ಅರಣ್ಯ ಕಾನೂನಿಗೆ ಶೀಘ್ರ ತಿದ್ದುಪಡಿ; ಹೊಲದಲ್ಲಿನ ಮರ ಕಡಿಯಲು ರೈತರಿಗೆ ಯಾರ ಅನುಮತಿಯೂ ಬೇಕಿಲ್ಲ!
ಬೆಂಗಳೂರು, ಸೆ. 02: ಕಾಡು ಪ್ರಾಣಿಗಳೊಂದಿಗೆ ಮನುಷ್ಯರ ಸಂಘರ್ಷ ನಿರಂತರ. ಕಾಡು ಅಳೆದು ನಾಡು ಬೆಳದಿರುವುದು ಅದಕ್ಕೊಂದು ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಾರೋ ಮಾಡುವ ತಪ್ಪಿಗೆ ಇನ್ಯಾರೊ ಬಲಿಯಾಗುವಂತಾಗಿದೆ ಕಾಂಡಂಚಿನ ಜನರ ಜೀವನ. ಅದಕ್ಕಿಂತಲೂ ದೊಡ್ಡ ಸಮಸ್ಯೆಯನ್ನು ನಾಡಿನ ರೈತರು ಎದುರಿಸುತ್ತಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಸಂಘರ್ಷ ನಿರಂತರವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದ ಅರಣ್ಯ ಕಾಯ್ದೆಯನ್ನು ಸಡಿಲಗೊಳಿಸಿ ರೈತ ಸ್ನೇಹಿಯಾಗಿ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆೆ ಸೂಚನೆ ನೀಡಿದೆ. ಈ ಕುರಿತು ಸೂಕ್ತ ಕಾನೂನು ತಿದ್ದುಪಡಿ ತರುವಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಮಾಜಿ ಮಂತ್ರಿ ರಮೇಶ್ ಕುಮಾರ್ ಅವರು ಹಿಂದೊಮ್ಮೆ ಗರಂ ಆಗಿ ಅರಣ್ಯ ಅಧಿಕಾರಿಗಳು ವಿರುದ್ಧ ಮಾತನಾಡಿದ್ದರು. ಜೊತೆಗೆ ರೈತರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕಾನೂನಿಂದ ಆಗುತ್ತಿರುವ ಸಮಸ್ಯೆ ಹಾಗೂ ಹಾನಿಯ ಬಗ್ಗೆ ಸದನದಲ್ಲಿ ಚರ್ಚೆ ನಡೆದಿತ್ತು. ಆಗ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಅವರು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಕೊಟ್ಟಿದ್ದರು. ಆದರೆ ಆ ಸಂಘರ್ಷ ಮಾತ್ರ ಕಡಿಮೆಯಾಗಿರಲಿಲ್ಲ. ಇದೀಗ ಅದನ್ನು ಕೊನೆಗಾಣಿಸಲು ಕೇಂದ್ರ ಸರ್ಕಾರವೇ ತೀರ್ಮಾನ ಮಾಡಿದೆ.
ಕೇಂದ್ರದ ಗಮನಕ್ಕೆ ರೈತರ ಸಮಸ್ಯೆ ತಂದಿದ್ದ ಸಚಿವರು
ಕಳೆದ ತಿಂಗಳು ರಾಜ್ಯ ಸರ್ಕಾರದ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಗ್ರಿ ಫಾರೆಸ್ಟ್ ಹೆಚ್ಚಳ ಮಾಡುವ ಕುರಿತಂತೆ ನಡೆದ ಚರ್ಚೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅರಣ್ಯ ಕಾಯ್ದೆಯಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆ ಹಿನ್ನೆೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಪ್ರಿವೆನ್ಸಿವ್ ಆಫ್ ಟ್ರೀ ಆ್ಯಕ್ಟ್ 1976 ಗೆ ತಿದ್ದುಪಡಿ ತಂದು ರೈತರಿಗೆ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ಸಚಿವ ಉಮೇಶ್ ಕತ್ತಿ ಅವರು ರಾಜ್ಯದ ರೈತರ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತಂದಿದ್ದರು.
ಹಳೆಯ ಕಾಯ್ದೆ ಹೀಗೆ ಹೇಳುತ್ತದೆ!
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರಿವೆನ್ಸಿವ್ ಆಫ್ ಟ್ರೀ ಆ್ಯಕ್ಟ್ 1976 ಪ್ರಕಾರ ಯಾವುದೇ ಮರ ಕಡಿಯಲು ಕಡ್ಡಾಯವಾಗಿ ಅರಣ್ಯ ಇಲಾಖೆಯ ಅನುಮತಿ ಪಡೆಯಲೇಬೇಕು. ಒಂದು ವೇಳೆ, ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಮರ ಕಡಿದರೆ, ದಂಡದ ಸಮೇತ ಮರ ಕಡಿದವರಿಗೆ ಶಿಕ್ಷೆೆ ವಿಧಿಸಲಾಗುತ್ತದೆ. ವಿಶೇಷವಾಗಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಮರಗಳನ್ನೂ ಕಡಿಯಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ತಮ್ಮ ಸ್ವಂತ ಜಮೀನಿನಲ್ಲಿ ಬೆಳೆದ ಮರವನ್ನೂ ಕಡಿಯಲು ಜಮೀನು ಮಾಲಿಕತ್ವದ ಪಹಣಿ ಪತ್ರ ಹಾಗೂ ಎಷ್ಟು ಮರ ಯಾವ ಉದ್ದೇಶಕ್ಕೆೆ ಕಡಿಯಲಾಗುತ್ತದೆ ಎನ್ನುವುದನ್ನು ದಾಖಲೆ ನೀಡಿ, ಸಂಬಂಧಿಸಿದ ತಹಶೀಲ್ದಾರ್ನಿಂದ ಅನುಮತಿ ಪಡೆಯಬೇಕು. ಅದನ್ನು ಸಂಬಂಧಿಸಿದ ವ್ಯಾಪ್ತಿಯ ಅರಣ್ಯ ಇಲಾಖೆಯ ಸಿಬ್ಬಂದಿ ಮಹಜರು ಮಾಡಿ, ನಿರ್ಧಿಷ್ಟ ಅಳತೆ ಮರಗಳನ್ನು ಕಡಿಯಲು ಮಾತ್ರ ಅನುಮತಿ ಕೊಡಲಾಗುತ್ತಿದೆ.
ರೈತರಿಗೆ ಅರಣ್ಯ ಅಧಿಕಾರಿಗಳಿಂದ ಅನಗತ್ಯ ತೊಂದರೆ
ರೈತರು ತಮ್ಮ ಜಮೀನಿನಲ್ಲಿ ಅನಗತ್ಯ ಬೆಳೆದ ಮರಗಳು ಹಾಗೂ ಕೃಷಿಗೆ ಅಡ್ಡಿಯಾಗುತ್ತಿರುವ ಮರಗಳನ್ನು ಕಡಿಯಲೂ ಅರಣ್ಯ ಇಲಾಖೆಗೆ ಅನುಮತಿಗೆ ಅಲೆದಾಡುವುದು. ಅದಕ್ಕೆೆ ಸರಿಯಾದ ಸ್ಪಂದನೆ ಸಿಗದೇ ಇರುವುದರಿಂದ ರಾಜ್ಯದಲ್ಲಿ ರೈತರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ನಡುವೆ ನಿರಂತರ ಸಂಘರ್ಷ ನಡೆಯುತ್ತಲೇ ಇದೆ. ಅದರಿಂದ ರೈತರಿಗೆ ಅನಗತ್ಯ ತೊಂದರೆಯಾಗುತ್ತಿದೆ ಎಂಬ ಆರೋಪಗಳಿವೆ.
ಅಲ್ಲದೇ ಮರ ಕಡಿಯಲು ಅನುಮತಿ ಇಲ್ಲದಿರುವುದರಿಂದ ಕೇಂದ್ರ ಸರ್ಕಾರ ರೈತರ ಜಮೀನಿನಲ್ಲಿ ಅರಣ್ಯ ಕೃಷಿ ಮಾಡಲು ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಆಗ್ರೋ ಫಾರೆಸ್ಟ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಈ ಹಿನ್ನೆೆಲೆಯಲ್ಲಿ ರಾಜ್ಯ ಸರ್ಕಾರದ ಕಾಯ್ದೆಯನ್ನು ಸಡಿಲಗೊಳಿಸಿ ರೈತ ಸ್ನೇಹಿ ಕಾಯ್ದೆ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೇರೆ ರಾಜ್ಯಗಳಲ್ಲಿ ಹೀಗಿದೆ ಕಾಯ್ದೆ!
ಬೇರೆ ರಾಜ್ಯಗಳಲ್ಲಿ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಮರಗಳನ್ನು ಕಡಿಯಲು ಕರ್ನಾಟಕದಲ್ಲಿರುವಷ್ಟು ಬಿಗಿಯಾದ ನಿಯಮಗಳಿಲ್ಲ. ಅಲ್ಲಿ ಒಬ್ಬ ರೈತ ತನ್ನ ಹೊಲದಲ್ಲಿನ ಮೂರು ಮರ ಕಡಿಯಲು ಯಾವುದೇ ಇಲಾಖೆಯ ಅನುಮತಿ ಪಡೆಯುವ ಅಗತ್ಯವಿಲ್ಲ. ಅಲ್ಲದೇ ಕಡಿದ ಮರವನ್ನು ತನ್ನ ಮನೆ ಬಳಕೆಗೆ ಪಿಠೋಪಕರಣ ಮಾಡಿಕೊಳ್ಳುವುದಕ್ಕೂ ಯಾವುದೇ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ರೈತರು ತಮ್ಮ ಹೊಲದಲ್ಲಿ ಕಡಿದ ಮರವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ನಿರ್ಧಿಷ್ಟ ಅನುಮತಿ ಪಡೆಯಬೇಕು.
ರೈತರ ಹೊಲದಲ್ಲಿನ ಗರಿಷ್ಠ 50 ಮರ ಕಡಿಯಲು ಫಾರೆಸ್ಟ್ ಗಾರ್ಡ್ಗಳೇ ಅನುಮತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಸುಮಾರು 200 ಕ್ಕಿಂತ ಹೆಚ್ಚಿನ ಮರ ಕಡಿಯರು ರೇಂಜ್ ಅಧಿಕಾರಿಯ ಅನುಮತಿ ಪಡೆಯಬೇಕೆಂಬ ನಿಯಮವಿದೆ. ಆದರೆ, ರೈತ ತನ್ನ ಹೊಲದಲ್ಲಿ ಕಡಿದ ಮರವನ್ನು ಬೇರೆಡೆಗೆ ಸ್ಥಳಾಂತರಿಸಲು ಮಾತ್ರ ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.