ಟೊಮೆಟೋ ಬೆಲೆ ಕುಸಿತ: ಟ್ರ್ಯಾಕ್ಟರ್ ನಲ್ಲಿ ತುಂಬಿ ಬೀಳು ಹೊಲಕ್ಕೆ ಸುರಿದ ಚಿತ್ರದುರ್ಗ ರೈತ
ಚಿತ್ರದುರ್ಗ, ಫೆಬ್ರವರಿ 25: ಟೊಮೆಟೋ ಬೆಲೆ ಕುಸಿತದಿಂದ ಕೋಟೆನಾಡಿನ ರೈತರೊಬ್ಬರು ಬೆಳೆದ ಟೊಮೆಟೋ ಹಣ್ಣುಗಳನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿ ಬೀಳು ಹೊಲಕ್ಕೆ ಸುರಿದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರಿಯೊಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ಮುಕುಂದ ಹಾಗೂ ಪಾತಲಿಂಗಪ್ಪ ಅವರು ಸೇರಿಕೊಂಡು 3 ಎಕರೆ 20 ಗುಂಟೆಯಲ್ಲಿ ಸುಮಾರು 3 ಲಕ್ಷದ 25 ಸಾವಿರ ರೂಪಾಯಿ ಖರ್ಚು ಮಾಡಿ ಟೊಮೆಟೋ ಬೆಳೆ ಬೆಳೆದಿದ್ದರು. ಫಸಲು ಉತ್ತಮವಾಗಿ ಬಂದಿತ್ತು, ಆದರೆ ದಿಢೀರ್ ಬೆಲೆ ಕುಸಿತದಿಂದ ಅಧಿಕ ಲಾಭದ ನಿರೀಕ್ಷೆಯಲ್ಲಿದ್ದ ರೈತ ಮುಕುಂದ ಕಂಗಾಲಾಗಿದ್ದಾನೆ.
ಚಿತ್ರದುರ್ಗದಲ್ಲಿ ಬಾಗಿಲು ತೆರೆಯಲಿದೆ ಖಾಸಗಿ ಕೃಷಿ ಮಾರುಕಟ್ಟೆ
ಹಿರಿಯೂರು ನಗರದಲ್ಲಿ ಪ್ರತಿನಿತ್ಯ 100 ರಿಂದ 200 ಚೀಲ ವ್ಯಾಪಾರ ಆಗುತ್ತದೆ. ಖರೀದಿ ಮಾಡುವವರು ಯಾರು ಇರುವುದಿಲ್ಲ. ಹಾಗಾಗಿ ಹೆಚ್ಚು ಟೊಮೆಟೋ ಬೆಳೆದಿದ್ದರಿಂದ ಇಲ್ಲಿ ಮಾರಾಟ ಮಾಡಲಾಗದೆ, ಕೋಲಾರ ಟೊಮೆಟೋ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಕುಂದ, ಸರ್.. ನಾವು ಸುಮಾರು 3 ಎಕರೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಟೊಮೆಟೋ ಬೆಳೆದಿದ್ವಿ, ಜೊತೆಗೆ ಲಾಭದ ನಿರೀಕ್ಷೆಯಲ್ಲಿದ್ದೆವು. ಬೆಳೆದ ಟೊಮೆಟೋ ಹಣ್ಣುಗಳನ್ನು ಒಂದು ವಾರದಿಂದ ಕೋಲಾರ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದೆವು. ಇದೀಗ ನಾವು ಬೆಳೆದ ಟೊಮೆಟೋ ಬೆಳೆಗೆ ಬೆಲೆ ಇಲ್ಲದಂತಾಗಿದೆ ಎಂದು ನೋವು ತೋಡಿಕೊಂಡರು.
ಒಂದು ಕ್ರೇಟ್ ನಲ್ಲಿ 15 ಕೆಜಿ ಇರುವ ಟೊಮೆಟೋಗೆ 40-50 ಬೆಲೆ ಸಿಗುತ್ತದೆ. ಇಲ್ಲಿಂದ ಕೊಲಾರಕ್ಕೆ ಕೊಂಡೊಯ್ಯಲು ನಮಗೆ ತುಂಬಾ ನಷ್ಟ ಖರ್ಚಾಗುತ್ತದೆ. ಹೆಚ್ಚು ಖರ್ಚು ನಮ್ಮ ತಲೆ ಮೇಲೆ ಬರುತ್ತದೆ ಎಂದು ತಿಳಿಸಿದರು. ಈಗಲೂ ಸಹ ಹೊಲದಲ್ಲಿ 2000 ದಿಂದ 3000 ಟೊಮೆಟೋ ಗಿಡದಲ್ಲಿವೆ ಎಂದರು.
ಒಂದು ಹೆಣ್ಣಾಳಿಗೆ ಕೂಲಿ ರೂಪದಲ್ಲಿ 300 ರೂ., ಒಂದು ಗಂಡಾಳಿಗೆ 500 ರೂ. ಕೂಲಿ ಕೊಡಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ದಲ್ಲಾಳಿ, ಕಮಿಷನ್ ಎಲ್ಲ ಲೆಕ್ಕ ಹಾಕಿದರೆ ತುಂಬಾ ನಷ್ಟವಾಗುತ್ತದೆ ಏನು ಮಾಡಲಿ. ವಿಧಿಯಿಲ್ಲದೆ ಬೆಲೆ ಕುಸಿತದಿಂದ ಬೆಳೆದ ಹಣ್ಣುಗಳನ್ನು ಬೀಳು ನೆಲಕ್ಕೆ ಸುರಿಯುತ್ತಿದ್ದೇವೆ ಎಂದು ಬೆಲೆ ನಷ್ಟದಿಂದ ಸಾಲ ಹೆಚ್ಚಾಗುತ್ತದೆ ಎಂದು ಟೊಮೆಟೋ ಬೆಳೆದ ರೈತ ತಮ್ಮ ಅಳಲನ್ನು ಹೇಳಿಕೊಂಡರು.