ರಾಜಧಾನಿಯಲ್ಲಿ ಅನ್ನದಾತನ ಅಬ್ಬರ, ರಾಮಲೀಲಾದಲ್ಲಿ ರೈತ ಸಾಗರ!
ನವದೆಹಲಿ, ನವೆಂಬರ್ 30: ರಾಜಧಾನಿ ದೆಹಲಿಯಲ್ಲಿ ಗುರುವಾರ ಬೆಳಗ್ಗಿನಿಂದಲೂ ಅನ್ನದಾತನ ಪ್ರತಿಭಟನೆ ಆರಂಭವಾಗಿದ್ದು, ರಾಮಲೀಲಾ ಮೈದಾನದಲ್ಲಿ ರೈತ ಸಾಗರವೇ ಸೃಷ್ಟಿಯಾಗಿದೆ.
ಸಾಲಮನ್ನಾ ಮತ್ತು ಬೆಳೆಗಳಿಗೆ ಉತ್ತಮ ಬೆಲೆ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಈ ಪ್ರತಿಭಟನೆಗೆ ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮಬಂಗಾಳ, ಉತ್ತರ ಪ್ರದೇಶ ಸೇರದಂತೆ ಯಹಲವು ರಾಜ್ಯಗಳಿಂದ ರೈತರು ತೆರಳಿದ್ದಾರೆ.
ದೆಹಲಿಯಲ್ಲಿ ಲಕ್ಷಾಂತರ ಅನ್ನದಾತರ ಪ್ರತಿಭಟನೆ: ಸರ್ಕಾರ, ಮಾಧ್ಯಮಗಳ ನಿರ್ಲಕ್ಷ್ಯ
ಎಡಪಕ್ಷಗಳ ಬೆಂಬಲದಿಂದ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಕೆಂಪು ಬಾವುಟಗಳೇ ರಾರಾಜಿಸುತ್ತಿದ್ದು, ಎರಡು ದಿನಗಳ ಕಾಲ ಪ್ರತಿಭಟನೆ ನಡೆಯಲಿದೆ.
ರಾಮಲೀಲಾ ಮೈದಾನದ ಐದು ಬೇರೆ ಬೇರೆ ಸ್ಥಳಗಳಿಂದ 25 ಕಿ.ಮೀ.ದೂರದವರೆಗೆ ನಡೆದು ಸಾಗಿ ಪ್ರತಿಭಟನೆ ಮಾಡಲು ರೈತ ಸಮುದಾಯ ನಿರ್ಧರಿಸಿದೆ. ಅಷ್ಟೇ ಅಲ್ಲ, 'ಅಯೋಧ್ಯೆ ಬೇಡ, ಮೊದಲು ಸಾಲಮನ್ನಾ ಮಾಡಿ' ಎಂದು ರೈತರು ಘೋಷಣೆ ಕೂಗುತ್ತಿದ್ದು, ಶುಕ್ರವಾರ ಸಂಸತ್ತಿಗೆ ಮುತ್ತಿಗೆ ಹಾಕುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ 3500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.