ತಂಬಾಕಿಗೆ ಉತ್ತಮ ಬೆಲೆ ಒದಗಿಸುವಂತೆ ತಂಬಾಕು ಬೆಳೆಗಾರನ ಏಕಾಂಗಿ ಹೋರಾಟ
ಮೈಸೂರು, ಅಕ್ಟೋಬರ್ 22: 2020-21ನೇ ಸಾಲಿನ ತಂಬಾಕು ಬೆಳೆಗೆ ಪ್ರತಿ ಕೆ.ಜಿಗೆ 200 ರಿಂದ 250 ರುಪಾಯಿ ಬೆಲೆ ನೀಡುವಂತೆ ಮತ್ತು ಕಾರ್ಡ್ ದಾರರ ಸಂಖ್ಯೆಗಳನ್ನು ಅತೀ ಶೀಘ್ರವಾಗಿ ಬಗೆಹರಿಸಿಕೊಡುವಂತೆ ಒತ್ತಾಯಿಸಿ ಶ್ರೀನಿವಾಸ್ ಎಂಬುವವರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರದಂದು ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಹೋಬಳಿಯ ಆರ್.ತುಂಗಾ ಗ್ರಾಮದ ಶ್ರೀನಿವಾಸ್.ಪಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ರೈತರ ಕೈಹಿಡಿಯುತ್ತಾ ಪಾಮ್ ರೋಜ್ ಸುಗಂಧ ದ್ರವ್ಯದ ಬೆಳೆ?
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿ ತಂಬಾಕಿಗೆ ಉತ್ತಮವಾದ ಅಂದರೆ 200 ರೂ. ನಿಂದ 250 ರೂ. ಗಳ ಬೆಲೆ ದೊರೆಯದ ಕಾರಣ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ತಂಬಾಕು ಹರಾಜು ಮಾರುಕಟ್ಟೆ ಕೆಲವು ದಿನಗಳಿಂದ ಪ್ರಾರಂಭವಾಗಿದ್ದು, ರೈತರಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದಾರೆ ಎಂದರು.
""ತಂಬಾಕು ಬೆಳೆಯನ್ನು ಬೆಳೆಯಲು ಪ್ರತಿ ಕೆ.ಜಿಗೆ ಸುಮಾರು 195 ದಿಂದ 215 ರೂ. ಗಳು ಖರ್ಚಾಗುತ್ತಿದ್ದು, ತಂಬಾಕು ಮಾರುಕಟ್ಟೆ ನೀಡುತ್ತಿರುವ ಬೆಲೆ ಸುಮಾರು 130 ರಿಂದ 170 ರೂ. ಗಳು ಮಾತ್ರ. ರೈತರು ಮಾಡುತ್ತಿರುವ ಖರ್ಚು ಕೂಡ ಸಿಗದೆ ನಷ್ಟವನ್ನು ಹೊಂದುತ್ತಿದ್ದಾರೆ.''
ಆದ್ದರಿಂದ ತಂಬಾಕಿನ ಬೆಲೆಯನ್ನು ಕನಿಷ್ಟ ಸುಮಾರು 200 ರಿಂದ 250 ರೂ.ಗಳನ್ನು ನೀಡಿ ಮಾರಕಟ್ಟೆಯನ್ನು ಮಾಡಬೇಕು. ಕಾರ್ಡ್ ದಾರರಿಗೆ ವಿಧಿಸುವ ಕಮಿಷನ್ ದರವನ್ನು ಕಡಿತಗೊಳಿಸಬೇಕು. ಇಲ್ಲವಾದಲ್ಲಿ ಕಾರ್ಡ್ ದಾರರಿಗೆ ತಂಬಾಕಿನ ಲೈಸೆನ್ಸ್ ನೀಡಬೇಕು ಎಂದು ಒತ್ತಾಯಿಸಿದರು.
ಇಲ್ಲವಾದರೆ ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತದಲ್ಲಿದ್ದಾರೆ. ಆದ್ದರಿಂದ ಮಾರುಕಟ್ಟೆಗ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಿಕೊಡಬೇಕು. ಇಲ್ಲವಾದಲ್ಲಿ ರೈತ ಪರ ಸಂಘಟನೆಗಳು ಮತ್ತು ರೈತರೆಲ್ಲರೂ ಸೇರಿ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.