ಸಿಖ್ಖರ ಧರ್ಮ ಧ್ವಜಕ್ಕೂ, ರೈತ ಚಳವಳಿಗೂ ಸಂಬಂಧವಿಲ್ಲ
ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿದ್ದ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕೆಂಬ ರೈತರ ಹೋರಾಟವನ್ನು ಸರ್ಕಾರ "ಇದು ಕೆಲವೇ ಮಂದಿಯ ಅಥವಾ ಪಂಜಾಬ್ ರೈತರ ತಕರಾರು, ಹೋರಾಟವಲ್ಲ" ಎಂದು ಹೇಳಿತ್ತು. ವಾಸ್ತವವಾಗಿ ಇಡೀ ದೇಶದ ರೈತರು ಈ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕೆಂದು ಹೇಳಿ ಹೋರಾಟ ನಡೆಸುತ್ತಿದ್ದಾರೆ.
ಗಣರಾಜ್ಯ ದಿನದಂದು ದಿಲ್ಲಿಯಲ್ಲಿ ಟ್ರಾಕ್ಟರ್ ಪರೇಡ್ ನಡೆಸುತ್ತಿರುವ ರೈತರನ್ನು ಎಲ್ಲೆಡೆ ಅಡ್ಡಿಪಡಿಸಿ ಅವರ ಶಾಂತಿಯುತ ಮಾರ್ಗಕ್ಕೆ ತೊಡರುಗಾಲಾದ ಪೊಲೀಸ್/ಮಿಲಿಟರಿಯ ನಡೆಯ ವಿರುದ್ಧ ಮತ್ತು ಸರ್ಕಾರದ ಈ ನಿರ್ಧಾರದ ವಿರುದ್ಧ ಬಂಡೆದ್ದು ರೈತರು ಕೆಂಪು ಕೋಟೆಯನ್ನು ಪ್ರವೇಶಿಸಿದ್ದಾರೆ.
ಕೆಂಪುಕೋಟೆಯಲ್ಲಿ ಹಾರಿದ ರೈತರ ಧ್ವಜ: ದಿಕ್ಕುತಪ್ಪಿದ ಟ್ರ್ಯಾಕ್ಟರ್ ಪರೇಡ್, ಸದ್ಯ ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್
ಅಲ್ಲೊಂದು ಘಟನೆ ನಡೆದಿದೆ
ಕೆಂಪು ಕೋಟೆಯ ಒಂದು ಭಾಗದಲ್ಲಿ ಹಾರಿಸಿದ್ದ ತ್ರಿವರ್ಣ ಧ್ವಜವನ್ನು ಇಳಿಸಿ ಸಿಖ್ಖರ ಪವಿತ್ರ ಧರ್ಮ ಧ್ವಜವನ್ನು ಹಾರಿಸಿದ್ದಾರೆ. ಇದು ಹೋರಾಟನಿರತ ಮಂದಿ ನ್ಯಾಯಮಾರ್ಗದ ಚಳವಳಿಗೆ ಅಥವಾ ತಾವು ಬಯಸಿರುವ ನ್ಯಾಯವನ್ನು ತಾವು ಪಡೆಯಲು ಬೇಕಾದ ಮನೋಸ್ಥೈರ್ಯ ಅಥವಾ ಶಕ್ತಿ ಪುನಃಸ್ಥಾಪಿಸಿಕೊಳ್ಳಲು ಮಾಡಿರಬಹುದಾದ ಭಾವನಾತ್ಮಕ ನಡೆ ಎಂದು ಅನ್ನಿಸಬಹುದು.
ಸಿಖ್ಖರ ಪವಿತ್ರ ಧರ್ಮ ಧ್ವಜವನ್ನು ಹಾರಿಸುವುದು ಇಂದಿನ ರೈತ ಚಳವಳಿಯ/ಮೆರವಣಿಗೆಯ ಉದ್ದೇಶವಾಗಿರಲಿಲ್ಲ ಎಂದು ಹೋರಾಟ ನಿರತ ರೈತ ಮುಖಂಡರು ಸ್ಪಷ್ಟ ಪಡಿಸಿದ್ದಾರೆ.
ಒಂದು ಘಟನೆ ನಿಮ್ಮ ಗಮನದಲ್ಲಿರಲಿ. 1980ರ ದಶಕದಲ್ಲಿ ಬೆಂಗಳೂರು ವಿಧಾನಸಭೆಯೊಳಗೆ ಗ್ಯಾಲರಿಯಲ್ಲಿ ರೈತ ಸಂಘಟನೆಯ ಕಾರ್ಯಕರ್ತರು ಒಂದಿಷ್ಟು ಕರಪತ್ರಗಳನ್ನು ಹಿಡಿದು ಕುಳಿತಿದ್ದರು. ಅಂದಿನ ಉದ್ದೇಶ ಬರಗಾಲ ಪ್ರದೇಶಗಳಿಗೆ ಭೇಟಿ ಕೊಡದ ಶಾಸಕರುಗಳಿಗೆ ಧಿಕ್ಕಾರ ಕೂಗುವುದು ಮತ್ತು ಸಭೆಗೆ ಅಡ್ಡಿಪಡಿಸುವುದಾಗಿತ್ತು.
Farmers Protest Live Updates: ದೆಹಲಿಯಲ್ಲಿ ರೈತರ ಪ್ರತಿಭಟನೆ; ಗೃಹ ಸಚಿವರ ಮಹತ್ವದ ಸಭೆ
ಸದನದ ಕಲಾಪ ಆರಂಭವಾಗುತ್ತಿದ್ದಂತೆ ರೈತ ಸಂಘದ ಕಾರ್ಯಕರ್ತರು ಕರಪತ್ರಗಳನ್ನು ತೂರಿ ಬರಗಾಲ ಪ್ರದೇಶಗಳಿಗೆ ಭೇಟಿ ನೀಡದ ಶಾಸಕರುಗಳಿಗೆ ಧಿಕ್ಕಾರ ಎಂದು ಕೂಗತೊಡಗಿದರು. ಅದೇ ಗುಂಪಿನಲ್ಲಿದ್ದ ಮತ್ತೊಬ್ಬ ಕಾರ್ಯಕರ್ತ ಕನ್ನಡ ಬಾರದ ಶಾಸಕರಿಗೆ ಧಿಕ್ಕಾರ ಎಂದು ಕೂಗತೊಡಗಿದ. ಅದು ಅಂದಿನ ಚಳವಳಿಯ ಉದ್ದೇಶವಾಗಿರಲಿಲ್ಲ.
ಆದರೆ ಚಳವಳಿಯಲ್ಲಿ ಭಾಗಿಯಾಗಿದ್ದ ಆ ಕಾರ್ಯಕರ್ತ ತನ್ನ ಮನಸಿನ ಮಾತನ್ನು ಹೇಳಿದ್ದ. ಅದಕ್ಕೆ ಚಳವಳಿ ಹೊಣೆಯಾಗುವುದಿಲ್ಲ. ಅದೇ ರೀತಿ ಈಗ ನಡೆದಿರುವುದು ಸಹ ಸಿಖ್ಖರ ಪವಿತ್ರ ಧರ್ಮ ಧ್ವಜವನ್ನು ಹಾರಿಸಿರುವ ಪುಟ್ಟ ಗುಂಪೊಂದು ತಮ್ಮ ನೈತಿಕ ಸ್ಥೈರ್ಯ ಹೆಚ್ಚಿಸಿಕೊಳ್ಳಲು ಮಾಡಿರಬಹುದಾದ ಕೆಲಸವೇ ಹೊರತು, ಈಗ ನಡೆಯುತ್ತಿರುವ ರೈತ ಚಳವಳಿಗೂ ಈ ಘಟನೆಗೂ ಯಾವುದೇ ಸಂಬಂಧವಿರುವುದಿಲ್ಲ. ಅದನ್ನೇ ನೆಪವಾಗಿಟ್ಟುಕೊಂಡು ದೇಶದಾದ್ಯಂತ ನಡೆಯುತ್ತಿರುವ ಈ ಚಳವಳಿಯನ್ನು ಒಂದು ಜನಾಂಗಕ್ಕೋ ಅಥವಾ ಒಂದು ರಾಜ್ಯಕ್ಕೋ ಸಂಕುಚಿತಗೊಳಿಸಬಾರದು.