ತುರ್ತುಪರಿಸ್ಥಿತಿ ಮಾದರಿಯಲ್ಲೇ ದೇಶದ ಆಡಳಿತ ನಡೆಯುತ್ತಿದೆ; ಜನಾಂದೋಲನವೇ ಇದಕ್ಕೆ ಉತ್ತರ
"ಇದೀಗ ದೇಶದಲ್ಲಿ ರೈತರ ಮತ್ತು ಜನಸಾಮಾನ್ಯರ ಸ್ವಾತಂತ್ರ್ಯಹರಣ ಆಗ್ತಾ ಇದೆ. ಸರ್ವಾಧಿಕಾರಿ ಧೋರಣೆಯಲ್ಲಿ ಸರ್ಕಾರ ನಡೆಯುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ, ಯಾರೂ ಸಹಿಸಲೂಬಾರದು. ಹಿಂದೆ ಪ್ರಧಾನಮಂತ್ರಿ ಇಂದಿರಾಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಆಗ ವಾಕ್ ಸ್ವಾತಂತ್ರ್ಯದ ಹರಣವಾಗಿತ್ತು.
ಸ್ವಾತಂತ್ರ್ಯ ಅಥವಾ ಸರ್ಕಾರದ ವಿರುದ್ಧ ಮಾತಾಡುವಂತವರನ್ನು ಎಳೆದೆಳೆದು ಜೈಲಿಗೆ ತಳ್ಳುವಂಥ ಕೆಲಸವನ್ನು ಆಗ ಮಾಡಿದ್ದರು. ಅದನ್ನು ಪ್ರತಿಭಟಿಸಲು ನಾನಾ ರೀತಿಯ ಸಂಘಟನೆಗಳು, ಪಕ್ಷಗಳು ಸ್ವಾತಂತ್ರ್ಯ ಸೇನಾನಿಗಳು ಹಲವು ರೀತಿಯ ಪ್ರತಿರೋಧವನ್ನು ಒಡ್ಡಿದ್ದರು. ಪ್ರಜಾಪ್ರಭುತ್ವ ಉಳಿಸಬೇಕು, ಪ್ರಜಾಪ್ರಭುತ್ವ ನಾಶ ಆಗ್ತಿದೆ ಎಂಬ ಒಂದು ದೊಡ್ಡ ಧ್ವನಿ ಇಡೀ ದೇಶಾದ್ಯಂತ ಮೊಳಗಿತು. ಆ ಸಂದರ್ಭವನ್ನು ಇಂದಿಗೆ ಹೋಲಿಸಬಹುದಾಗಿದೆ. ನಾನು ಅಂದು ಕಂಡ ಎಮರ್ಜೆನ್ಸಿ ಇಂದು ಅಘೋಷಿತವಾಗಿ ದೇಶದೆಲ್ಲೆಡೆ ಜಾರಿಯಲ್ಲಿದೆ.''
ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ ಘೋಷಣೆಯ ಈ ಕಾರ್ಯಕ್ರಮ ಜೂನ್ 26 ರಂದೇ ಆಯೋಜನೆಗೊಂಡಿರುವುದಕ್ಕೆ ಐತಿಹಾಸಿಕ ಕಾರಣವಿದೆ. ಇದೇ ಜೂನ್ 26ಕ್ಕೆ ಭಾರತದಲ್ಲಿ ಎಮೆರ್ಜೆನ್ಸಿ ಹೇರಿ 46 ವರ್ಷವಾಯಿತು. (1975 ಜೂನ್ 25 ಮಧ್ಯರಾತ್ರಿ). ಈಗಲೂ ಅಘೋಷಿತ ತುರ್ತುಪರಿಸ್ಥಿತಿಯಲ್ಲೇ ಇದ್ದೇವೆ. ಈ ಕುರಿತು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮನದಾಳವನ್ನು ಒನ್ಇಂಡಿಯಾ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ..
ರೈತ ಚಳವಳಿ: ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆಯೇ!?
ಎಮರ್ಜೆನ್ಸಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿ ದೇಶ ಇದೆ
"ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ನಲ್ಲೇ ತಮ್ಮ ವಾದವನ್ನು ಮಂಡಿಸಿದ್ದರು. ಈಗ ದೇಶದಲ್ಲಿ ಅಘೋಷಿತ ಎಮರ್ಜೆನ್ಸಿ ಹೇರಲಾಗಿದೆ, ಪ್ರಜಾಪ್ರಭುತ್ವಹರಣ ನಡೆಯುತ್ತಿದೆ ಎಂದು. ಈ ವಿಷಯವನ್ನು ಕೋರ್ಟ್ ಸ್ವಯಂಪ್ರೇರಿತವಾಗಿ (ಸುಮೋಟೋ) ಕೇಸನ್ನು ದಾಖಲಿಸಿ ಸೂಕ್ತ ನ್ಯಾಯವನ್ನು ದೊರಕಿಸಿಕೊಡುವಂತೆ ಕೋರ್ಟಿನಲ್ಲಿ ಪ್ರಸ್ತಾಪಿಸಿದ್ದರು. ದೇಶದ ಮೂಲೆ ಮೂಲೆಯಲ್ಲಿ ಕೊರೊನಾ ಸಮಸ್ಯೆ ಒಂದಾದರೆ ಕೊರೊನಾ ನೆಪವನ್ನು ಇಟ್ಟುಕೊಂಡು ಇಡೀ ದೇಶ ಎಮರ್ಜೆನ್ಸಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿ ನಡೆಯುತ್ತಿದೆ. ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ನಮ್ಮ ಸಂಸ್ಕೃತಿಗಳು ನಾಶವಾಗುತ್ತಿವೆ.''
ದೇಶ- ದೇಶವಾಸಿಗಳನ್ನು ಕಂಪನಿಗಳ ಆಡಳಿತಕ್ಕೆ
"ಇದೇ ಸಂದರ್ಭದಲ್ಲಿ ಸರ್ಕಾರ ದೇಶ- ದೇಶವಾಸಿಗಳನ್ನು ಕಂಪನಿಗಳ ಆಡಳಿತಕ್ಕೆ ಕೊಡುತ್ತಿದೆ. ಹಿಂದೆ ಸ್ವಾತಂತ್ರ್ಯ ಚಳವಳಿ ಏನಿತ್ತು. ಬ್ರಿಟಿಷರೇ ದೇಶ ಬಿಟ್ಟು ತೊಲಗಿ ಎಂಬ ಕ್ವಿಟ್ ಇಂಡಿಯಾ ಚಳವಳಿ ಆಯಿತಲ್ಲಾ, ಹಾಗೆ ಇಂದು ನಾವು ಮಾಡಬೇಕಿದೆ. ಈಗ ಬ್ರಿಟಿಷ್ ಅಥವಾ ಈಸ್ಟ್ ಇಂಡಿಯಾ ಎಂಬ ಒಂದು ಕಂಪನಿಯಲ್ಲ, ಸಾವಿರಾರು ಕಂಪನಿಗಳು ದೇಶಕ್ಕೆ ಬಂದಿವೆ. ದೇಶದಲ್ಲೇ ಇರುವ ಕಾರ್ಪೋರೇಟ್ ಕಂಪನಿಗಳೂ ನಮ್ಮನ್ನು ಲೂಟಿ ಮಾಡಲು ತುದಿಗಾಲಲ್ಲಿ ನಿಂತಿವೆ. ನಮ್ಮ ಇಡೀ ದೇಶದ ಆಡಳಿತವನ್ನು ಕಂಪನಿಗಳ ಬಾಹುಗಳಿಗೆ ಕೊಡಲು ಪೂರಕವಾಗಿ ಏನು ಬೇಕೋ ಆ ಕೆಲಸಗಳನ್ನು ಭಾರತ ಸರ್ಕಾರ ಮುಂದೆ ನಿಂತು ಮಾಡುತ್ತಿದೆ. ಕಂಪನಿಗಳಿಗೆ ಪೂರಕವಾದ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಕೈಗಾರಿಕೆ, ಕೃಷಿ ಆಮದು- ರಫ್ತು ಇದೆಲ್ಲವನ್ನೂ ಒಳಗೊಂಡಂತೆ ನೇರವಾಗಿ ಖಾಸಗೀಕರಣದ ದಿಕ್ಕಿನಲ್ಲಿ ಕಂಪನಿಗಳ ಆಡಳಿತದ ತೆಕ್ಕೆಗೆ ಅಧಿಕಾರ ವರ್ಗಾವಣೆಯಾಗುತ್ತಿದೆಯಲ್ಲಾ ಅದು ನಿಜವಾದ ಪ್ರಜಾಪ್ರಭುತ್ವದ ಹರಣ. ಇಂದಿರಾಗಾಂಧಿಯ ಆಡಳಿತದ ತುರ್ತುಪರಿಸ್ಥಿತಿ ವ್ಯಕ್ತಿಯ ಪ್ರತಿಷ್ಠೆ ಮತ್ತು ಶಕ್ತಿಯನ್ನು ಜನರ ಮೇಲೆ ಬಳಕೆ ಮಾಡಿದ ಪ್ರಸಂಗ. ಅದನ್ನು ಇಂದಿನ ವ್ಯವಸ್ಥೆಗೆ ಹೋಲಿಸಿದರೆ ಇಂದೂ ಕೂಡಾ ನಿಜವಾದ ಪ್ರಜಾಪ್ರಭುತ್ವದ ಹರಣ ನಡೆಯುತ್ತಿದೆ."
'ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ'
"ಆಗ ಜನಸಂಘದವರು ತುರ್ತುಪರಿಸ್ಥಿತಿಯನ್ನು ವಿರೋಧಿಸಿದ್ದರು. ಹಾಗೆ ವಿರೋಧಿಸಿದ ಮನಸ್ಸುಗಳು ಈಗಿನ ಸರ್ಕಾರದಲ್ಲಿ ಕಾಣಸಿಗುವುದಿಲ್ಲ. ಈಗೇನಿದ್ದರೂ ಸಂಪೂರ್ಣವಾಗಿ ದೇಶವನ್ನು ಬರಿದು ಮಾಡುವ, ದೇಶವನ್ನು ದಿವಾಳಿ ಮಾಡುವಂಥ ಕಂಪನಿಯ ಆಡಳಿತಕ್ಕೆ ಬೇಕಾದ್ದನ್ನು ವ್ಯವಸ್ಥಿತವಾಗಿ ಅವರಿಗೆ ಒಪ್ಪಿಸುವ ದಿಕ್ಕಿನಲ್ಲಿ ಕೆಲಸ ಸಾಗಿದೆ. ಇದು ಈ ದೇಶದ ಆಡಳಿತ. ಇಲ್ಲಿ ನಾವೀಗ ಜೂನ್ 26ನೇ ತಾರೀಖಿನಂದು ತುರ್ತು ಪರಿಸ್ಥಿತಿ ಹೇರಿದ್ದ ದಿನವನ್ನು 'ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ' ಚಳವಳಿಗೆ ಆಯ್ಕೆ ಮಾಡಿಕೊಂಡಿದ್ದೇವೋ ಈ ದಿನಕ್ಕೆ ಇನ್ನೊಂದು ಕರಾಳ ಇತಿಹಾಸವಿದೆ. ಇದೇ ಜೂನ್ 26 ರಂದು ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಆರು ಜನ ರೈತರ ಮೇಲೆ ಗುಂಡು ಹಾರಿಸಿ ಕೊಂದಿತ್ತು. ಈ ಎಲ್ಲಾ ಘಟನೆಗಳೂ ತುರ್ತುಪರಿಸ್ಥಿತಿಯ ಕರಾಳ ಮುಖವನ್ನು ಮತ್ತೆ ಮತ್ತೆ ನಮ್ಮ ನೆನಪಿಗೆ ತರುವಂಥವೇ..!"
ಹೆಚ್ಚು ಕಾಲ ಸುಳ್ಳುಗಳನ್ನು ನಂಬಿಸುವುದು ಅಸಾಧ್ಯ
"ದೇಶದಲ್ಲೀಗ ಜನರ ಸ್ವಾತಂತ್ರ್ಯವನ್ನು ಕಿತ್ತು ಬೇರೆ ಕೈಗೆ ವರ್ಗಾಯಿಸುವ ಸ್ಟ್ರಾಟಜಿ ನಡೆಯುತ್ತಿದೆ. ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ, ಅವರು ತೆರಿಗೆ ಕಟ್ಟುತ್ತಾರೆ, ನಾವು ಆಡಳಿತ ನಡೆಸುತ್ತೀವಿ ಎಂದಷ್ಟೇ ನಿರ್ಲಜ್ಜೆಯಿಂದ ಮಾತಾಡುತ್ತಾ ತಾವು ಕಾರ್ಪೋರೇಟ್ ಕಂಪನಿಗಳ ಪರ ಎಂಬುದನ್ನು ಸಾಬೀತು ಮಾಡಿದ್ದಾರೆ. ಹೀಗಾಗಿ ಇದು ಅತ್ಯಂತ ಅಪಾಯಕಾರಿ. ಈ ಬಿಜೆಪಿ ಕೇವಲ ರಾಮನನ್ನು, ಕೃಷ್ಣನನ್ನು, ಪಾಕಿಸ್ಥಾನವನ್ನು, ಚೀನಾವನ್ನು ತೋರಿಸಿ ಹೆಚ್ಚು ಕಾಲ ಸುಳ್ಳುಗಳನ್ನು ನಂಬಿಸುವುದು ಸಾಧ್ಯವಾಗುವುದಿಲ್ಲ. ನಾವು ಇದನ್ನು ತಿರಸ್ಕರಿಸಿ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಏನು ಬೇಕೋ ಅದನ್ನು ಮಾಡಬೇಕಿದೆ. ನಮ್ಮ ಹೋರಾಟಗಳ ಮೂಲಕ, ಜನಾಂದೋಲನಗಳನ್ನು ತೀವ್ರಗೊಳಿಸುವ ಅನಿವಾರ್ಯವಿದೆ. ಅದಕ್ಕೆ ಏನು ಬೇಕೋ ಅದೆಲ್ಲವನ್ನೂ ನಾವು ಮಾಡುತ್ತೇವೆ. ಮಾಡೋಣ. ರೈತ ಚಳವಳಿಗೆ ಜಯವಾಗಲಿ."