"ಪಿಜ್ಜಾ ತಿಂದುಕೊಂಡು ಆರಾಮಾಗಿರುವ ಇವರು ನಕಲಿ ರೈತರು"
ಬೆಂಗಳೂರು, ಜನವರಿ 12: "ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಲು ಹಣ ನೀಡಿ ಜನರನ್ನು ಕರೆದುಕೊಂಡು ಬರಲಾಗಿದೆ" ಎಂದು ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಆರೋಪಿಸಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಕೋಲಾರದ ಬಿಜೆಪಿ ಸಂಸದ ಮುನಿಸ್ವಾಮಿ, "ಅಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಮಧ್ಯವರ್ತಿಗಳು ಹಾಗೂ ನಕಲಿ ರೈತರು. ಪಿಜ್ಜಾ, ಬರ್ಗರ್, ಕೆಎಫ್ ಚಿಕನ್ ತಿಂದುಕೊಂಡು, ಜಿಮ್ ಮಾಡುತ್ತ ಆರಾಮಾಗಿದ್ದಾರೆ. ಈ ನಾಟಕವನ್ನು ಮೊದಲು ನಿಲ್ಲಿಸಬೇಕು" ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆ: ಟ್ರ್ಯಾಕ್ಟರ್ Rally ವಿರುದ್ಧ ಸುಪ್ರೀಂಕೋರ್ಟ್ಗೆ ಕೇಂದ್ರದ ಅರ್ಜಿ
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ದೆಹಲಿ ಗಡಿಗಳಲ್ಲಿ ಸುಮಾರು 40 ರೈತ ಸಂಘಟನೆಯ ರೈತ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಅವರ ಪ್ರತಿಭಟನೆ 48ನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಹಾಗೂ ಕೇಂದ್ರದ ನಡುವಿನ ಮುಂದಿನ ಮಾತುಕತೆ ಜನವರಿ 15ಕ್ಕೆ ನಿಗದಿಯಾಗಿದೆ. ಸೋಮವಾರ ಈ ಕುರಿತು ಮಧ್ಯೆ ಪ್ರವೇಶಿಸಿರುವ ಸುಪ್ರೀಂ ಕೋರ್ಟ್, ಈ ಬಿಕ್ಕಟ್ಟಿಗೆ ಪರಿಹಾರ ಸೂಚಿಸದ ಕಾರಣ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಇದೇ ಸಂದರ್ಭ, ಡಿಸೆಂಬರ್ 12ರಂದು ವಿಸ್ಟ್ರಾನ್ ಕಂಪನಿ ಮೇಲಿನ ದಾಳಿ ಕುರಿತು ಪ್ರತಿಕ್ರಿಯೆ ನೀಡಿದ ಮುನಿಸ್ವಾಮಿ ಅವರು, "ವಿಸ್ಟ್ರಾನ್ ತನ್ನ ಕೆಲಸಗಾರರಿಗೆ ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ ಎಂಬ ಕಾರಣಕ್ಕೆ ಗಲಭೆ ನಡೆದಿದೆ. ಕಮ್ಯುನಿಸ್ಟ್ ಗಳು ಸೇರಿ ವಾಟ್ಸ್ ಆಪ್, ಫೇಸ್ ಬುಕ್ ಮೂಲಕ ಗಲಭೆ ಎಬ್ಬಿಸಿದ್ದಾರೆ" ಎಂದು ದೂರಿದರು.