ಬಾಳೆ ಬೆಳೆಯುವ ರೈತರಿಗೆ ತೋಟಗಾರಿಕಾ ಇಲಾಖೆ ಸಲಹೆಗಳು
ಬೆಂಗಳೂರು, ಅಕ್ಟೋಬರ್ 08 : ಬಾಳೆ ಬೆಳೆಯುವ ರೈತರು ವಿವಿಧ ಹಂತಗಳಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಆದ್ದರಿಂದ, ಕೊಪ್ಪಳ ತೋಟಗಾರಿಕೆ ಇಲಾಖೆ ರೈತರಿಗೆ ಹಲವು ಸಲಹೆಗಳನ್ನು ನೀಡಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ 3-4 ವಾರಗಳಿಂದ ಸತತವಾಗಿ ಮಳೆ ಸುರಿದಿದೆ. ಇದರಿಂದಾಗಿ ಅನೇಕ ಬೆಳೆಗಾರರು ಆತಂಕಗೊಂಡಿದ್ದಾರೆ. ಮಳೆಯಿಂದ ಬಹುವಾರ್ಷಿಕ ಬೆಳೆಗಳು ಹಾನಿಗೊಳಗಾಗದಿದ್ದರೂ ಬಾಳೆ, ಪಪ್ಪಾಯ ಬೆಳೆಗಳಿಗೆ ಹಾನಿಯಾಗುತ್ತದೆ.
ಬಾಳೆ ಬೆಳೆದು ಬಂಪರ್ ಲಾಭ ಪಡೆದ ಕೊಪ್ಪಳದ ರೈತ
ತಜ್ಞರು ಬಾಳೆ ಬೆಳೆಗಾರರಿಗೆ ರೋಗ/ಕೀಟ ನಿಯಂತ್ರಣ/ಸಸಿಗಳ ಸಂರಕ್ಷಣೆ ಬಗ್ಗೆ ಹಲವಾರು ಮಾಹಿತಿಗಳನ್ನು ನೀಡಿದ್ದಾರೆ. ಈ ಹಂಗಾಮಿನಲ್ಲಿ ಬಾಳೆ ಬೆಳೆಯಲ್ಲಿ ಕಂಡು ಬರುವ ಪ್ರಮುಖ ರೋಗ ಮಾಹಿತಿಯನ್ನೂ ನೀಡಿದ್ದಾರೆ.
ಭಾರೀ ಮಳೆಗೆ ನೆಲಕಚ್ಚಿದ ಬಾಳೆ: ಲಕ್ಷಾಂತರ ರುಪಾಯಿ ನಷ್ಟ
ಬಾಳೆ ಬೆಳೆಯುವ ರೈತರು ರೋಗದ ಬಾಧೆ ಕಂಡುಬಂದಲ್ಲಿ ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕು ಕಛೇರಿಗಳು ಮತ್ತು ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಮತ್ತು ತೋಟಗಾರಿಕೆ ವಿಷಯ ತಜ್ಞರನ್ನು ಸಂಪರ್ಕಿಸಬಹುದು ಎಂದು ಸಲಹೆ ನೀಡಲಾಗಿದೆ.
ರಾಮನಗರದಲ್ಲಿ ಗುಡುಗು ಸಹಿತ ಮಳೆ; ಬಾಳೆ, ರೇಷ್ಮೆ ನಾಶ
ಬಾಳೆ ಬೆಳೆಯುವ ರೈತರು ಸೈನಿಕ ಹುಳು, ಕಾಕೊರೆಯುವ ಮೂತಿ ಹುಳು, ಗಡ್ಡೆ ಕೊರೆಯುವ ಹುಳು ಮುಂತಾದವುಗಳ ಬಗ್ಗೆ ಮಾಹಿತಿಯನ್ನು ತಿಳಿದಿರಬೇಕು. ರೋಗ ಲಕ್ಷ್ಮಣಗಳು ಕಂಡು ಬಂದಲ್ಲಿ ಅವುಗಳನ್ನು ಪತ್ತೆ ಹಚ್ಚಿ, ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕು.
ಸೈನಿಕ ಹುಳುವಿನ ಕಾಟ
ಈ ಕೀಟ ಗುಂಪು ಗುಂಪಾಗಿ ಎಲೆಯ ಕೆಳಗಿನ ಭಾಗದಲ್ಲಿ ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಹೊರ ಬರುವ ಮರಿ ಕೀಟಗಳು ಎಲೆಯನ್ನು ತಿನ್ನುತ್ತವೆ. ಇದರಿಂದಾಗಿ ಎಲೆಗಳ ಮೇಲೆ ರಂಧ್ರಗಳಾಗುತ್ತವೆ ಮತ್ತು ಎಲೆ ಸಂಪೂರ್ಣವಾಗಿ ಮೇಯ್ದಂತೆ ಕಾಣುತ್ತದೆ. ಮೋಡ ಕವಿದ ವಾತಾವರಣದಲ್ಲಿ ಇದರ ಹಾವಳಿ ಹೆಚ್ಚು. ಹತೋಟಿಗಾಗಿ ಬೇವಿನೆಣ್ಣೆ (10000 ಪಿ.ಪಿ.ಎಂ.) 2-3 ಮಿ.ಲೀ. ಅಥವಾ ಕ್ವಿನಾಲಫಾಸ್ 25 ಇ.ಸಿ. 2 ಮಿ.ಲೀ. ಅಥವಾ ಥಯೋಡಿಕಾರ್ಬ 1 ಗ್ರಾಂ. 1 ಲೀ. ನೀರಿಗೆ ಬೆರೆಸಿ ಸಾಯಂಕಾಲ ಸಿಂಪಡಿಸುವುದು ಜೊತೆಗೆ ಅಂಟನ್ನು ಬೆರೆಸುವುದು ಸೂಕ್ತ.
ಕಾಕೊರೆಯುವ ಮೂತಿ ಹುಳು
ಮಿಥ್ಯಾ ಕಾಂಡವನ್ನು ಹೊಕ್ಕು ಅಲ್ಲಿ ಮೊಟ್ಟೆ ಇಡುವ ಈ ಕೀಟ ಕಪ್ಪಗಿದ್ದು, ಉದ್ದನೆ ಗರಗಸ ಆಕಾರದ ಮೂತಿ ಹೊಂದಿರುತ್ತದೆ. ಮೊಟ್ಟೆಯಿಂದ ಹೊರ ಬರುವ ಕೀಟ ಮಿಥ್ಯಾ ಕಾಂಡವನ್ನು ತಿಂದು ಟೊಳ್ಳಾಗಿಸುತ್ತವೆ. ಇದರಿಂದಾಗಿ ಕಾಂಡದ ಮೇಲೆ ರಂಧ್ರಗಳನ್ನು ಕಾಣಬಹುದು. ಮೊನೋಕ್ರೋಟೊಫಾಸ್ 36 ಎಸ್.ಎಲ್. ಎಂಬ ಕೀಟ ನಾಶಕವನ್ನು 1.5 ಮಿ.ಲೀ. ಅಥವಾ ಅಸಿಫೇಟ 75 ಎ.ಪಿ. ಎನ್ನುವ ಕೀಟ ನಾಶಕ ಪುಡಿಯನ್ನು 2 ಗ್ರಾಂ ಒಂದು ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಬಾಧೆಗೊಳಗಾದ ಗಿಡಗಳಿಗೆ 150 ಮಿ.ಲೀ. ಮೊನೊಕ್ರೋಟೊಫಾಸ ಕೀಟನಾಶಕವನ್ನು 350 ಮಿ.ಲೀ. ನೀರಿನಲ್ಲಿ ಬೆರೆಸಿ ಚುಚ್ಚುಮದ್ದಿನಿಂದ ಗಿಡದ 45 ಸೆಂ. ಮೀ. ಎತ್ತರದಲ್ಲಿ ಕಾಂಡಕ್ಕೆ ಓರೆಯಾಗಿ ಚುಚ್ಚಬೇಕು.
ಗಡ್ಡೆ ಕೊರೆಯುವ ಹುಳು
ಜೀರುಂಡೆ ಜಾತಿಗೆ ಸೇರಿದ ಈ ಕೀಟ ಹೆಚ್ಚಿನ ಚಟುವಟಿಕೆಯಿಂದ ಕೂಡಿರುತ್ತದೆ. ನಾಟಿಯ ಸಂದರ್ಭದಲ್ಲಿ ಆರೋಗ್ಯವಂತ ಉತ್ತಮ ಗುಣಮಟ್ಟದ 750 ಗ್ರಾಂ. ತೂಗುವ ಗಡ್ಡೆಗಳ ಆಯ್ಕೆ ಮಾಡಬೇಕು. ಗಡ್ಡೆ ನಾಟಿ ಮಾಡುವ ಪೂರ್ವದಲ್ಲಿ ಗಡ್ಡೆಗಳನ್ನು ಚೆನ್ನಾಗಿ ಕುಡುಗೋಲಿನಿಂದ ಕೆತ್ತಿ ಸೆಗಣಿ ರಾಡಿಯಲ್ಲಿ ಅದ್ದಿ 15-20 ಗ್ರಾಂ. ಕಾರ್ಬೊಫೊರಾನ್ ಹರಳುಗಳನ್ನು ಲೇಪಿಸಿ ನಾಟಿ ಮಾಡಬೇಕು. ನಾಟಿ ಮಾಡಿದ ತಿಂಗಳ ನಂತರ ಇದೇ ಹರಳನ್ನು ಭೂಮಿಗೆ ಸೇರಿಸುವುದು. ಗಡ್ಡೆ ಕೊಳೆ ರೋಗ ಇದ್ದಲ್ಲಿ ಸೂಕ್ತ ಶಿಲೀಂಧ್ರನಾಶಕ ಬಳಸಬೇಕು.
ಎಲೆ ಚುಕ್ಕೆ ರೋಗ
ಈ ರೋಗವನ್ನು ಸಿಗಟೋಕಾ ಚುಕ್ಕೆ ರೋಗ ಎಂದು ಕರೆಯಲಾಗುತ್ತದೆ. ಈ ರೋಗ ಮೋಡ ಕವಿದ ವಾತಾವರಣ ಹಾಗೂ ಮಳೆಗಾಲದಲ್ಲಿ ಹೆಚ್ಚು. ಆರಂಭ ಹಂತದಲ್ಲಿ ಎಲೆ ಮೇಲೆ ಕಂದು ಚುಕ್ಕೆಗಳು ಕಂಡು ಬರುತ್ತವೆ. ನಂತರ ಒಂದಕ್ಕೊಂದು ಕೂಡಿಕೊಂಡು ಕಪ್ಪಾದ ಚುಕ್ಕೆಗಳು ಎಲೆಯನ್ನೆಲ್ಲಾ ಆವರಿಸಿಕೊಳ್ಳುತ್ತವೆ. ಇದರಲ್ಲಿ ಹಳದಿ ಹಾಗೂ ಕಪ್ಪು ಎನ್ನುವ ಎರಡು ವಿಧಗಳಿವೆ. ಕೆಲವು ಬಾರಿ ಲಘು ಪೋಷಕಾಂಶಗಳ ಕೊರತೆಯಿಂದಲೂ ಈ ರೋಗ ತೀವ್ರವಾಗಿ ಕಂಡುಬರುತ್ತದೆ. ಇದರ ಹತೋಟಿಗಾಗಿ ಉತ್ತಮ ನೀರು ಹಾಗೂ ಪೋಷಕಾಂಶಗಳ ನಿರ್ವಹಣೆ ಅಗತ್ಯ.
ಲಾಭದಾಯಕ ಬಾಳೆ ಕೃಷಿ
ಉತ್ತಮ ಸಸಿಗಳ ಆಯ್ಕೆ, ಉತ್ತಮ ಪೋಷಕಾಂಶ ನಿರ್ವಹಣೆ ಹಾಗೂ ನೀರಿನ ಉತ್ತಮ ಸದ್ಭಳಕೆ ಜೊತೆಗೆ ಜೈವಿಕ ಗೊಬ್ಬರಗಳ ಬಳಕೆಯಿಂದ ಬಾಳೆ ಬೆಳೆಯನ್ನು ಹೆಚ್ಚು ಲಾಭದಾಯಕವಾಗಿ ಬೆಳೆಯಬಹುದು. ರೋಗ / ಕೀಟಗಳ ಬಾಧೆಯಿಂದ ಸಸಿಗಳನ್ನು ಮುಕ್ತವಾಗಿಡಬಹುದು. ಒಂದು ಸಾರಿ ಬಾಳೆ ಬೆಳೆದ ಜಮೀನಿನಲ್ಲಿ 3 ವರ್ಷ ಬೇರೆ ಬೆಳೆಗಳನ್ನು ಬೆಳೆಯಬೇಕು.