'ಆರೋಗ್ಯದ ಹಿತದೃಷ್ಟಿಯಿಂದ ಸಾವಯವ ಕೃಷಿ ಅಗತ್ಯ'
ಉಡುಪಿ, ಜನವರಿ 29: ನಮ್ಮ ಆರೋಗ್ಯದ ದೃಷ್ಟಿಯಿಂದ ಕೃಷಿಯಲ್ಲಿ ಹಾನಿಕಾರಕ ರಾಸಾಯನಿಕಗಳ ಬಳಕೆಯನ್ನು ತಡೆಗಟ್ಟಿ ಸಾವಯವ ಕೃಷಿಗೆ ಪದ್ಧತಿಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
Recommended Video
ಉಡುಪಿಯ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ತೋಟಗಾರಿಕೆ ಇಲಾಖೆಯು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಮಂಗಳವಾರ ಆಯೋಜಿಸಿದ್ದ ಕೈತೋಟ ಮತ್ತು ತಾರಸಿ ತೋಟ ತರಬೇತಿ ಹಾಗೂ ಮಿನಿಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಣ್ಮನ ಸೆಳೆಯುತ್ತಿದೆ ರಾಮನಗರದ ಫಲಪುಷ್ಪ ಪ್ರದರ್ಶನ
'ನಾವೇ ಬೆಳೆಯುವ ರಾಸಾಯನಿಕ ಮುಕ್ತ ತರಕಾರಿ ಮತ್ತು ಹಣ್ಣುಗಳನ್ನು ಉಪಯೋಗಿಸುವುದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಹಾಗೂ ಇತರೆ ಹಾನಿಕಾರಕ ರೋಗಗಳನ್ನು ತಡೆಗಟ್ಟಬಹುದು' ಎಂದು ತಿಳಿಸಿದರು.
ಉಡುಪಿ ತಾಲೂಕು ಪಂಚಾಯಿತಿ ಅಧ್ಯಕ್ಷ ಭುಜಂಗ ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಬಳಿಯಿರುವ ಹಣದ ಬಲದಿಂದ ಕಾಯಿಲೆಗಳನ್ನು ದುಡ್ಡು ಕೊಟ್ಟು ತೆಗೆದುಕೊಳ್ಳುತಿದ್ದೇವೆ. ನಿಜವಾಗಲೂ ಇಚ್ಚಾಶಕ್ತಿ ಇದ್ದರೆ ಚೀಲದಲ್ಲಿ ಮಣ್ಣು ಗೊಬ್ಬರ ಹಾಕಿ ಗಿಡವನ್ನು ನೆಟ್ಟು, ನಮಗೆ ಬೇಕಾದ ಹಣ್ಣು ತರಕಾರಿಗಳನ್ನು ನಾವೇ ಬೆಳೆದುಕೊಳ್ಳುತ್ತೇವೆ ಎಂದರು.
ಕೋಲಾರದ ಈ ಸ್ವಾವಲಂಬಿ ಕೃಷಿಕನಿಗೆ ಬಲ ಕೊಟ್ಟ ಜೇನು ಸಾಕಣೆ
ಮನೆಯಲ್ಲಿ ಕುಳಿತು ಸಮಯ ವ್ಯರ್ಥ ಮಾಡುವ ಬದಲು ಕೈದೋಟ ಮತ್ತು ತಾರಸಿ ತೋಟ ಮಾಡುವುದರಲ್ಲಿ, ದೈಹಿಕವಾಗಿ ಶ್ರಮಪಟ್ಟರೆ ಯಾವ ಕಾಯಿಲೆಯೂ ಬರುವುದಿಲ್ಲ ಎಂದು ತಿಳಿಸಿದರು.
ಉಡುಪಿ ನಗರಸಭೆ ಪೌರಾಯುಕ್ತರು ಆನಂದ ಚಿ.ಕಲ್ಲೋಳಿಕರ್ ಮಾತನಾಡಿ, ಆಧುನಿಕ ಯುಗದಲ್ಲಿ ಕೃಷಿ ಮಾಡುವಲ್ಲಿ ಇದ್ದಷ್ಟು ಆಸಕ್ತಿ ಈಗಿನವರಿಗೆ ಇಲ್ಲ. ಕೃಷಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ ಎಂದು ವಿಷಾದಿಸಿದರು.
ನಮ್ಮ ಉಡುಪಿಯಂತಹ ಜಿಲ್ಲೆಗಳಲ್ಲಿ ಆಸಕ್ತಿಯಿದ್ದರೂ ಜಾಗದ ಲಭ್ಯತೆ ಕಡಿಮೆ ಇರುವ ಕಾರಣ ಕೃಷಿ ಮಾಡುವುದಕ್ಕೆ ಆಗುತ್ತಿಲ್ಲ. ಆದರಿಂದ ಮನೆಯ ಪಕ್ಕದ ಜಾಗ ಹಾಗೂ ಮನೆಯ ಮೇಲಿನ ಜಾಗವನ್ನು ಉಪಯೋಗಿಸಿಕೊಂಡು ಕೈತೋಟ ಮತ್ತು ತಾರಸಿ ತೋಟ ಮಾಡಿಕೊಳ್ಳಿ. ಇದರಿಂದ ರಾಸಾಯನಿಕ ಮುಕ್ತ ತರಕಾರಿ ಮತ್ತು ಹಣ್ಣುಗಳನ್ನು ಉಪಯೋಗಿಸಬಹುದು ಎಂದು ತಿಳಿಸಿದರು.
ನಗರಸಭೆ ಸದಸ್ಯ ಪ್ರಭಾಕರ್ ಪೂಜಾರಿ ಮಾತನಾಡಿ, ರಾಸಾಯನಿಕ ಕೃಷಿಯನ್ನು ಕಡಿಮೆ ಮಾಡಿ ಸಾವಯವ ಕೃಷಿಗೆ ಬದಲಾಗಬೇಕು ಹಾಗೂ ಹೆಚ್ಚಿನ ತರಬೇತಿಗಳನ್ನು ಪಡೆದುಕೊಂಡು ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಪರಿಣತರಾದ ಡಾ.ಸಚಿನ್ ಮತ್ತು ಡಾ. ಸಂದೇಶ್ ಹಾಗೂ ಮಣಿಪುರದ ಜೋಸೆಫ್ ಕುಂದರ್ ಕೈತೋಟ ಮತ್ತು ತಾರಸಿ ತೋಟದ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ನಗರಸಭೆ ಸದಸ್ಯರಾದ ಜಯಂತಿ, ಶ್ರೀ ಗಿರಿಧರ ಆಚಾರ್ಯ, ವಿಜಯ ಹಾಗೂ ಕೃಷಿಕ ಸಮಾಜ ಉಡುಪಿ ತಾಲೂಕು ಅಧ್ಯಕ್ಷರಾದ ಸುಭಾಷಿತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂಜೀವ ನಾಯ್ಕ್, ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಸಹಾಯಕ ತೋಟಗಾರಿಕೆ ನಿರ್ದೇಶಕ ವೆಂಕಟೇಶ್ ವಂದಾನಾರ್ಪಣೆ ಮಾಡಿದ.