ಬಂಡೀಪುರ; ಕಾರ್ಯಾಚರಣೆಗೆ ಸಿಗದ ಹುಲಿ, ನಿಲ್ಲುತ್ತಿಲ್ಲ ಜಾನುವಾರು ಬಲಿ...
ಚಾಮರಾಜನಗರ, ಏಪ್ರಿಲ್ 22: ಗುಂಡ್ಲುಪೇಟೆ ಬಂಡೀಪುರ ಅಭಯಾರಣ್ಯದ ಕುಂದಕರೆ ವಲಯದ ಕಾಡಂಚಿನ ಗ್ರಾಮದಲ್ಲಿ ಪಶುಭಕ್ಷಕ ಹುಲಿ ಸೆರೆಗೆ ಸಾಕಾನೆಗಳ ಸಹಕಾರದಿಂದ ಹುಡುಕಾಟ ನಡೆಸುತ್ತಿದ್ದರೂ ಅದು ಮಾತ್ರ ಹೊಂಚು ಹಾಕಿ ಜಾನುವಾರುಗಳನ್ನು ಬಲಿತೆಗೆದುಕೊಳ್ಳುತ್ತಲೇ ಇದೆ.
ಒಂದೆಡೆ ಹುಡುಕಾಟ ನಡೆಯುತ್ತಿದೆ. ಮತ್ತೊಂದೆಡೆ ಹುಲಿ ಮತ್ತೊಂದು ಎತ್ತನ್ನು ಬಲಿ ಪಡೆಯುವುದರ ಮೂಲಕ ಇದುವರೆಗೆ ಆರು ಜಾನುವಾರುಗಳನ್ನು ಕೊಂದು ಹಾಕಿದೆ. ಈಗಾಗಲೇ ಸಿಸಿ ಕ್ಯಾಮರಾದಲ್ಲಿ ಹುಲಿ ಓಡಾಡಿರುವ ದೃಶ್ಯ ಸೆರೆಯಾಗಿದೆ. ಇದೀಗ ಇದೇ ಹುಲಿ ಕಾಡಂಚಿನ ಕಡಬೂರು, ಕುಂದಕೆರೆ, ಚಿರಕನಹಳ್ಳಿ ಗ್ರಾಮಗಳಲ್ಲಿ ಅಡ್ಡಾಡುತ್ತಾ ಐದು ಹಸು ಒಂದು ಎತ್ತು ಹಾಗೂ ಎರಡು ಮೇಕೆಗಳನ್ನು ಬಲಿ ತೆಗೆದುಕೊಂಡಿದೆ.
ಕ್ಯಾಮೆರಾದಲ್ಲಿ ಹುಲಿ ಚಿತ್ರ ಸೆರೆ; ಬಂಡೀಪುರದಲ್ಲಿ ಆನೆಗಳಿಂದ ಕಾರ್ಯಾಚರಣೆ
ಹುಲಿಯನ್ನು ಅರಣ್ಯ ಇಲಾಖೆ ನಾಲ್ಕು ಸಾಕಾನೆಗಳ ಮೂಲಕ ಹುಡುಕಾಟ ನಡೆಸುತ್ತಿದ್ದರಿಂದ ಕಾಡಂಚಿನ ಗ್ರಾಮದ ಉಪಕಾರ ಗ್ರಾಮದ ಬೆಳ್ಳಯ್ಯ ಎಂಬುವರು ಧೈರ್ಯವಾಗಿಯೇ ತಮಗೆ ಸೇರಿದ ಜಮೀನಿನಲ್ಲಿ ಎತ್ತನ್ನು ಮೇಯಿಸುತ್ತಿದ್ದರು. ಈ ವೇಳೆ ದಿಢೀರ್ ಆಗಿ ಎತ್ತಿನ ಮೇಲೆ ಹುಲಿ ದಾಳಿ ಮಾಡಿದೆ. ಹುಲಿಯನ್ನು ಸೆರೆ ಹಿಡಿಯಲು ಎಲ್ಲ ರೀತಿಯಲ್ಲಿಯೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿಯ ಸುಳಿವು ಸಿಕ್ಕಿಲ್ಲ. ಪತ್ತೆಗಾಗಿ 25 ಕ್ಯಾಮರಾ ಅಳವಡಿಸಲಾಗಿದೆ. ಮೂರು ಬೋನ್ ಇಡಲಾಗಿದೆ. ಆದರೆ ಹುಲಿ ಯಾವ ಕಡೆಗಳಲ್ಲಿ ಅಡ್ಡಾಡುತ್ತಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಇದೀಗ ಎತ್ತಿನ ಮೇಲೆ ದಾಳಿ ಮಾಡಿರುವ ಕಾರಣ ಹುಲಿ ಯಾವಾಗ ಎಲ್ಲಿ ದಾಳಿ ಮಾಡಿಬಿಡುತ್ತದೆಯೋ ಎಂಬ ಭಯ ಕಾಡುತ್ತಲೇ ಇದೆ. ಮುಂಗಾರು ಆರಂಭವಾಗುತ್ತಿರುವ ಕಾರಣ ರೈತಾಪಿ ವರ್ಗ ಜಮೀನಿನತ್ತ ಹೋಗಲೇಬೇಕಾಗಿದೆ. ಹೀಗಿರುವಾಗ ಹುಲಿ ರೈತರ ಮೇಲೆ ದಾಳಿ ಮಾಡಿದರೆ ಎಂಬ ಭಯದಿಂದ ರೈತರು ಜಮೀನಿಗೆ ಹೋಗಲು ಭಯ ಪಡುತ್ತಿದ್ದಾರೆ. ಯಾವಾಗ ಹುಲಿಯನ್ನು ಸೆರೆ ಹಿಡಿಯುತ್ತಾರೋ ಎಂದು ರೈತರು ಕಾಯುತ್ತಿದ್ದಾರೆ.