ಹತ್ತಿ ಬೆಳೆಯುವ ರೈತರಿಗೆ ಕೃಷಿ ಇಲಾಖೆಯ ಸಲಹೆಗಳು
ಬಳ್ಳಾರಿ, ಏಪ್ರಿಲ್ 20 : ಬಳ್ಳಾರಿ ಜಿಲ್ಲೆಯಲ್ಲಿ ಹತ್ತಿ ಬೆಳೆಯುವ ರೈತರಿಗೆ ಕೃಷಿ ಇಲಾಖೆ ಹಲವು ಸಲಹೆಗಳನ್ನು ನೀಡಿದೆ. ಹತ್ತಿ ಬೀಜಗಳ ಆಯ್ಕೆ ಸಂದರ್ಭದಲ್ಲಿಯೇ ರೈತರು ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಲಾಗಿದೆ.
ಹತ್ತಿ ಬೆಳೆಯುವ ರೈತರಿಗೆ ಹತ್ತಿ ಬೀಜದ ತಳಿಗಳ ಗುಣಮಟ್ಟದ ಹಾಗೂ ಕಳಪೆ ಬೀಜದ ಸರಬರಾಜಿನ ವಿಷಯದಲ್ಲಿ ಯಾವುದೇ ಮೋಸ ಆಗದಂತೆ ಕೃಷಿ ಇಲಾಖೆಯು ಕೆಲವು ಸಲಹೆಗಳನ್ನು ನೀಡಿದೆ.
ಕೃಷಿ ವಿಜ್ಞಾನಿಗಳು ಹಾಗೂ ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯ ಸೂಚಿಸಿರುವಂತೆ ಬಿ.ಟಿ. ಹತ್ತಿಯ ಬಿತ್ತನೆ ಕಾಲಾವಧಿಯು ಜೂನ್ ಮೊದಲ ವಾರದಿಂದ ಜೂಲೈ ಮೂರನೇ ವಾರದವರೆಗೆ ಅನುಸರಿಸಬೇಕು.
ಹತ್ತಿ ಬೆಳೆಯುವ ರೈತರಿಗಾಗಿ ವಿವಿಧ ಬೀಜದ ಕಂಪನಿಗಳು ಅನೇಕ ಬಿ.ಟಿ.ಹತ್ತಿ ತಳಿಗಳನ್ನು ಮಾರಾಟಕ್ಕೆ ದಾಸ್ತಾನು ಇಟ್ಟಿರುತ್ತಾರೆ. ಈ ಎಲ್ಲಾ ತಳಿಗಳು ಬಿ.ಟಿ. ತಳಿಗಳಾಗಿದ್ದು, ಅವುಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ.
ರೈತರು ಯಾವುದೇ ಕಂಪನಿಯ ಯಾವುದಾದರೊಂದು ತಳಿಯು ಬೇಕೆಂದಲ್ಲಿ ಮಾರುಕಟ್ಟೆಯಲ್ಲಿ ಅಂತಹ ತಳಿಯ ಕೊರತೆಯುಂಟಾಗಿ, ಅಧಿಕ ಬೆಲೆಗೆ ಮಾರಾಟವಾಗುವುದು ಹಾಗೂ ಕಳಪೆ ಬೀಜವನ್ನು ಸರಬರಾಜು ಮಾಡುವುದು ಇತ್ಯಾದಿ ಅವ್ಯವಹಾರದಿಂದ ರೈತರಿಗೆ ಅನ್ಯಾಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.
ಹತ್ತಿ ಬೆಳೆಗಾರರು ಮಾರುಕಟ್ಟೆಯಲ್ಲಿರುವ ವಿವಿಧ ತಳಿಗಳನ್ನು ಲಭ್ಯತೆಯ ಮೇಲೆ ಆಯ್ಕೆ ಮಾಡಿಕೊಳ್ಳಬೇಕು. ಆದರೆ, ಕೊಳ್ಳುವ ಮುನ್ನ ಪ್ಯಾಕೇಟ್ನ್ನು ಪರಿಶೀಲಿಸಿ, ತಯಾರಕರ ಕಂಪನಿಯ ಪೂರ್ಣ ಹೆಸರು ಹಾಗೂ ವಿಳಾಸ ಸರಿ ಇದೆಯೇ? ಎಂಬುದನ್ನು ಹಾಗೂ ಅದರೊಂದಿಗೆ ನಿಜ ಚೀಟಿ ಪತ್ರ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
ಬಿತ್ತನೆ ಬೀಜವನ್ನು ಅಧಿಕೃತ ಪರವಾನಿಗೆ ಹೊಂದಿದವರಿಂದ ಕೊಂಡುಕೊಳ್ಳಬೇಕು ಹಾಗೂ ಮಾರಾಟಗಾರರಿಂದ ಕಡ್ಡಾಯವಾಗಿ ರಶೀದಿಯನ್ನು ಕೇಳಿ ಪಡೆಯಬೇಕು. ಆ ತಳಿಯ ಬೇಸಾಯ ಪದ್ಧತಿಯ ಬಗ್ಗೆ ಕರಪತ್ರವನ್ನು ಪಡೆಯಬೇಕು. ಬಿತ್ತನೆ ಮಾಡಿದ ನಂತರ ಬೆಳೆ ಕಟಾವು ಆಗುವ ತನಕ ಬೀಜದ ಚೀಲ, ಅಲ್ಪ ಪ್ರಮಾಣದ ಬೀಜ, ರಸೀದಿ ಹಾಗೂ ಕರಪತ್ರವನ್ನು ಕಾಯ್ದಿರಿಸಿಕೊಳ್ಳಬೇಕು. ಬೆಳೆಯಲ್ಲಿ ಸಮಸ್ಯೆ ಬಂದರೆ ಇವುಗಳು ಪ್ರಯೋಜನಕ್ಕೆ ಬರುತ್ತವೆ.
ಬಿ.ಟಿ.ಹತ್ತಿಯ ಪ್ರತಿ ಪ್ಯಾಕೇಟ್ ಜೊತೆ 125 ಗ್ರಾಂ. ಬಿ.ಟಿ.ಯೇತರ (ರೆಪ್ಯೂಜಿ) ಬೀಜಗಳನ್ನು ನೀಡುತ್ತಿದ್ದು, ರೈತರು ತಮ್ಮ ಹೊಲದ ಸುತ್ತಲು 4 ಸಾಲಿನಲ್ಲಿ ಈ ಬೀಜಗಳನ್ನು ಕಡ್ಡಾಯವಾಗಿ ಬಿತ್ತನೆ ಮಾಡಬೇಕು.
ಇದರಿಂದ ಕಾಯಿಕೊರಕ ಹುಳುವಿನಲ್ಲಿ ಬಿ.ಟಿ. ನಿರೋಧಕ ಶಕ್ತಿಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಹಾಗೂ ಕಾಯಿಕೊರಕದ ಬಾಧೆಯನ್ನು ಗುರುತಿಸಲು ಅನುಕೂಲವಾಗುತ್ತದೆ.
ಕೆಲವೊಂದು ರೈತರು ಬಿ.ಟಿಯೇತರ ಬೀಜವನ್ನು ಹುಸಿ ಗುಣಿಗಳಲ್ಲಿ ಬಳಸುತ್ತಿರುವುದು ಕಂಡು ಬರುತ್ತದೆ. ಆದರೆ, ಹುಸಿಗುಣಿಗಳಿಗಾಗಿ ಬಳಸದೇ ನೀಡಿರುವ ಸಲಹೆಯಂತೆ ಅನುಸರಿಸ ಬೇಕು.