"ಇದು ಸ್ವಾಭಿಮಾನದ ರ್ಯಾಲಿ"; ಬೃಹತ್ ಹೋರಾಟಕ್ಕೆ ರೈತರ ತಾಲೀಮು
ನವದೆಹಲಿ, ಜನವರಿ 07: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಸುಮಾರು ಒಂದೂವರೆ ತಿಂಗಳಿನಿಂದಲೂ ದೆಹಲಿಯ ಗಡಿಗಳಲ್ಲಿ ರೈತರು ಹೋರಾಟ ಮುಂದುವರೆಸಿದ್ದಾರೆ. ಕೇಂದ್ರದೊಂದಿಗೆ ನಡೆದ ಏಳನೇ ಸುತ್ತಿನ ಮಾತುಕತೆಯೂ ವಿಫಲವಾಗಿದ್ದು, ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಕೇಂದ್ರ ನಿರಾಕರಿಸಿದೆ.
ಕೇಂದ್ರದ ಈ ನಡೆಯನ್ನು ಖಂಡಿಸಿ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ತಮ್ಮ ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಗುರುವಾರ ಸಾವಿರಾರು ರೈತರು ದೆಹಲಿ ಗಡಿಗಳಲ್ಲಿ ಟ್ರ್ಯಾಕ್ಟರ್ ಗಳ ಮೆರವಣಿಗೆ ಹಮ್ಮಿಕೊಂಡು ತಾಲೀಮು ನಡೆಸಿದ್ದಾರೆ. ಮುಂದೆ ಓದಿ...
ಬೇಡಿಕೆ ಈಡೇರದಿದ್ದರೆ ಗಣರಾಜ್ಯ ದಿನದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಮೆರವಣಿಗೆ
ಸಾವಿರಾರು ರೈತರಿಂದ ಟ್ರ್ಯಾಕ್ಟರ್ ರ್ಯಾಲಿ ಪೂರ್ವಾಭ್ಯಾಸ
ದೆಹಲಿಯ ಮೂರು ಗಡಿ ಪ್ರದೇಶಗಳಲ್ಲಿನ ಪ್ರತಿಭಟನಾ ಸ್ಥಳಗಳಲ್ಲಿ ಸಾವಿರಾರು ರೈತರು ಟ್ರ್ಯಾಕ್ಟರ್ ಮೆರವಣಿಗೆ ಹಮ್ಮಿಕೊಂಡು ತಾಲೀಮು ನಡೆಸುತ್ತಿರುವ ದೃಶ್ಯ ಗುರುವಾರ ಕಂಡುಬಂದಿತು. ಪೊಲೀಸರು ಗಡಿ ಪ್ರದೇಶಗಳಲ್ಲಿ ಸೂಕ್ತ ಭದ್ರತೆಯನ್ನು ಒದಗಿಸಿದ್ದರು. ಸಿಂಘು, ಟಿಕ್ರಿ, ಘಾಜಿಪುರ ಗಡಿ ಪ್ರದೇಶಗಳಲ್ಲಿ ತಮ್ಮ ಮುಂದಿನ ಬೃಹತ್ ಪ್ರತಿಭಟನೆಗೆ ರೈತರು ಸಜ್ಜಾಗುತ್ತಿದ್ದಾರೆ.
ರ್ಯಾಲಿಯಲ್ಲಿ 3,500 ಟ್ರ್ಯಾಕ್ಟರ್
ಮೆರವಣಿಗೆಯಲ್ಲಿ 3,500 ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳೊಂದಿಗೆ ಗಣರಾಜ್ಯೋತ್ಸವದಂದು ರ್ಯಾಲಿ ನಡೆಸುವುದಾಗಿ ಭಾರತೀಯ ಕಿಸಾನ್ ಸಂಘದ ಮುಖ್ಯಸ್ಥ ಜೋಗಿಂದರ್ ಸಿಂಗ್ ತಿಳಿಸಿದ್ದಾರೆ. ಗುರುವಾರ ಹಮ್ಮಿಕೊಂಡಿರುವ ಈ ರ್ಯಾಲಿ, ಗಣರಾಜ್ಯೋತ್ಸವದಂದು ನಡೆಸುವ ಪ್ರತಿಭಟನೆಯ ತಾಲೀಮಾಗಿದ್ದು, ಅಂದು ದೆಹಲಿಗೆ ಹರಿಯಾಣ, ಪಂಜಾಬ್ ಹಾಗೂ ಉತ್ತರ ಪ್ರದೇಶದಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಗಣರಾಜ್ಯೋತ್ಸವ ದಿನದಂದು ಸೇನಾ ಪಡೆಗಳ ಪಥಸಂಚಲನದ ಜತೆ ಕಿಸಾನ್ ಪಥಸಂಚಲನ ನಡೆಯಲಿದೆ. ಇದು ಗಣರಾಜ್ಯೋತ್ಸವದ ಮರುದಿನ ನಡೆಯಲಿದೆ ಎಂದು ರೈತ ಮುಖಂಡ ದರ್ಶನ್ ಪಾಲ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಮಾತುಕತೆ ವಿಫಲಗೊಂಡರೆ ಹರಿಯಾಣದ ಮಾಲ್ಗಳು, ಪೆಟ್ರೋಲ್ ಪಂಪ್ ಮುಚ್ಚುತ್ತೇವೆ: ರೈತ ಸಂಘಟನೆ
ಏಳನೇ ಸುತ್ತಿನ ಮಾತುಕತೆ ಫಲ ನೀಡಿಲ್ಲ
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ಸುಮಾರು 40 ರೈತ ಸಂಘಟನೆಗಳು ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ಈ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಇದುವರೆಗೂ ಏಳು ಸುತ್ತಿನ ಮಾತುಕತೆಗಳು ನಡೆದಿದ್ದು, ಎಲ್ಲಾ ಮಾತುಕತೆಗಳ ವಿಫಲವಾಗಿವೆ. ಕೇಂದ್ರ ಈ ಕೃಷಿ ಕಾಯ್ದೆಗಳ ರದ್ದತಿ ಬೇಡಿಕೆಯನ್ನು ನಿರಾಕರಿಸಿದೆ.
"ಇದು ಸ್ವಾಭಿಮಾನದ ಹೋರಾಟ"
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ತನ್ನ ಹಟ ಮುಂದುವರೆಸಿದೆ. ರೈತರ ವಿರೋಧಿ ಕಾಯ್ದೆಗಳನ್ನು ಪರಿಚಯಿಸಿ ನಮ್ಮ ಬದುಕಿಗೆ ಅಡ್ಡಿಯಾಗಿದೆ. ನಾವೂ ಹಟ ಬಿಡದೇ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ. ಇದು ರೈತರ ಸ್ವಾಭಿಮಾನದ ಹೋರಾಟ. ಇಲ್ಲಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಭಾರತೀಯ ಕಿಸಾನ್ ಸಂಘದ ಮುಖ್ಯಸ್ಥ ಜೋಗಿಂದರ್ ಸಿಂಗ್ ಪುನರುಚ್ಚರಿಸಿದ್ದಾರೆ.