಯನಿಕ ಗೊಬ್ಬರಗಳೊಂದಿಗೆ ಮಿಶ್ರಣ ಮಾಡಿ ಉಪಯೋಗಿಸಬಾರದು.
ಬಿತ್ತನೆ ಸಮಯದಲ್ಲಿ ಪೋರೇಟ್ 10ಜಿ ಹರಳನ್ನು ಬಳಸಿ ಬೇರುಹುಳುಗಳನ್ನು ಹತೋಟಿ ಮಾಡಿ. ಪ್ರತಿ ಕಿ. ಗ್ರಾಂ ಸೂರ್ಯಕಾಂತಿ ಬಿತ್ತನೆ ಬೀಜಕ್ಕೆ 5 ಗ್ರಾಂ ಇಮಿಡಾಕ್ಲೋಪ್ರಿಡ್ 70 ಡಬ್ಲೂ.ಎಸ್ ದಿಂದ ಬೀಜೋಪಚಾರ ಮಾಡಿ 14 ತಿಂಗಳವರೆಗೆ ಸಂಗ್ರಹಿಸಿದಾಗ್ಯೂ ಉತ್ತಮ ಮೊಳಕೆ ಪ್ರಮಾಣವನ್ನು ಕಾಪಾಡಬಹುದು.
ಬಿಟಿ ಬಗ್ಗೆ ವಕಾಲತ್ತು; ರಾತ್ರಿ ಕಂಡ ಬಾವಿಗೆ ಹಗಲು ಬಿದ್ದ ರೈತರು...
ಒಂದೇ ಬೆಳೆಗಿಂತ ಮಿಶ್ರ ಬೆಳೆ ಬೆಳೆಯುವುದು ಉಪಯುಕ್ತ
ಸೂರ್ಯಕಾಂತಿ ಬೆಳೆಗೆ ಶಿಫಾರಸ್ಸು ಮಾಡಿದ ಶೇ. ಅರ್ಧದಷ್ಟು ಪೋಷಕಾಂಶಗಳನ್ನು ಎರೆಹುಳು ಗೊಬ್ಬರ ಮತ್ತು ಕೊಟ್ಟಿಗೆ ಗೊಬ್ಬರಗಳ ಮೂಲಕ ಹಾಗೂ ಉಳಿದರ್ಧವನ್ನು ರಾಸಾಯನಿಕ ಗೊಬ್ಬರಗಳ ಮೂಲಕ ಕೊಡುವುದರಿಂದ ಶೇ. 50ರಷ್ಟು ರಾಸಾಯನಿಕ ಗೊಬ್ಬರಗಳ ಮೇಲಾಗುವ ವೆಚ್ಚವನ್ನು ಕಡಿಮೆ ಮಾಡಿ ಭೂಮಿಯ ಫಲವತ್ತತೆಯನ್ನು ಹೆಚಿಸ್ಚಬಹುದಾಗಿದೆ.
ಕಬ್ಬಿನಲ್ಲಿ ಹನಿ ನೀರಾವರಿ ಪದ್ದತಿಯಿಂದ ಶೇ. 40 ರಷ್ಟು ನೀರನ್ನು ಉಳಿತಾಯ ಮಾಡಬಹುದು. ಭೂಮಿಯ ಸಮತಟ್ಟು ಮಾಡುವುದರಿಂದ ನೀರಿನ ಉಳಿತಾಯವಾಗುವುದಲ್ಲದೇ, ಬೆಳೆಯ ಇಳುವರಿ ಕೂಡ ಗಣನೀಯವಾಗಿ ಹೆಚ್ಚಾಗುವುದು.
ಒಂದೇ ಬೆಳೆಗಿಂತ ಮಿಶ್ರ ಬೆಳೆ ಬೆಳೆಯುವುದು ಉಪಯುಕ್ತ. ಒಂದೇ ಬೆಳೆ ಬೆಳೆಯುವುದರಿಂದ ಆಗುವ ಸಂಪೂರ್ಣ ಹಾನಿಯನ್ನು ಮಿಶ್ರ ಬೆಳೆ ಕಡಿಮೆ ಮಾಡುತ್ತದೆ. ಗೊಣ್ಣೆಹುಳು ಭಾದಿತ ಹೊಲಗಳಲ್ಲಿ ಜೂನ್-ಜುಲೈ ತಿಂಗಳುಗಳಲ್ಲಿ ಮೆಟಾರೈಜಿಯಂ ಅನಿಸೋಪಿಯೆ ಎಂಬ ಕೀಟನಾಶಕ ಶಿಲೀಂದ್ರನಾಶಕವನ್ನು 4-8 ಕಿ.ಗ್ರಾಂ ಅನ್ನು ಕೊಳೆತ ಕೊಟ್ಟಿಗೆ ಗೊಬ್ಬರದೊಡನೆ ಸೇರಿಸಿ ಮಣ್ಣಿನಲ್ಲಿ ಬೆರೆಸಬೇಕು.
ಸಾಮೆ ಬೆಳೆಯನ್ನು ರಾಗಿಯ ಜೊತೆ ಬೆಳೆಯಬಹುದು
ಸಾಮೆ ಹಾಗೂ ಹಾರಕ ಬೆಳೆಯ ಬಿತ್ತನೆಗೆ ಜುಲೈ ಮಾಹೆಯು ಸೂಕ್ತವಾಗಿದ್ದು, ಸಾಮೆ ಬೆಳೆಯನ್ನು ಪೂರ್ಣ ಬೆಳೆಯಾಗಿಯೂ, ರಾಗಿಯ ಜೊತೆ ಮಿಶ್ರ ಬೆಳೆಯಾಗಿಯೂ ಬೆಳೆಯಬಹುದು. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ವಿವಿಧ ಬೆಳೆಗಳನ್ನು ಅಧಿಸೂಚಿಸಲಾಗಿದ್ದು, ಈ ಯೋಜನೆಯಡಿ ರೈತರು ಪಾಲ್ಗೊಳ್ಳಲು ಕೊನೆಯ ದಿನಾಂಕಗಳು 4 ಹಂತಗಳಲ್ಲಿದ್ದು ಜಿಲ್ಲಾವಾರು ಬೆಳೆವಾರು ಕೊನೆಯ ದಿನಾಂಕದ ವಿವರಗಳನ್ನು ತಮ್ಮ ಜಿಲ್ಲೆಗಳಲ್ಲಿ ಪಡೆಯಬಹುದು.
ಮೆಕ್ಕೆಜೋಳ ಬೆಳೆಯಲ್ಲಿ ಸೈನಿಕ ಹುಳುವಿನ ಹೊಸ ಪ್ರಬೇಧ (Spodoptera frugiperda) ನಿರ್ವಹಣೆಗೆ ಸೂಕ್ತ ಕ್ರಮಗಳನ್ನು ವಹಿಸಿ ಇತರೆಡೆಗೆ ಪ್ರಸರಣ ಆಗದಂತೆ ಕ್ರಮವಹಿಸಲು ಹಾಗೂ ಕೀಟವನ್ನು ನಿರ್ಮೂಲನೆ ಮಾಡಲು ಕೆಳಕಂಡಂತೆ ಕ್ರಮ ವಹಿಸುವುದು.
ಕಿಸಾನ್ ಕರೆ ಕೇಂದ್ರಕ್ಕೆ ಉಚಿತ ಕರೆ ಮಾಡಬಹುದು
ವ್ಯಾಪಕವಾಗಿ ಪೀಡೆ ಸಮೀಕ್ಷೆಯನ್ನು ಕೈಗೊಂಡು, ಕೀಟದ ಉಪಸ್ಥಿತಿ ಮತ್ತು ಹರಡುವಿಕೆ ಬಗ್ಗೆ ನಿಗಾ ವಹಿಸುವುದು.
ತತ್ತಿ ಪರಾವಲಂಬಿ ಕೀಟಗಳಾದ ಟ್ರೈಕೋಗ್ರಾಮ ಮತ್ತು ಟೆಲಿಮೋನಸ್ ಬಿಡುಗಡೆಗೊಳಿಸಿ ಕೀಟದ ತತ್ತಿಗಳನ್ನು ನಾಶಪಡಿಸುವುದು.
ಕೀಟನಾಶಕಗಳಾದ ಡೈಮೀಥೋಯೇಟ್ 30% ಇ.ಸಿ ಅಥವಾ ಥಯಾಮೆಥೋಕ್ಸಿಮ್ 12.6% + ಲಾಮ್ಡಸಹಲೋಥ್ರಿನ್ 9.5% ಝಡ್.ಸಿ ಬಳಸಿ ಕೀಟವನ್ನು ಹತೋಟಿ ಮಾಡುವುದು.
ಎನ್.ಪಿ.ವಿ. ನುಮೇರಿಯಾ ರಿಲೈ ಅಥವಾ ಮೆಟಾರೈಜಿಮ್ ಅನೈಸೋಪ್ಲಿಯೇ ಜೈವಿಕ ನಿಯಂತ್ರಣಕಾರಕಗಳನ್ನು ಬಳಸುವುದು.
ಹೆಚ್ಚಿನ ಮಾಹಿತಿಗೆ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನಾಗಲೀ ಅಥವಾ ರೈತ ಸಹಾಯವಾಣಿ ಕೇಂದ್ರ 1800 425 3553 ಇಲ್ಲವೇ ಕಿಸಾನ್ ಕರೆ ಕೇಂದ್ರ 1800 180 1551ಗೆ ಉಚಿತ ಕರೆ ಮಾಡಬಹುದು.