ಕೇಜಿ ಟೊಮೆಟೋ ಖರೀದಿಗೆ 4 ರುಪಾಯಿ, ರೈತರ ಕಣ್ಣೀರು
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಮಾರ್ಚ್ 6 : ಬೇಡಿಕೆಗಿಂತ ಹೆಚ್ಚು ಟೊಮೆಟೋ ಬೆಳೆದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂಕ್ತ ಬೆಲೆ ಇಲ್ಲದೇ ತೋಟದಲ್ಲೇ ಕೊಳೆಯಲು ಬಿಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳು ಮುಖ್ಯವಾಗಿ ಕೃಷಿ ಆಧಾರಿತ ಜಿಲ್ಲೆಯಾಗಿದೆ. ಕೆಲವು ರೈತರು ಮಳೆ ಆಧಾರಿತ ಬೇಸಾಯ ಅವಲಂಬಿಸಿದ್ದಾರೆ. ಇನ್ನೂ ಕೆಲ ರೈತರು ಬೋರ್ ವೆಲ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.
ಧಮ್ ಇದ್ರೆ ಟೊಮೆಟೊದಲ್ಲಿ ಹೊಡೆದು ತೋರ್ಸೋ!
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಟೊಮೆಟೋ ಅಧಿಕವಾಗಿ ಬೆಳೆಯುತ್ತಾರೆ. ಉತ್ತಮ ಮಳೆ ಹಿನ್ನೆಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಟೊಮೆಟೋ ಮಾರುಕಟ್ಟೆಗೆ ಲಗ್ಗೆ ಇಟ್ಟ ಪರಿಣಾಮ ಬೆಲೆ ಪಾತಾಳಕ್ಕೆ ಇಳಿದಿದೆ. ಹಾಕಿದ ಬಂಡವಾಳಕ್ಕೆ ಸೂಕ್ತ ಬೆಲೆ ಸಿಗದೆ ಬೆಳೆಗಳನ್ನು ತೋಟಗಳಲ್ಲಿ ಹಾಗೇ ಬಿಟ್ಟಿದ್ದಾರೆ.
ಟೊಮೆಟೋ ಕೇಜಿಗೆ 4 ರುಪಾಯಿಯಂತೆ ರೈತರಿಂದ ಖರೀದಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಕೇಜಿಗೆ 6 ರುಪಾಯಿಯಂತೆ ಮಾರಾಟ ಆಗುತ್ತಿದೆ. ರೈತರು ತನ್ನ ಜಮೀನಿನಿಂದ ಮಾರುಕಟ್ಟೆಗೆ ಸಾಗಿಸಬೇಕಾದರೆ ಇಪ್ಪತ್ತೈದು ಕೆ.ಜಿ ಚೀಲಕ್ಕೆ ಮಾರಾಟದ ಬೆಲೆಗಿಂತ ಅಧಿಕ ಬಾಡಿಗೆ ನೀಡಬೇಕಾಗುತ್ತದೆ.
ಮುಂಗಾರು ಮಳೆ ನಂತರ ಬಹಳ ಉತ್ಸಾಹದಿಂದ ಇದ್ದ ರೈತರು ಟೊಮೆಟೋ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಟೊಮೆಟೋ ಮಾತ್ರವಲ್ಲ, ತರಕಾರಿ ಬೆಳೆಗಳಿಗೆ ಕೂಡ ಬೆಲೆ ಇಲ್ಲದೆ ರೈತರು ಬೇಸರದಿಂದ ಇದ್ದಾರೆ. ಇನ್ನು ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ಹಾವಳಿಯಿಂದ ರೈತರು ಈ ಬಾರಿ ನಲುಗಿ ಹೋಗಿದ್ದಾರೆ.
ರಾಜ್ಯ ಸರಕಾರ ಕಬ್ಬು, ತೆಂಗು, ಅಡಿಕೆ ಬೆಳೆಗಳಿಗೆ ಮಾತ್ರ ಬೆಂಬಲ ಬೆಲೆ ನಿಗದಿ ಮಾಡಿ, ಖರೀದಿ ಮಾಡುತ್ತದೆ. ಅದೇ ರೀತಿ ಅಲ್ಪಾವಧಿ ಬೆಳೆಗಳನ್ನೂ ಸರಕಾರವೇ ಖರೀದಿ ಮಾಡಬೇಕು ಎಂಬುದು ರೈತರ ಒತ್ತಾಯವಾಗಿದೆ.
"ಮುಂಗಾರು ಮಳೆಯ ನಂತರ ಎರಡು ಎಕರೆಗೆ ಟೊಮೆಟೋ ಬೆಳೆದಿದ್ದೆವು. ಇದೀಗ ಬೆಲೆ ಇಲ್ಲದೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಕೂಡ ಸಾಧ್ಯವಾಗುತ್ತಿಲ್ಲ. ತೋಟದಲ್ಲಿ ನೇರವಾಗಿ ಖರೀದಿ ಮಾಡಿದರೆ ಮಾತ್ರ ಅಲ್ಪಸ್ವಲ್ಪ ದುಡ್ಡು ಸಿಗುತ್ತದೆ. ಇನ್ನು ಮುಂದೆ ಬೇಸಿಗೆ ಕಾಲ. ಮತ್ತೆ ಬೋರ್ವೆಲ್ ಗಳಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಈಗ ಬೆಳೆದ ರೀತಿ ಸಾಧ್ಯವಾಗುವುದಿಲ್ಲ. ಸರಕಾರದಿಂದ ಟೊಮೆಟೋ ಬೆಳೆಗಾರರಿಗೆ ಪರಿಹಾರ ಒದಗಿಸಿಕೊಡಬೇಕು ಎನ್ನುತ್ತಾರೆ ಬೂದಿಗೆರೆ ರೈತ ನಾಗೇಶ್.
ಟೊಮ್ಯಾಟೋ ಕಾಯಲು ಭದ್ರತಾ ಸಿಬ್ಬಂದಿ