ಅಂಗಮಾರಿ ರೋಗದಿಂದ ಆಲೂಗಡ್ಡೆ ಬೆಳೆ ಸಂರಕ್ಷಣೆ ಹೇಗೆ?
ಹಾಸನ, ಜುಲೈ 17 : ಕರ್ನಾಟಕದಲ್ಲಿ ಆಲೂಗಡ್ಡೆ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಹಾಸನವೂ ಒಂದು. ಹಾಸನ ತಾಲೂಕಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಅಧಿಕ ತೇವಾಂಶ ಹಾಗೂ ತುಂತುರು ಮಳೆ ಬರುತ್ತಿದೆ.
Recommended Video
ಇಂತಹ ವಾತಾವರಣದಲ್ಲಿ ಬೆಳೆಗೆ ಅಂಗಮಾರಿ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೈತರು ಬಿತ್ತನೆ ಮಡಿ ಸುಮಾರು 50 ರಿಂದ 60 ದಿನಗಳಾಗಿವೆ. ಬೆಳೆಯೂ ಈಗ ಹೂ ಬಿಡುವ ಹಾಗೂ ಗಡ್ಡೆ ಕಟ್ಟುವ ಹಂತದಲ್ಲಿದೆ.
ಆಲೂಗಡ್ಡೆ ಬೆಳೆಗೆ ಈ ಅವಧಿಯಲ್ಲಿ ಅಂಗಮಾರಿ ರೋಗ ತಗುಲಿದರೆ ಬೆಳೆ ಸಂಪೂರ್ಣ ನಾಶವಾಗುವ ಸಂಭವವಿರುತ್ತದೆ. ಆದ್ದರಿಂದ ರೈತರು ರೋಗದ ಲ್ಷಕಣಗಳನ್ನು ಪತ್ತೆ ಹಚ್ಚಿ ಅದನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ರೋಗ ಲಕ್ಷಣಗಳು : ಅಂಗಮಾರಿ ರೋಗ ತಗುಲಿದರೆ ಮೊದಲಿಗೆ ನೀರಿನಿಂದ ಆವೃತವಾದ ದುಂಡನೆಯ ಮಚ್ಚೆಗಳು ಎಲೆಯ ಅಂಚಿನಲ್ಲಿ ಕಾಣಿಸುತ್ತಿವೆ. ಈ ಮಚ್ಚೆಗಳು ಕಂದುಬಣ್ಣದಿಂದ ಕೂಡಿದ್ದು, ನಂತರ ಕಪ್ಪಾಗಿ ಬದಲಾಗುತ್ತದೆ.
ಎಲೆಯ ಕೆಳ ಭಾಗದಲ್ಲಿ ಬಿಳಿ ಅಥವಾ ಬೂದು ಬಣ್ಣದಿಂದ ಕೂಡಿರುತ್ತದೆ. ರೋಗವು ಗಡ್ಡೆಗೆ ಹರಡುತ್ತದೆ. ರೋಗ ಹೆಚ್ಚಾದರೆ ಗಿಡ ಸಾಯುತ್ತದೆ. ರೋಗ ಲಕ್ಷಣಗಳು ಕಂಡುಬಂದ ಪ್ರಾರಂಭಿಕ ಹಂತದಲ್ಲಿ ಸಸ್ಯ ಸಂರಕ್ಷಣಾ ಔಷಧಿ ಸಿಂಪಡಣೆ ಮಾಡಬೇಕು.
ಔಷದಿ ಸಿಂಪಡಣೆ : ಬೀಜಗಳನ್ನು ಬಿತ್ತಿದ 20 ರಿಂದ 25 ದಿನಗಳು ಮ್ಯಾಂಕೊಜೆಬ್ 2.5ಗ್ರಾಂ+ಡೈಮಿಥೋಯೇಟ್ 1.7 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಅಥವಾ ಮ್ಯಾಂಕೋಜೆಬ್ 3 ಗ್ರಾಂ+ ಇಮಿಡಾಕ್ಲೋಫ್ರಿಡ್ 0.5 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಎಲೆಗಳ ಮೇಲ್ಬಾಗ, ಕೆಳಬಾಗ ಹಾಗೂ ಇನ್ನಿತರೆ ಎಲ್ಲಾ ಭಾಗಗಳು ನೆನೆಯುವಂತೆ ಸಿಂಪಡಿಸಬೇಕು.
35 ರಿಂದ 45 ದಿನಗಳು ಮ್ಯಾಂಕೋಜೆಬ್ + ಸೈಮೋಕ್ಸಾನಿಲ್ 3.0 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮತ್ತು ಕೆಲ್ತೇನ್2.5 ಮಿ.ಲೀ. ನೀರಿನಲ್ಲಿ ಅಥವಾ ಫೆನಜಾಕ್ವಿನ್ 1.7 ಮಿ.ಲೀ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. 55-60 ದಿನಗಳ ಅವಧಿಗೆ ಡೈಮಿಥೋಮಾರ್ಫ್ 1 ಗ್ರಾಂ +ಮ್ಯಾಂಕೋಜೆಬ್ 3 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಅಥವಾ ಮ್ಯಾಂಕೋಜೆಬ್ + ಪೆನಾಮಿಡೋನ್ 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು.
65 ರಿಂದ 70 ದಿನಗಳು ಅಗತ್ಯವಿದ್ದಲ್ಲಿ ಮಾತ್ರ ಡೈಮಿಥೋಮಾರ್ಫ್ 1 ಗ್ರಾಂ + ಮ್ಯಾಂಕೋಜೆಬ್ 2.5 ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಪ್ರತಿ ಸಿಂಪರಣೆಯಲ್ಲಿ ಔಷಧಿಗಳ ಜೊತೆಗೆ ಗಮ್ 0.5 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಪವರ್ ಸ್ಪ್ರೇಯರ್ನಿಂದ ಸಿಂಪಡಣೆ ಮಾಡಬೇಕು.