ಮಂಡ್ಯದಲ್ಲಿ ಸಿಡಿಲು ಬಡಿದು 25 ಕುರಿಗಳು ಬಲಿ, ಇಬ್ಬರು ಗಂಭೀರ
ದೊದ್ದನಕಟ್ಟೆ ಗ್ರಾಮದ ಶಶಿಗೌಡ ಅವರ ಪುತ್ರರಾದ ರಮೇಶ್ ಮತ್ತು ರಾಜು ಸಿಡಿಲು ಬಡಿದು ಗಾಯಗೊಂಡಿದ್ದರೆ, ಅವರಿಗೆ ಸೇರಿದ ಸುಮಾರು ಇಪ್ಪತ್ತೈದು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಮಂಡ್ಯ, ಮೇ 10: ರಾಜ್ಯಾದ್ಯಂತ ಸಿಡಿಲಿನ ಆರ್ಭಟ ಜೋರಾಗಿದೆ. ಕೆ.ಆರ್.ಪೇಟೆ ತಾಲೂಕಿನ ಗವೀಮಠದ ಬಳಿ ಕುರಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದು ಇಬ್ಬರು ರೈತರು ಗಂಭೀರ ಗಾಯಗೊಂಡಿದ್ದರೆ, ಇಪ್ಪತ್ತೈದು ಕುರಿಗಳು ಸಾವನಪ್ಪಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ದೊದ್ದನಕಟ್ಟೆ ಗ್ರಾಮದ ಶಶಿಗೌಡ ಅವರ ಪುತ್ರರಾದ ರಮೇಶ್ ಮತ್ತು ರಾಜು ಸಿಡಿಲು ಬಡಿದು ಗಾಯಗೊಂಡಿದ್ದರೆ, ಅವರಿಗೆ ಸೇರಿದ ಸುಮಾರು ಇಪ್ಪತ್ತೈದು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ದೊಡ್ದನಕಟ್ಟೆ ಗ್ರಾಮದ ಗವೀಮಠದ ಬಳಿಯಲ್ಲಿರುವ ತಮ್ಮ ಜಮೀನಿನಲ್ಲಿ ರಮೇಶ್ ಮತ್ತು ರವಿ ಅವರು ಕುರಿ ಮೇಯಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಮಳೆ ಸುರಿದಿದೆ. ಕೂಡಲೇ ಇವರಿಬ್ಬರು ಮರದ ಬಳಿಗೆ ತೆರಳಿ ಆಶ್ರಯ ಪಡೆಯಲು ಮುಂದಾಗಿದ್ದಾರೆ. ಇದೇ ವೇಳೆಗೆ ಕುರಿಗಳು ಕೂಡ ಮರದ ಬಳಿಗೆ ಬಂದಿವೆ.
ಅಷ್ಟರಲ್ಲೇ ಭಾರೀ ಶಬ್ದದೊಂದಿಗೆ ಸಿಡಿಲು ಬಡಿದಿದ್ದು, ಪರಿಣಾಮ ರಮೇಶ್ ಮತ್ತು ರವಿ ಅವರು ಗಾಯಗೊಂಡಿದ್ದರೆ ಇಪ್ಪತ್ತೈದು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು 108 ಆ್ಯಂಬುಲೆನ್ಸ್ ಮೂಲಕ ಇಬ್ಬರು ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.