ಮಿಡತೆ ದಾಳಿ ತಡೆಗೆ ರೈತರಿಗೆ ಕೃಷಿ ಇಲಾಖೆ ಸಲಹೆಗಳು
ಕಲಬುರಗಿ, ಮೇ 27 : ಕಲಬುರಗಿ ಪಕ್ಕದ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಮರುಭೂಮಿ ಮಿಡತೆ ಹಾವಳಿ ಕಂಡುಬಂದಿದೆ. ಯಾವುದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮಿಡತೆಗಳು ಕಂಡುಬರುವ ಸಂಭವ ಇರುತ್ತದೆ.
ಮಿಡತೆಗಳ ಹಾವಳಿ ಹತೋಟಿಗಾಗಿ ಕಲಬುರಗಿ ಜಿಲ್ಲೆಯ ರೈತರು ವಿವಿಧ ಹಂತದಲ್ಲಿ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರಾದ ರಿತೇಂದ್ರನಾಥ ಸುಗೂರ ಸಲಹೆ ನೀಡಿದ್ದಾರೆ.
ಕರ್ನಾಟಕಕ್ಕೆ ಮಿಡತೆ ದಾಳಿ ಆತಂಕ; ಸರ್ಕಾರಕ್ಕೆ ಎಚ್ಡಿಕೆ ಸಲಹೆ
ಜಿಲ್ಲೆಯಲ್ಲಿ ಬೇಸಿಗೆ ಕಾಲದ ಬೆಳೆಗಳು, ಕಟಾವು ಹಂತದಲ್ಲಿರುವ ತೋಟಗಾರಿಕೆ ಹಾಗೂ ಅರಣ್ಯೀಕರಣದ ಗಿಡಮರಗಳು ಮಿಡತೆ ದಾಳಿಯಿಂದ ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ, ರೈತರು ಇಲಾಖೆಯ ಸಲಹೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.
ಅದ್ಯಾಕೋ.. ಜೀವಕ್ಕೆ ಕೊರೊನಾ ಕುತ್ತು, ಜೀವನಕ್ಕೆ ಮಿಡತೆ ಆಪತ್ತು!?
ಮಿಡತೆಗಳು ಕಡಿಮೆ ಸಂಖ್ಯೆಯಲ್ಲಿದ್ದಾಗ ಹೆಚ್ಚು ಹಾನಿ ಮಾಡುವುದಿಲ್ಲ. ಬೇಸಿಗೆಯ ನಡುವೆ ಸರಣಿ ಮಳೆಗಳು ಬಂದಾಗ ತೇವಾಂಶವುಳ್ಳ ಪರಿಸರ ಮಿಡತೆಗಳಿಗೆ ಪೂರಕವಾಗಿದೆ. ಪ್ರಸ್ತುತ ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಾನಾ ಬಗೆಯ ಚಂಡಮಾರುತಗಳು ಮಿಡತೆಗಳ ಹುಟ್ಟಿಗೆ ಪೂರಕವಾದ ವಾತಾವರಣ ಸೃಷ್ಟಿ ಮಾಡಿವೆ ಎಂಬುದು ತಜ್ಞರ ಅಭಿಪ್ರಾಯ.
ಮರುಭೂಮಿ ಮಿಡತೆ ಅಪಾಯ: ಪಾಕಿಸ್ತಾನ,ಇರಾನ್ ಸಹಕಾರ ಕೇಳಿದ ಭಾರತ
ಮೊಟ್ಟೆಗಳನ್ನು ನಾಶ ಮಾಡುವುದು
ಮಿಡತೆ ಮೊಟ್ಟೆಗಳನ್ನು ಇಟ್ಟ ಜಾಗವನ್ನು ಗುರುತಿಸಿ ಅವುಗಳ ಸುತ್ತಲು ಕಂದಕ (2 ಅಡಿ ಅಗಲ ಮತ್ತು 2 ಅಡಿ ಆಳ) ವನ್ನು ನಿರ್ಮಿಸಿ ಬರುವ ಮರಿಗಳನ್ನು ಆ ಕಂದಕಗಳಲ್ಲಿ ಬಿಡುವಂತೆ ಮಾಡುವುದು. ಅಲ್ಲದೆ ಮೊಟ್ಟೆಗಳನ್ನು ನಾಶಪಡಿಸಲು ಮೇಲಿಂದ ಮೇಲೆ ಉಳುಮೆ ಮಾಡಬೇಕು. ರೈತರು ಮಿಡತೆ ಕಾಣಿಸಿಕೊಂಡಾಗ ತಗಡಿನ ಡಬ್ಬಿ, ಡ್ರಮ್, ತಟ್ಟೆ ಇವುಗಳನ್ನು ಬಾರಿಸುವ ಮೂಲಕ ಭಾರಿ ಶಬ್ದವನ್ನು ಹುಟ್ಟಿಸಬೇಕು. ರೇಡಿಯೋ ಅಥವಾ ಎಲೆಕ್ಟ್ರಾನಿಕ್ ಸೌಂಡ್ಗಳನ್ನು ಹಾಕಬೇಕು. ಇದರಿಂದ ಮಿಡತೆ ತಂಡಗಳು ಭೂಮಿಯ ಮೇಲಿನ ಬೆಳೆಗಳಿಗೆ ಬರುವುದಿಲ್ಲ.
ಬೇವು ಆಧಾರಿತ ಸಿಂಪರಣೆ
ಬೇವು ಆಧಾರಿತ ಸಿಂಪರಣೆ (0.15% ಇ.ಸಿ) 45 ಮಿ.ಲಿ. ಅನ್ನು 15 ಲೀ. ನೀರಿನಲ್ಲಿ ಬೆರೆಸಿ ಹಾಲಿ ಬೆಳೆಗಳಿಗೆ ಹಾಗೂ ಸುತ್ತಮುತ್ತ ಗಿಡಗಳಿಗೆ ಸಿಂಪಡಿಸುವುದು. ತೇವಾಂಶ ಹೊಂದಿದ ಮರಳು ಮಣ್ಣಿನಲ್ಲಿ ಮಿಡತೆಗಳು ಮೊಟ್ಟೆ ಇಟ್ಟಿರುವ ಜಾಗಗಳನ್ನು ಗುರುತಿಸಿ, ರಾಸಾಯನಿಕಗಳನ್ನು ಸಿಂಪಡಿಸಿ ಮೊಟ್ಟೆ ಹಂತದಲ್ಲಿ ನಾಶಪಡಿಸುವುದು. ಬೆಳೆದು ನಿಂತ ಬೆಳೆಗೆ ಕ್ವಿನಾಲ್ಪಾಸ್ 1.5 % ಡಿ.ಪಿ. ಅಥವಾ ಕ್ಲೋರಿಪೈರಿಪಾಸ್ 1.5% ಡಿ.ಪಿ. ಅಥವಾ ಮಿಥೈಲ್ ಪ್ಯಾರಾಥೀಯಾನ್ 2% ಡಿ.ಪಿ. ಪುಡಿಯನ್ನು ಪ್ರತಿ ಹೇಕ್ಟೇರ್ಗೆ 25 ಕೆ.ಜಿ. ಯಂತೆ ಧೂಳಿಕರಿಸಬೇಕು.
ಬೆಂಕಿ ಹಚ್ಚಿ ಸುಡುವುದು
ರೈತರು ಕಡ್ಡಾಯವಾಗಿ ಮೈ ತುಂಬಾ ಬಟ್ಟೆ ಧರಿಸಿ, ಮುಖಕ್ಕೆ ಮಾಸ್ಕ್, ಕೈ ಚೀಲಗಳು, ಟೋಪಿ ಹಾಗೂ ಕನ್ನಡಕವನ್ನು ಧರಿಸಿ ಬೆಳಗ್ಗೆ 7 ರಿಂದ 10 ಗಂಟೆಯೊಳಗಾಗಿ 500 ಮಿ.ಲಿ. ಡಿ.ಡಿ.ವಿ.ಪಿ. 76 % ಇ.ಸಿ. ಯನ್ನು 1500 ಲೀ. ನೀರಿಗೆ ಬೇರೆಸಿ ಅಥವಾ 100 ಕೆ.ಜಿ. ಮರಳು ಮಣ್ಣಿನ ಜೊತೆ ಬೆರೆಸಿ ಎರಚಬೇಕು. ಈ ಪುಡಿಯನ್ನು ಚೆಲ್ಲಿದ ನಂತರ ಕೂಡಲೇ ಹೊಲದಿಂದ ಹೊರಬರುವುದು. ಬಲಿಯುತ್ತಿರುವ ಮಿಡತೆಗಳು ಹೊಲದಲ್ಲಿ ಓಡಾಡುವಾಗ ಒಣಹುಲ್ಲು, ಕಸಕಡ್ಡಿಗಳಿಗೆ ಬೆಂಕಿ ಹಚ್ಚಿ ಸುಡುವುದು.
ಮಿಡತೆಗಳ ಮೇಲೆ ಸಿಂಪಡಣೆ
ಮಿಡತೆಗಳು ಸಾಗುವಳಿ ರಹಿತ ಜಮೀನಿನಲ್ಲಿ ಗುಂಪು-ಗುಂಪಾಗಿ ಹರಡಿದಾಗ ಕ್ವಿನಾಲ್ಪಾಸ್ 1.5 % ಡಿ.ಪಿ. ಅಥವಾ ಕ್ಲೋರಿಪೈರಿಪಾಸ್ 1.5% ಡಿ.ಪಿ, ಅಥವಾ ಮಿಥೈಲ್ ಪ್ಯಾರಾಥೀಯಾನ್ 2% ಡಿ.ಪಿ. ಪುಡಿಯನ್ನು ಪ್ರತಿ ಹೇಕ್ಟೇರ್ಗೆ 25 ಕೆ.ಜಿ. ಯಂತೆ ಧೂಳಿಕರಿಸುವುದು ಅಥವಾ ಮೆಲಾಥಿಯಾ 96% ಯು.ಎಲ್.ವಿ. @ 1 ಲೀ. ಪ್ರತಿ ಹೇಕ್ಟರ್ಗೆ ಯು.ಎಲ್.ವಿ. ಸಿಂಪರಣೆ ಯಂತ್ರದ ಮೂಲಕ ನೇರವಾಗಿ ಮಿಡತೆಗಳ ಮೇಲೆ ಸಿಂಪಡಿಸುವುದು.
ಯಾವುದೇ ಬೆಳೆ ತಿನ್ನಬಲ್ಲದು
ಮಿಡತೆಗಳು ಬಹುಭಕ್ಷಕ ಕೀಟಗಳು. ಯಾವುದೇ ಗಿಡ ಅಥವಾ ಬೆಳೆಯ ಎಲೆ, ಹೂ, ಹಣ್ಣು, ಬೀಜ, ಮರದ ತೊಗಟೆ ಹಾಗೂ ಬೆಳೆಯ ಕುಡಿಗಳನ್ನು ಭಕ್ಷಿಸುತ್ತವೆ. ಪ್ರಪಂಚದಲ್ಲಿ ಮಿಡತೆಗಳಲ್ಲಿ 10 ಪ್ರಭೇದಗಳಿವೆ. ಭಾರತದಲ್ಲಿ ನಾಲ್ಕು ಪ್ರಭೇದಗಳಿರುತ್ತದೆ. ಹೆಣ್ಣು ಮಿಡತೆಯು ತೇವಾಂಶ ಹೊಂದಿರುವ ಮರಳು ಮಿಶ್ರಿತ ಮಣ್ಣಿನಲ್ಲಿ ತನ್ನ ಜೀವಾವಧಿಯಲ್ಲಿ ವಾರಕ್ಕೊಮ್ಮೆ 1000 ಮೊಟ್ಟೆಗಳನ್ನು ಪ್ರತಿ ಚದುರ ಅಡಿಗೆ ಇಡುತ್ತಿದ್ದು, 3 ಸಲ ಈ ಆವೃತ್ತಿ ಇರುತ್ತದೆ. ಪ್ರಭುದ್ಧತೆ ಮಿಡತೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ 12-16 ಕಿ. ಮೀ. ವೇಗದಲ್ಲಿ ಹಾರುತ್ತವೆ.