ಕೃಷಿ ಕಾಯ್ದೆ ವಿರೋಧಿಸಿ ಪಾಟ್ನಾದಲ್ಲಿ ಸಾವಿರಾರು ಜನರಿಂದ ಪ್ರತಿಭಟನೆ; ಲಾಠಿ ಚಾರ್ಜ್
ಪಾಟ್ನಾ, ಡಿಸೆಂಬರ್ 29: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಪಾಟ್ನಾದಲ್ಲಿ ಮಂಗಳವಾರ ಸಾವಿರಾರು ಜನರು ಪ್ರತಿಭಟನೆ ಕೈಗೊಂಡಿದ್ದು, ರಾಜಭವನಕ್ಕೆ ಮೆರವಣಿಗೆ ಹೊರಟಿದ್ದ ಸಂದರ್ಭ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ನಡೆದಿದೆ.
ಮಂಗಳವಾರ ಸಾವಿರಾರು ಪ್ರತಿಭಟನಾಕಾರರು ಪಾಟ್ನಾದ ಗಾಂಧಿ ಮೈದಾನದಲ್ಲಿ ಜಮಾಯಿಸಿದ್ದರು. ಈ ಸಂದರ್ಭ ಮೈದಾನದ ಗೇಟ್ ಮುರಿದಿದ್ದು, ರಾಜಭವನಕ್ಕೆ ಮೆರವಣಿಗೆ ಹೊರಟಿದ್ದ ಸಂದರ್ಭ ಪೊಲೀಸರು ಅವರನ್ನು ಡಾಕ್ ಬಂಗ್ಲೋ ಚೌಕ್ ಬಳಿ ತಡೆದಿದ್ದಾರೆ. ಜನರನ್ನು ತಡೆಯಲು ಬ್ಯಾರಿಕೇಡ್ ಗಳನ್ನು ಅಳವಡಿಸಿ ಗಲಭೆ ಸೃಷ್ಟಿಯಾಗಿದ್ದು, ಲಘು ಲಾಠಿ ಪ್ರಹಾರ ನಡೆಸಲಾಗಿದೆ.
ಮಾತುಕತೆಗೆ ಮುನ್ನವೇ ಬೃಹತ್ ಹೋರಾಟಕ್ಕೆ ಸಿದ್ಧಗೊಳ್ಳುತ್ತಿದೆ ವೇದಿಕೆ
ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಈ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾಗಿ ತಿಳಿದುಬಂದಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ತಿಂಗಳಿನಿಂದಲೂ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಡಿ.30ರಂದು ರೈತರು ಹಾಗೂ ಸರ್ಕಾರದ ನಡುವೆ ಮಾತುಕತೆ ನಡೆಯಲಿದ್ದು, ಕೃಷಿ ಕಾಯ್ದೆಗಳನ್ನು ರದ್ದುಪಡಿಸಲೇಬೇಕೆಂದು ರೈತರು ಪಣ ತೊಟ್ಟಿದ್ದಾರೆ.
ದೆಹಲಿಯಲ್ಲಿನ ಪ್ರತಿಭಟನಾನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಪಾಟ್ನಾದಲ್ಲಿಯೂ ಇಂದು ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ರೈತ ಸಂಘಗಳು, ಎಡಪಕ್ಷಗಳು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದವು ತಿಳಿದುಬಂದಿದೆ.