ಶಿವಮೊಗ್ಗ : ಉದ್ಯೋಗ ಖಾತ್ರಿ ಯೋಜನೆಯ ಯಶಸ್ಸಿನ ಕಥೆ
ಶಿವಮೊಗ್ಗ, ಆಗಸ್ಟ್. 24 : ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆ ತೋಟ ಬೆಳೆಸಲು ಸಣ್ಣ ಹಿಡುವಳಿ ಹೊಂದಿರುವ ರೈತರಿಗೆ ಉತ್ತೇಜನ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುವ ಕಾರ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.
ಉದ್ಯೊಗ ಖಾತ್ರಿ ಯೋಜನೆಯಡಿ ಕೇವಲ ಕೂಲಿ ಕೆಲಸ ನೀಡುವುದಕ್ಕಿಂತ, ರೈತರಿಗೆ ಆಸ್ತಿ ಸೃಜಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಾಂಪ್ರದಾಯಿಕವಾಗಿ ಕೃಷಿ ಕಾರ್ಯ ನಡೆಸುತ್ತಿದ್ದ ಸಣ್ಣ ಹಿಡುವಳಿದಾರರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ತೋಟ ಬೆಳೆಸಲು ಯೋಜನೆಯಡಿ ನೆರವು ನೀಡಲಾಗುತ್ತಿದೆ.
ತಮ್ಮ ಜಮೀನಿನಲ್ಲಿ ಅಡಿಕೆ ತೋಟ ನಿರ್ಮಾಣಕ್ಕೆ ಯೋಜನೆಯಡಿ ನೆರವು ಮಾತ್ರವಲ್ಲದೆ ಕೂಲಿಯನ್ನು ಸಹ ರೈತರು ಪಡೆಯುತ್ತಿದ್ದಾರೆ. ಆರಂಭದಲ್ಲಿ ಇದಕ್ಕೆ ರೈತರು ಹಿಂದೇಟು ಹಾಕಿದರೂ, ಈಗ ಬಹಳಷ್ಟು ಮುಂದೆ ತೋಟಗಾರಿಕೆಯತ್ತ ಆಸಕ್ತಿ ತೋರಿಸುತ್ತಿದ್ದಾರೆ.
'ಇನ್ನೊಂದೆರಡು ವರ್ಷಗಳಲ್ಲಿ ಅಡಿಕೆ ಬೆಳೆ ರೈತರ ಕೈಗೆ ಬರಲಿದ್ದು, ಅವರ ಆರ್ಥಿಕ ಚಿತ್ರಣ ಬದಲಾವಣೆ ನಿರೀಕ್ಷಿಸಲಾಗಿದೆ' ಎಂದು ಯೋಜನೆಯ ಮುಖ್ಯ ರೂವಾರಿಯಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್ ಹೇಳಿದ್ದಾರೆ.
ಯೋಜನೆಯಡಿ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 2,850ಎಕರೆ ಜಮೀನಿನಲ್ಲಿ ಅಡಿಕೆ ತೋಟ ಬೆಳೆಯಲು ಅನುಕೂಲ ಮಾಡಿಕೊಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಗುಂಡಿ ಹೊಡೆಯಲು, ಗಿಡ ನೆಡಲು, ಗೊಬ್ಬರ ಹಾಕಲು ಅಗತ್ಯ ಅನುದಾನ ನೀಡುವುದರ ಜೊತೆಗೆ ಕೂಲಿಯನ್ನು ಸಹ ನೀಡಲಾಗುತ್ತಿದೆ.
2016-17ನೇ ಸಾಲಿನಲ್ಲಿ 5,468ಫಲಾನುಭವಿಗಳಿಗೆ ಅಡಿಕೆ ತೋಟ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಅದರಲ್ಲಿ 1039ಫಲಾನುಭವಿಗಳು ಸ್ವಂತ ಜಮೀನಿನಲ್ಲಿ ಅಡಿಕೆ ತೋಟ ನಿರ್ಮಿಸಿದ್ದಾರೆ. 2017-18ನೇ ಸಾಲಿನಲ್ಲಿ 1400ಫಲಾನುಭವಿಗಳಿಗೆ ಅನುಮೋದನೆ ನೀಡಲಾಗಿದ್ದು, ಆ ಪೈಕಿ 400ಕ್ಕೂ ಹೆಚ್ಚು ತೋಟ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
'ಸಣ್ಣ ಮತ್ತು ಅತಿಸಣ್ಣ ರೈತರು ಭತ್ತ ಬೆಳೆಯಲು ಸಾಧ್ಯವಾಗದಿರುವ ತಮ್ಮ ಜಮೀನಿನಲ್ಲಿ ನೀರಾವರಿ ಅಥವಾ ಕೊಳವೆಬಾವಿ ಸೌಲಭ್ಯ ಹೊಂದಿದ್ದರೆ ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆ ಕೃಷಿ ಕೈಗೊಳ್ಳಬಹುದಾಗಿದೆ. ಈ ರೈತರಿಗೆ ಇತರ ಯೋಜನೆಗಳ ಅಡಿಯಲ್ಲಿ ಸಹ ನೆರವು ಒದಗಿಸಲು ಪ್ರಯತ್ನಿಸಲಾಗುವುದು' ಎಂದು ರಾಕೇಶ್ ಕುಮಾರ್ ಹೇಳಿದ್ದಾರೆ.
ಈ ತೋಟಗಳಲ್ಲಿ ರೈತರು ಅಂತರಬೆಳೆಯಾಗಿ ಬಾಳೆ, ನುಗ್ಗೆ, ತರಕಾರಿ ಮತ್ತಿತರೆ ಬೆಳೆಗಳನ್ನು ಬೆಳೆಯುತ್ತಿದ್ದು, ಅಲ್ಪ ಪ್ರಮಾಣದ ಆದಾಯವನ್ನು ಸಹ ಪಡೆಯುತ್ತಿದ್ದಾರೆ. ಅಡಿಕೆ ಬೆಳೆ ಬಂದ ಬಳಿಕ ಆರ್ಥಿಕ ಮಟ್ಟ ಸುಧಾರಿಸಲಿದ್ದು, ಯಾವುದೇ ಆತಂಕವಿಲ್ಲದೇ ರೈತರು ಜೀವನ ನಿರ್ವಹಣೆ ಮಾಡಬಹುದಾಗಿದೆ.
ತೋಟಗಾರಿಕೆಗೆ ಅನುಕೂಲವಾಗುವಂತೆ ನರೇಗಾ ಯೋಜನೆಯಡಿ ಕೊಳವೆಬಾವಿ ಮರುಪೂರಣ ಘಟಕ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಯೋಜನೆಯಡಿ ಕಳೆದ ಸಾಲಿನಲ್ಲಿ 404 ಹಾಗೂ ಪ್ರಸಕ್ತ ಸಾಲಿನಲ್ಲಿ 950ಘಟಕಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.