ಅಕಾಲಿಕ ಮಳೆ; ಮಾವು ಫಸಲು ಕಡಿಮೆ ಸಾಧ್ಯತೆ, ರೈತರಿಗೆ ಸಲಹೆಗಳು
ಕೊಪ್ಪಳ, ಡಿಸೆಂಬರ್ 29; ಈ ವರ್ಷದ ಅಕಾಲಿಕ ಮಳೆಯಿಂದ ಹೆಚ್ಚಾದ ತೇವಾಂಶದ ಕಾರಣ ಮಾವು ಹಾಗೂ ಪೇರು ಬೆಳೆಗಳಲ್ಲಿ ಹೂ ಕಚ್ಚುತ್ತಿಲ್ಲ ಮತ್ತು ಹೂ ಉದುರುತ್ತಿದೆ. ಈ ಬಾರಿ ಮಾವಿನ ಫಸಲು ಕಡಿಮೆ ಆಗುವ ಸಾಧ್ಯತೆ ಇದೆ ಎಂದು ತೋಟಗಾರಿಕಾ ಇಲಾಖೆ ಅಂದಾಜಿಸಿದೆ.
ಡಿಸೆಂಬರ್ 22 ಮತ್ತು 23ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ , ಕೊಪ್ಪಳ ತಾಲೂಕುಗಳ ಮಾವಿನ ತೋಟಗಳಿಗೆ ಭೇಟಿ ನೀಡಿದ್ದ ತೋಟಗಾರಿಕಾ ಇಲಾಖೆ ಅಧಿಕಾರಿಗಳ ತಂಡ ಮಾವು ಬೆಳೆಗಾರರಿಗೆ ಹಲವು ಸಲಹೆಗಳನ್ನು ನೀಡಿದೆ.
ರಾಮನಗರ; ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ ಸ್ಥಾಪನೆ
ಕೊಪ್ಪಳ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜಗನ್ನಾಥ ರೆಡ್ಡಿ, ಸಹಾಯಕ ತೋಟಗಾರಿಕೆ ಅಧಿಕಾರಿ ಪಾಂಡುರಂಗ, ಯಲಬುರ್ಗಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಲಿಂಗಣ್ಣಸವರು ಮುಂತಾದವರು ಮಾವಿನ ತೋಟಗಳಿಗೆ ಭೇಟಿ ನೀಡಿದಾಗ ಹೂವು ಬಿಡದೇ ಇರುವುದು ಕಂಡುಬಂದಿದೆ.
ಒಂದು ಜಿಲ್ಲೆ, ಒಂದು ಉತ್ಪನ್ನ; ಧಾರವಾಡಕ್ಕೆ ಮಾವು
ಅಕಾಲಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದೆ. ಅಲ್ಲದೇ ಈಗ ಬಿಳುತ್ತಿರುವ ಇಬ್ಬನಿಯಿಂದ ಮತ್ತು ಕಡಿಮೆ ತಾಪಮಾನದಿಂದಾಗಿ ಮಾವು ಹಾಗೂ ಪೇರು ಬೆಳೆಗಳಲ್ಲಿ ಹೂ ಕಚ್ಚುತ್ತಿಲ್ಲ ಮತ್ತು ಹೂ ಉದುರುತ್ತಿದೆ. ಮಾವಿನ ಬೆಳೆಯಲ್ಲಿ ಕೀಟ ಮತ್ತು ರೋಗಗಳ ಬಾಧೆಯೂ ಕಂಡು ಬಂದಿದೆ.
ಡಿಸೆಂಬರ್ನಲ್ಲಿ ಮಾವು ಬೆಳೆ ನಿರ್ವಹಣೆ; ಸಲಹೆಗಳು
ಈ ಹಿನ್ನಲೆಯಲ್ಲಿ ರೈತರು ಮಾವಿನ ಗಿಡಗಳನ್ನು ಸಂರಕ್ಷಣೆ ಮಾಡುವ ಕುರಿತು ಸಲಹೆಗಳನ್ನು ನೀಡಲಾಗಿದೆ. ಗಿಡಗಳ ಸುತ್ತಲೂ ಅವುಗಳ ಆಯುಸ್ಸಿಗೆ ತಕ್ಕಂತೆ 3-6 ಅಡಿ ಸುತ್ತಲೂ ಮಡಿ ಮಾಡಿ ಮಣ್ಣನ್ನು ಸಡಿಲಗೊಳಿಸಬೇಕು. ಈ ಮಡಿಯಲ್ಲಿ ಜೀವಾಮೃತ, ಎರೆಜ ಮತ್ತು ಗೋಕೃಪಾಮೃತದಂತಹ ಸಾವಯವ ದ್ರಾವಣಗಳನ್ನು 15 ದಿನಗಳಿಗೊಮ್ಮೆ ಸುರಿಯುತ್ತಾ ಇರಬೇಕು.
ಆರ್ಕಾ ಮೈಕ್ರೋಬಿಯಲ್ ಕನ್ಸೋರ್ಷಿಯಂ ಕೂಡ ಬಳಸುವುದು ಸೂಕ್ತ. ಇದರಿಂದಾಗಿ ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಾಗುತ್ತದೆ. ಒಣಗಿದ ರೋಗಗ್ರಸ್ತ ಕೀಟದ ಬಾಧೆಗೆ ತುತ್ತಾದ ರಂಬೆ ಕೊಂಬೆಗಳನ್ನು ಕತ್ತರಿಸಿ ನಾಶಪಡಿಸಬೇಕು. ಸಾಯಂಕಾಲದ ಸಮಯದಲ್ಲಿ ತೋಟದ ನಾಲ್ಕು ಕಡೆಗೆ ಹೊಗೆ ಹಾಕಬೇಕು. ಇದರಿಂದಾಗಿ ಹೂ ಕಚ್ಚುವುದಕ್ಕೆ ಸಹಕಾರಿ. ಇದಲ್ಲದೇ ಕೆಲ ಸಸ್ಯ ಪ್ರಚೋದಕಗಳನ್ನು ತಜ್ಞರ ಸಲಹೆಯಂತೆ ಬಳಸಿದರೆ ಹೂ ಕಚ್ಚುವ ಪ್ರಮಾಣ ಹೆಚ್ಚಾಗುತ್ತದೆ. ಉದಾಹರಣೆಗೆ ಬೋರನ್, ಪ್ಲಾನೋಫಿಕ್ಸ್ ಅಲ್ಲದೇ ಎಸ್.ಆಯ್. ಫ್ಲಾವರ್ ಮತ್ತು ಜೈಮ್ ಗಳಂತಹ ಸಸ್ಯ ಪ್ರಚೋದಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇದೇ ಸಮಯದಲ್ಲಿ ಪೋಟ್ಯಾಷೀಯಂ ನೈಟ್ರೀಟ್ (13-0-45) ಮತ್ತು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ರವರು ಆವಿಷ್ಕಾರಿಸಿದ ಮಾವು ಸ್ಪೆಷಲ್ ಮಿಶ್ರಣವನ್ನು 1 ಲೀಟರ್ ನೀರಿಗೆ ಬೆರೆಸಿ 15 ದಿನಗಳು ಅಥವಾ ತಿಂಗಳಿಗೊಮ್ಮೆ ಸಿಂಪಡಿಸಿದರೆ ಹೂ ಕಚ್ಚಿ ಹೂ ಉದರದಂತೆ ಕಾಪಾಡುತ್ತದೆ. ಈ ಸಮಯದಲ್ಲಿ ಎಲೆ ತಿನ್ನುವ ಕೀಟ, ಗೂಡು ಕಟ್ಟುವ ಕೀಟ ವಿಪರೀತವಾಗಿ ಕಂಡು ಬಂದಿದೆ.
ಇವುಗಳ ಹತೋಟಿಗಾಗಿ ಬೇವಿನಣ್ಣೆ 10000 ಪಿ. ಪಿ. ಎಂ. 2 ಮಿಲಿ ಅಥವಾ ರಾಸಾಯನಿಕ ಬಳಸುವವರು ಲಾಂಬ್ಡ ಸಿಯಾಲೋಥ್ರಿನ್ ಶೇಕಡಾ 5 , 1 ಮಿ. ಲೀ. ಅಥವಾ ಕ್ವಿನಾಲಫಾಸ್ 25 ಇ.ಸಿ. 2ಮಿಲಿಯಂತಹ ಕೀಟನಾಶಕಗಳ ಜೊತೆಗೆ ರೋಗಗಳ ಹತೋಟಿಗಾಗಿ ಥಯೋಫಿನೈಟ್ ಮೀಥೈಲ್-1 ಗ್ರಾಂ ಅಥವಾ ಕಾರ್ಬೇಂಡಾಜಿಮ್ 1 ಗ್ರಾಂ ಅಥವಾ ಸಂಯುಕ್ತ ಶಿಲೀಂದ್ರನಾಶಕ ಸಾಫ-2 ಗ್ರಾಂ. 1 ಲೀ. ನೀರಿಗೆ ಬೆರೆಸಿ ಸಿಂಪಡಿಸುತ್ತಿರಬೇಕು.
ನೆಲದಿಂದ ಬುಡಕ್ಕೆ 3 ಅಡಿಯಷ್ಟು ಸಿ.ಓ.ಸಿ 100 ಗ್ರಾಂ. ಜೊತೆಗೆ ಕ್ಲೇರೋಪರಿಫಾಸ್ 20 ಇಸಿ ಕೀಟನಾಶಕವನ್ನು 5 ಮಿಲಿ. 1 ಲೀ. ನೀರಿಗೆ ಮಿಶ್ರಣ ಮಾಡಿ ಬಡ್ಡೆಗೆ ಲೇಪಿಸುವುದರಿಂದ ಗೆದ್ದಲು, ಇನ್ನಿತರ ಕೀಟಗಳನ್ನು ಹತೋಟಿಯಲ್ಲಿಡಬಹುದು.
ರೈತರು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿ ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08392-230531 ಮತ್ತು ಆಯಾ ತಾಲ್ಲೂಕು ಕಛೇರಿಗಳಲ್ಲದೇ ತೋಟಗಾರಿಕೆ ತಜ್ಞ (ಸಂಪನ್ಮೂಲ ವ್ಯಕ್ತಿ) ವಾಮನಮೂರ್ತಿ 9482672039, ಇವರನ್ನು ಸಂಪರ್ಕಿಸಬಹುದಾಗಿದೆ.