"ಬರೀ ತಿಂಗಳಲ್ಲ, ವರ್ಷಗಳವರೆಗೂ ಹೋರಾಟಕ್ಕೆ ನಾವು ಸಿದ್ಧ"
ನವದೆಹಲಿ, ಡಿಸೆಂಬರ್ 31: ಕೇಂದ್ರದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ಸಾವಿರಾರು ರೈತರು ತಿಂಗಳಿನಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಹೊಸ ವರ್ಷವೂ ಕಾಲಿಡುತ್ತಿದ್ದು, "ಸರ್ಕಾರ ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವವರೆಗೂ ನಮಗೆ ಹೊಸ ವರ್ಷವಿಲ್ಲ" ಎಂದು ರೈತ ಸಂಘಟನೆಗಳು ಹೇಳಿವೆ.
ಕಾಯ್ದೆಗಳಿಗೆ ಸಂಬಂಧಿಸಿದಂತೆ ಬುಧವಾರವಷ್ಟೇ ಕೇಂದ್ರ ಸರ್ಕಾರ ಹಾಗೂ ರೈತ ಮುಖಂಡರ ನಡುವೆ ಆರನೇ ಸುತ್ತಿನ ಮಾತುಕತೆ ನಡೆದಿದ್ದು, ರೈತರ ನಾಲ್ಕು ಬೇಡಿಕೆಗಳಲ್ಲಿ ಎರಡು ಬೇಡಿಕೆಗಳಿಗೆ ಒಮ್ಮತಕ್ಕೆ ಬರಲಾಗಿದೆ. ಈ ಕುರಿತು ಮುಂದಿನ ಮಾತುಕತೆಗೆ ಜನವರಿ 4ರಂದು ದಿನ ನಿಗದಿ ಮಾಡಲಾಗಿದೆ.
ಕೃಷಿ ಕಾಯ್ದೆ; ನಿರ್ಣಯ ಮಂಡಿಸಿದ ನಂತರ ಯು ಟರ್ನ್ ಹೊಡೆದ ಕೇರಳ ಬಿಜೆಪಿ ಶಾಸಕ
ಆದರೆ ಒಪ್ಪಿತಗೊಂಡಿರುವ ಎರಡು ಬೇಡಿಕೆಗಳಿಗಿಂತ ಮುಖ್ಯವಾದ ಎರಡು ಬೇಡಿಕೆಗಳಿವೆ. ಅವನ್ನು ಸರ್ಕಾರ ಮೊದಲು ಪೂರೈಸಲಿ. ಆಚರಣೆ ಮಾಡುವಂಥ ಖುಷಿ ವಿಷಯ ನಮಗೆ ಇನ್ನೂ ಸಿಕ್ಕಿಲ್ಲ. ಕನಿಷ್ಠ ಬೆಂಬಲ ಬೆಲೆ ಹಾಗೂ ಕೃಷಿ ಕಾಯ್ದೆಗಳ ರದ್ದತಿ ನಮ್ಮ ಮುಖ್ಯ ಬೇಡಿಕೆಗಳಾಗಿವೆ ಎಂದು ಪುನರುಚ್ಚರಿಸಿದ್ದಾರೆ ರೈತರು.
"ನಮ್ಮ ಬೇಡಿಕೆಗಳನ್ನು ಸರ್ಕಾರ ಅರಿಯಬೇಕು. ಸರ್ಕಾರಕ್ಕೆ ನಮ್ಮ ಶಕ್ತಿ ನೋಡುವ ಬಯಕೆ ಇದ್ದರೆ, ನಾವೂ ತೋರಿಸಲು ಸಿದ್ಧ. ತಿಂಗಳಿನಿಂದಲೂ ನಾವು ರಸ್ತೆ ಮೇಲೆ ಮಲಗಿದ್ದೇವೆ, ಚಳಿ ನಡುವೆಯೇ ಪ್ರತಿಭಟನೆ ಮಾಡುತ್ತಿದ್ದೇವೆ. ಈ ಪ್ರತಿಭಟನೆಯನ್ನು ತಿಂಗಳಲ್ಲ, ವರ್ಷಗಳವರೆಗೂ ಮಾಡಲು ಸಿದ್ಧ" ಎಂದು ಹೋಷಿಯಾರ್ ಪುರದ ಭೂಪಿಂದರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಈ ಬಾರಿ ಹಲವು ರೈತರು ತಮ್ಮ ಕುಟುಂಬದಿಂದ ದೂರು ಉಳಿದು ಹೊಸ ವರ್ಷವನ್ನು ಸ್ವಾಗತಿಸಬೇಕಿದೆ. ಅದರ ಬಗ್ಗೆ ನಮಗೆ ದೂರಿಲ್ಲ. ಇಲ್ಲಿರುವ ಎಲ್ಲಾ ರೈತರೂ ನಮ್ಮ ಕುಟುಂಬದವರೇ. ಒಳ್ಳೆಯ ಮಾತುಕತೆ, ಕ್ರಾಂತಿಕಾರಿ ಹಾಡುಗಳನ್ನು ಹಾಡುವ ಮೂಲಕ ಇಲ್ಲಿ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ" ಎಂದು ರೈತ ಹರ್ಜಿಂದರ್ ಸಿಂಗ್ ಉತ್ಸಾಹದಿಂದ ನುಡಿದಿದ್ದಾರೆ.
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ಸುಮಾರು 40 ರೈತ ಸಂಘಟನೆಗಳು ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ.