ಪಶ್ಚಿಮ ಬಂಗಾಳದ ಮೂರು ಐಪಿಎಸ್ ಅಧಿಕಾರಿಗಳು ಕೇಂದ್ರಕ್ಕೆ
ನವದೆಹಲಿ, ಡಿಸೆಂಬರ್ 12: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ನೀಡಿದ್ದ ಸಂದರ್ಭ ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದ್ದು, ಭದ್ರತಾ ವೈಫಲ್ಯದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಶನಿವಾರ ಪಶ್ಚಿಮ ಬಂಗಾಳದ ಮೂರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲು ನಿಯೋಜಿಸಿದೆ.
ಕೇಂದ್ರದ ಈ ನಡೆ ರಾಜ್ಯದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವಿನ ಕಾದಾಟವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ಪಶ್ಚಿಮ ಬಂಗಾಳ ಕೇಡರ್ ನಲ್ಲಿರುವ ಮೂವರು ಪೊಲೀಸ್ ಅಧಿಕಾರಿಗಳನ್ನು ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಕರೆ ನೀಡಲಾಗಿದ್ದು, ಇದಕ್ಕೆ ಜೆ.ಪಿ. ನಡ್ಡಾ ಭೇಟಿ ಸಂದರ್ಭ ಭದ್ರತಾ ವೈಫಲ್ಯದ ಆರೋಪವೇ ಕಾರಣ ಎನ್ನಲಾಗಿದೆ. ಅಖಿಲ ಭಾರತ ಸೇವಾ ಅಧಿಕಾರಿಗಳ ಆಡಳಿತ ನಿಯಮಗಳ ಅಡಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರದ ಸಮನ್ಸ್ಗೆ ಸೆಡ್ಡುಹೊಡೆದ ಮಮತಾ: ಅಧಿಕಾರಿಗಳನ್ನು ಕಳುಹಿಸಲು ನಕಾರ
ಗುರುವಾರ, ಡಿಸೆಂಬರ್ 10ರಂದು ಡೈಮಂಡ್ ಹಾರ್ಬರ್ ಗೆ ಪ.ಬಂಗಾಳ ಚುನಾವಣೆ 2021ರ ಸಲುವಾಗಿ ಪಕ್ಷದ ಸಭೆಗೆ ತೆರಳುತ್ತಿದ್ದ ಸಂದರ್ಭ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶದ ವಿಜಯವರ್ಗಿಯಾ ಅವರ ಕಾರಿನ ಮೇಲೆ ಕಲ್ಲು ತೂರಲಾಗಿತ್ತು. ಈ ಘಟನೆಗೆ ಬಿಜೆಪಿ, ಟಿಎಂಸಿಯನ್ನು ಹೊಣೆ ಮಾಡಿದ್ದು, ರಾಜ್ಯದಲ್ಲಿ ಟಿಎಂಸಿ-ಬಿಜೆಪಿ ನಡುವಿನ ಕಾದಾಟ ಇನ್ನಷ್ಟು ಹೆಚ್ಚಾಗಿದೆ.