"ಅರಾಜಕತೆಯಲ್ಲದೇ ಮತ್ತೇನು?" ಬೋರ್ವೆಲ್ ಕೊರೆಸಿದ ರೈತರ ಮೇಲೆ ಬಿಜೆಪಿ ಆಕ್ರೋಶ
ನವದೆಹಲಿ, ಮಾರ್ಚ್ 03: ಕೇಂದ್ರ ಸರ್ಕಾರ ಪರಿಚಯಿಸಿರುವ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ರೈತರು ಹೋರಾಟ ಮುಂದುವರೆಸಿದ್ದಾರೆ. ಆದರೆ ಗಡಿಗಳಲ್ಲಿ ರೈತರಿಗೆ ನೀರಿನ ಸೌಲಭ್ಯ ಸಿಗದೇ ತಾವೇ ಬೋರ್ವೆಲ್ಗಳನ್ನು ಕೊರೆಸಲು ಮುಂದಾಗಿದ್ದಾರೆ. ರೈತರ ಈ ನಡೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರು ಇದುವರೆಗೂ ಮೂರು ಬೋರ್ವೆಲ್ಗಳನ್ನು ಕೊರೆಸಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, "ಕೃಷಿ ಕಾಯ್ದೆಗಳ ವಿರುದ್ಧ ನಮ್ಮ ಹೋರಾಟ ದೀರ್ಘಾವಧಿಯದ್ದಾಗಿದೆ. ಸರ್ಕಾರ ನಮ್ಮ ಮಾತನ್ನು ಕೇಳುತ್ತಿಲ್ಲ. ಹೀಗಾಗಿ ಇಂಥ ಕ್ರಮ ಅನಿವಾರ್ಯವಾಗಿದೆ" ಎಂದು ಭಾರತೀಯ ಕಿಸಾನ್ ಸಂಘದ ಮಂಜಿಂದರ್ ಸಿಂಗ್ ರೈ ಉತ್ತರಿಸಿದ್ದಾರೆ.
"ಬಿಜೆಪಿ ವಿರುದ್ಧ ಪ್ರಚಾರಕ್ಕಾಗಿ ಕೇರಳ, ಬಂಗಾಳಕ್ಕೆ ರೈತರ ತಂಡ"
"ಇದು ಸರ್ಕಾರದ ತಪ್ಪು. ಸರ್ಕಾರವೇ ನಮ್ಮನ್ನು ಇಲ್ಲಿವರೆಗೂ ಬರುವಂತೆ ಮಾಡಿದೆ. ತಿಂಗಳುಗಟ್ಟಲೆ ನಿಲ್ಲುವಂತೆ ಮಾಡಿದೆ. ಅಕ್ರಮವಾಗಿ ನಾವು ಏನನ್ನೂ ಮಾಡುತ್ತಿಲ್ಲ. ರಾಮಲೀಲಾ ಮೈದಾನದಲ್ಲಿ ಜಾಗ ಕೇಳಿದೆವು. ಅಲ್ಲಿ ಅನುಮತಿ ನೀಡಲಿಲ್ಲ. ಮತ್ತೆ ನಾವೇಕೆ ಅನುಮತಿ ಕೇಳಬೇಕು? ದೇಶಕ್ಕೆ ಅನ್ನದಾತರಾಗಿರುವ ನಮ್ಮ ಸಮಸ್ಯೆಯನ್ನೇ ಸರ್ಕಾರ ಕೇಳಲು ಸಿದ್ಧವಿಲ್ಲ. ನಾವು ಕೂಡ ಹಸಿವಿನಿಂದ ಸಾಯಲು ಸಿದ್ಧರಿಲ್ಲ. ರೈತರಿಗೆ ಸರ್ಕಾರ ನೀರು ಕೊಡುತ್ತಿಲ್ಲ. ನಮಗೆ ಬೇರೆ ದಾರಿ ಇಲ್ಲ. ಬೇಸಿಗೆ ಬರುತ್ತಿರುವುದರಿಂದ ಬೋರ್ವೆಲ್ ಕೊರೆಸಲೇಬೇಕಾಯಿತು" ಎಂದು ಮತ್ತೊಬ್ಬ ರೈತ ಆರೋಪಿಸಿದ್ದಾರೆ.
ರೈತರು ಹೀಗೆ ಅಕ್ರಮವಾಗಿ ಬೋರ್ವೆಲ್ ಕೊರೆದಿರುವುದರ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. "ಬೋರ್ವೆಲ್ಗಳನ್ನು ಎಲ್ಲೆಂದರಲ್ಲಿ ಹೀಗೆ ತೋಡುವಂತಿಲ್ಲ. ಇದು ಅರಾಜಕತೆಯಲ್ಲದೇ ಮತ್ತೇನು" ಎಂದು ಬಿಜೆಪಿ ವಕ್ತಾರ ಆರ್.ಪಿ. ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಕಳೆದ ನವೆಂಬರ್ 26 ರಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ರೈತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ.