ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟಿ ಬದನೆ ಭವಿಷ್ಯ ಫೆ.10ಕ್ಕೆ: ಜೈರಾಮ್ ರಮೇಶ್

By Mahesh
|
Google Oneindia Kannada News

Jairam ramesh
ಬೆಂಗಳೂರು, ಫೆ. 6: ನಗರದ ಸೆಂಟ್ರೆಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ನಡೆದ ಬಿಟಿ ಬದನೆ ಕುರಿತ ಸಂವಾದದಲ್ಲಿ ಪಾಲ್ಗೊಂಡ ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಅವರು, ಬಿಟಿ ಬದನೆ ಕುರಿತ ಸಾರ್ವಜನಿಕರ ಪರ ವಿರೋಧ ಅಭಿಪ್ರಾಯ ಸಂಗ್ರಹ ಮಾಡಿದರು. ಬಿಟಿ ಬದನೆ ಹಣೆಬರಹದ ನಿರ್ಧಾರ ಫೆ. 10ರಂದು ತಿಳಿಯಲಿದೆ. ಇಂದು ಅಂತಿಮ ಹಂತವಾಗಿ ರೈತರ, ವಿಜ್ಞಾನಿಗಳ, ವೈದ್ಯರ ಸಲಹೆ ಸೂಚನೆ, ಅಹವಾಲುಗಳನ್ನು ಆಲಿಸಿದ್ದೇನೆ. ಬಿಟಿ ಬದನೆ ವಿಷಯದಲ್ಲಿ ನನ್ನ ನಿರ್ಧಾರವೇ ಅಂತಿಮ, ಯಾರ ಪರ, ಅಥವಾ ಯಾರ ವಿರುದ್ಧ ನಿರ್ಣಯ ಹೊರಬೀಳಲಿದೆ ಎಂಬುದನ್ನು ತಿಳಿಯಲು ತಾಳ್ಮೆಯಿಂದ ಕಾಯುವಂಥವರಾಗಿ ಎಂದು ಸಚಿವರು ಕೊಂಚ ಅಸಮಾಧಾನದಿಂದ ಸುದ್ದಿಗಾರರಿಗೆ ತಿಳಿಸಿದರು.

ಉತ್ಪಾದಕರು ಹಾಗೂ ಗ್ರಾಹಕರ ದೃಷ್ಟಿಯಿಂದ ನೋಡಿ ನಾನು ನಿರ್ಣಯ ಕೈಗೊಳ್ಳುತ್ತೇನೆ. ಯಾವುದೆ ವಿಜ್ಞಾನಿಗಳ ಗುಂಪು, ಸರ್ಕಾರೇತರ ಸಂಸ್ಥೆ ಅಥವಾ ರಾಜಕೀಯ ಪ್ರೇರಿತವಾಗಿ ನಿರ್ಧಾರ ಕೈಗೊಳುವುದಿಲ್ಲ ಎಂದರು. ಜೈರಾಮ್ ಅವರನ್ನುಕುಲಾಂತರಿ ಬದನೆ ಹೊರತಂದಿರುವ ಅಮೆರಿಕ ಮೂಲದ ಮೊನ್ಸಾಂಟೋ ಕಂಪೆನಿಯ ಎಜೆಂಟ್ ಎಂದು ಕೆಲ ರೈತ ಮುಖಂಡರು ಆರೋಪಿಸಿದಾಗ, ಕೋಪಗೊಂಡ ಸಚಿವರು, ನಾನು ಎಜೆಂಟ್ ಆಗಿದ್ದರೆ ಇಂದು ನಿಮ್ಮ ಮುಂದೆ ಕುಳಿತು ನಿಮ್ಮ ಸಲಹೆ ಸೂಚನೆ ಕೇಳುವ ಅಗತ್ಯ ಇರಲಿಲ್ಲ. ಅಸಂಬದ್ಧವಾಗಿ ಮಾತನಾಡುವುದನ್ನು ಬಿಡಿ. ಇಲ್ಲವೇ ವೈದ್ಯರಿಂದ ಮಾನಸಿಕ ಚಿಕಿತ್ಸೆ ಪಡೆಯಿರಿ ಎಂದರು.

ಕಳೆದ ಅಕ್ಟೋಬರ್ ನಲ್ಲಿ ಕುಲಾಂತರಿ ಬದನೆಯನ್ನು ವಾಣಿಜ್ಯ ಬೆಳೆಯಾಗಿ ಬೆಳಸಲು ಯಾವುದೇ ಅಡ್ಡಿಯಿಲ್ಲ ಎಂದು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿತ್ತು. genetically modified (GM) ಬದನೆಗೆ Genetic Engineering Approval Committee ಕೂಡ ಒಪ್ಪಿಗೆ ನೀಡಿತ್ತು.ಆದರೆ, ಸಣ್ಣ್ಣ ಇಳುವರಿ ರೈತರಿಗೆ ಮಾರಕ, ಅಲ್ಲದೆ ಬಿಟಿ ಬದನೆ ಸೇವನೆ ಇಂದ ಆರೋಗ್ಯಕ್ಕೆ ಹಾನಿಕರ ಎಂದು ರೈತ ಸಂಘಟನೆಗಳು ವಾದಿಸುತ್ತಾ ಬಂದಿವೆ. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಜೈರಾಮ್ ರಮೇಶ್ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದರು.

ಇಂದು ನಡೆದ ಸಂವಾದ ಕಾರ್ಯಕ್ರಮಕ್ಕೂ ಮುನ್ನ ಮಾನ್ಸಾಂಟೋ ಕಂಪೆನಿ ವಿರುದ್ಧ ಘೋಷಣೆ ಕೂಗುತ್ತಾ, ಸಚಿವರ ವಿರುದ್ಧ ಕೆಲ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಹೈದರಾಬಾದ್, ಕೋಲ್ಕತ್ತಾ ದಲ್ಲೂ ಕೂಡ ಜೈರಾಮ್ ರಮೇಶ್ ವಿರುದ್ಧ ರೈತರು ಪ್ರತಿಭಟನೆ ಮಾಡಿದ್ದರು. ಸಂವಾದ ಕಾರ್ಯಕ್ರಮದಲ್ಲೂ ಪ್ರತಿಭಟನೆಗೆ ರೈತರು ಮುಂದಾದಾಗ ಪೊಲೀಸರು ಎಚ್ಚರಿಕೆ ವಹಿಸಿ ಅವರನ್ನು ಹೊರ ಕಳಿಸಿದರು. ಕೆಲ ರೈತರು ಅಧಿಕ ಇಳುವರಿ ಹಾಗೂ ಆರ್ಥಿಕ ಭದ್ರತೆಯ ಕಾರಣ ಕೊಟ್ಟು ಬಿಟಿ ಬದನೆಗೆ ಓಕೆ ಅಂದರು.ಆದರೆ, ಭಾಗವಹಿಸಿದ್ದವರಲ್ಲಿ ಶೇ. 90 ರಷ್ಟು ಜನರ ಅಭಿಪ್ರಾಯ ಬಿಟಿ ಬದನೆ ವಿರುದ್ಧವಾಗಿತ್ತು. ಹಿರಿಯ ಸಾಹಿತಿ ಯುಆರ್ ಅನಂತಮೂರ್ತಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಸಮಾರಂಭ ಮುಕ್ತಾಯಕ್ಕೂ ಮುನ್ನ ಆಗಮಿಸಿ, ರೈತರಿಗೆ ಬೆಂಬಲ ಸೂಚಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X