ಲಾಕ್ಡೌನ್ ಎಫೆಕ್ಟ್: ಹಿರಿಯೂರಿನಲ್ಲಿ ಬಾಳೆ ತೋಟವನ್ನೇ ನಾಶಮಾಡಿದ ರೈತ
ಚಿತ್ರದುರ್ಗ, ಜೂನ್ 2: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ದಿಂಡವಾರ ಗ್ರಾಮದ ಚಂದ್ರಗಿರಿ ಎಂಬ ರೈತನೊಬ್ಬ ಸೂಕ್ತ ಬೆಲೆ ಸಿಗದಿದ್ದಕ್ಕೆ ಟ್ರ್ಯಾಕ್ಟರ್ ಮೂಲಕ ಬಾಳೆ ತೋಟವನ್ನು ನಾಶ ಮಾಡಿದ್ದಾನೆ.
ರೈತ ತನ್ನ ಹೊಲದಲ್ಲಿ ನೀರಿನ ಕೊರತೆಯ ನಡುವೆಯೂ ಲಕ್ಷ ಲಕ್ಷ ಖರ್ಚು ಮಾಡಿ ಸುಮಾರು 1500 ಪಚ್ಚೆ ಬಾಳೆ ಹಾಗೂ ಪುಟ್ಬಾಳೆ ಬೆಳೆದಿದ್ದರು. ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಲಾಕ್ಡೌನ್ ಬರಸಿಡಿಲಿನಂತೆ ಅಬ್ಬರಿಸಿದೆ. ಸೂಕ್ತ ಮಾರುಕಟ್ಟೆ ಇಲ್ಲದೆ, ಬಾಳೆ ಖರೀದಿದಾರರು ಇಲ್ಲದೆ ಕಂಗಾಲಾಗಿರುವ ರೈತ ಬುಧವಾರ ಬೆಳಗ್ಗೆ ಬೇಸತ್ತು ಬಾಳೆತೋಟ ನಾಶ ಮಾಡಿ ಬೇಸರ ವ್ಯಕ್ತಪಡಿಸಿದ್ದಾನೆ.
ಯಾವುದೇ ಶುಭ ಸಮಾರಂಭಗಳು, ಉತ್ಸವಗಳು ಇಲ್ಲದ ಕಾರಣ ಬಾಳೆಹಣ್ಣು ಕೊಳ್ಳುವವರು ಯಾರೂ ಇಲ್ಲದಿರುವುದು ರೈತನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಂದೊಂದು ಬಾಳೆ ಗೊನೆ 15- 20 ಕೆಜಿ ತೂಕದವರೆಗೂ ಇಳುವರಿ ಬಂದಿತ್ತು ಎನ್ನಲಾಗಿದೆ.
"ಲಾಕ್ಡೌನ್ ಕಾಲದಲ್ಲಿ ಏನು ಮಾಡ್ಬೇಕು ಗೊತ್ತಿಲ್ಲ, ಸರ್ಕಾರದಿಂದ ಯಾವ ಸಹಾಯಧನ ಎಂಥದ್ದು ಇಲ್ಲ. ಇಂಥಹ ಸರ್ಕಾರಗಳನ್ನು ನಂಬಿಕೊಂಡು ಜೀವನ ಮಾಡಿ ರೈತರು ಒಬ್ಬೊಬ್ಬರೇ ಹಾಳಾಗಿ ಹೋಗುತ್ತಿದ್ದಾರೆ. ಇದರ ಬದಲಿಗೆ ಬಾಳೆಯನ್ನು ನೆಲಕ್ಕೆ ಉರುಳಿಸಲಾಗಿದೆ.
ಮೂರು ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆ ಬೆಳಿದಿದ್ವಿ'' ಎಂದು ರೈತ ಚಂದ್ರಗಿರಿ ನೋವು ತೋಡಿಕೊಂಡರು.
"ಕೊನೆಗೆ ದಿಂಡವಾರ ಕೆರೆಗೆ ನೀರು ತಂದು ಕೊಟ್ಟರೆ, ಇಂಥಹ ಹತ್ತು ಬೆಳೆಯನ್ನು ಬೆಳೆದು ಸಾಲ ತೀರಿಸುತ್ತೇವೆ. ವಾಣಿವಿಲಾಸ ಸಾಗರದಿಂದ ನೀರು ಸೇರಿಸಬಹುದು. ಆದರೆ ನಮ್ಮ ಜನನಾಯಕರಿಗೆ, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಇದೆ'' ಎನ್ನುತ್ತಾರೆ ರೈತ ಚಂದ್ರಗಿರಿ.
ಎಲ್ಲಿಂದಲ್ಲೋ ಬಂದವರನ್ನು ನಮ್ಮ ತಾಲ್ಲೂಕಿನಲ್ಲಿ ಎಂಎಲ್ಎ ಆಗುತ್ತಿದ್ದಾರೆ. ಇಂಥವರನ್ನು ಇಟ್ಟುಕೊಂಡು ನಾವು ಏನು ಮಾಡೋದು. ಅವರಿಗೂ ಬದ್ಧತೆ ಇಲ್ಲ. ಈಗಿನ ಯಾವ ರಾಜಕಾರಣಿಗೂ ಬದ್ಧತೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನೀರಿನ ಕೊರತೆಯ ಮಧ್ಯೆಯೂ, ಹಗಲು-ರಾತ್ರಿ ಎನ್ನದೇ ಬೆವರು ಸುರಿಸಿ ಬಾಳೆ ತೋಟ ಮಾಡಿದರೂ, ಬೆಲೆ ಇಲ್ಲವೆಂದರೆ ಏನು ಮಾಡಲಿ ಹೇಳಿ ಎಂದು ರೈತ ವಿಡಿಯೋದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.