ದಿನದಿನಕ್ಕೂ ಗಟ್ಟಿಯಾಗುತ್ತಿರುವ ದಿಲ್ಲಿ ರೈತ ಚಳವಳಿ
ದಿಲ್ಲಿಯ ರೈತ ಚಳುವಳಿಗೆ 198 ದಿನ. ಉತ್ಸಾಹ ಕಿಂಚಿತ್ತೂ ಕಡಿಮೆಯಾಗಿಲ್ಲ. ಕಾವು ಕಳೆದುಕೊಳ್ಳುವ ಮಾತೇ ಇಲ್ಲ. ಚಳವಳಿಗೆ ಏಳು ತಿಂಗಳು ಮುಗಿಯುವ ಸಮಯದಲ್ಲಿ ಮುಂದಿನ ದಿನಗಳಲ್ಲಿ ಚಳುವಳಿಯ ಮಾರ್ಗದಲ್ಲಿ ಏನೆಲ್ಲಾ ಇರಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಚಿಂತಿಸಿದೆ.
ಜೂನ್ 14ರಂದು ಗುರು ಅರ್ಜುನ್ ದೇವ್ರ ಹುತಾತ್ಮ ದಿನವಾಗಿ ಆಚರಿಸಲು ತೀರ್ಮಾನಿಸಿದೆ. ಜೂನ್ 24ರಂದು ಕಬೀರ್ ಜಯಂತಿ. ಜೂನ್ 26ರಂದು ಚಳವಳಿಯ ಏಳನೆಯ ತಿಂಗಳಿನ ಸಂದರ್ಭದಲ್ಲಿ ದೇಶದಲ್ಲಿರುವ ಅಘೋಷಿತ ತುರ್ತುಪರಿಸ್ಥಿಯ ಕುರಿತು ದೇಶದಾದ್ಯಂತ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತಿಸಿದೆ.
"ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ" ಎಂಬುದು ಅಂದಿನ ಘೋಷವಾಕ್ಯ. ದೇಶದ ಎಲ್ಲಾ ರಾಜ್ಯಗಳ ರಾಜಭವನಗಳ ಮುಂದೆ ಶಾಂತಿಯುತ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಸರ್ಕಾರಗಳಿಗೆ ಮೆಮೊರೆಂಡಮ್ ಕೊಡಲಾಗುವುದು.
ಈವರೆಗೆ ರೈತ ಚಳುವಳಿಗೆ ಕಳಂಕ ತರಲು ಅನೇಕ ಪ್ರಯತ್ನಗಳು ನಡೆದಿವೆ. ಭಾಜಪ ನಾಯಕರು ಈ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಭಾಜಪ ಪ್ರೋತ್ಸಾಹಿಸುವ ಕೆಲವು ಮಾಧ್ಯಮಗಳೂ ಕೂಡಾ ಈ ಕೆಲಸದಲ್ಲಿ ಹಿಂದೆ ಬಿದ್ದಿಲ್ಲ. ಟಿಕ್ರಿ ಗಡಿಯಲ್ಲಿ ಸ್ವಯಂಸೇವೆಯಲ್ಲಿ ತೊಡಗಿದ್ದ ಯುವತಿಯು ಮಾಧ್ಯಮದವರ ನಿಂದನೆಗೆ ಗುರಿಯಾದ ಕಾರಣ ರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದಕ್ಕೆ ನೋಟಿಸ್ ನೀಡಿರುವುದಾಗಿ ತಿಳಿದು ಬಂದಿದೆ. ಮಾಧ್ಯಮಗಳು ಆಕೆಯ ಬಗ್ಗೆ ದೈಹಿಕ ದೌರ್ಜನ್ಯ ಹಾಗೂ ಅತ್ಯಾಚಾರದ ಸಂತ್ರಸ್ಥೆಯೆಂದು ಬೇಕೆಂದಲೇ ಬಣ್ಣಿಸಿದ್ದವು.
ಎಸ್ಕೆಎಂ, ಮಹಿಳಾ ಹೋರಾಟಗಾರರ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ. ಎಲ್ಲಾ ರೀತಿಯಲ್ಲೂ ಮಹಿಳೆಯರ ಹಕ್ಕುಗಳನ್ನು ಮತ್ತು ಅವರ ಸುರಕ್ಷತೆಯನ್ನು ಕಾಪಾಡಲು ಬದ್ಧವೆಂದು ಎಸ್ಕೆಎಂ ಒತ್ತಿ ಹೇಳಿದೆ. ಈಗಾಗಲೇ ಹೇಳಿರುವಂತೆ ಸುರಕ್ಷತೆಯ ವಿಚಾರವಾಗಿ ಯಾವ ಉಲ್ಲಂಘನೆಯನ್ನೂ ಎಸ್ಕೆಎಂ ಸಹಿಸುವುದಿಲ್ಲ. ಯಾವುದೇ ರೀತಿಯ ತೊಂದರೆಗಳಾದಲ್ಲಿ ಅವುಗಳನ್ನು ಪರಿಹರಿಸಲು ಎಲ್ಲಾ ಗಡಿಗಳಲ್ಲೂ ಸಮಿತಿಗಳನ್ನು ರಚಿಸಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ "ಟ್ರಾಕ್ಟರ್ ನಿಂದ ಟ್ವಿಟ್ಟರ್"ವರೆಗೆ ಎಲ್ಲಾ ರೀತಿಯ ಕಾನೂನಾತ್ಮಕ ಸಹಕಾರ ಮತ್ತು ಬೆಂಬಲವನ್ನು ಚಳುವಳಿಗಾರರಿಗೆ ಕೊಡುತ್ತದೆ ಎಂದು ಮತ್ತೊಮ್ಮೆ ಹೇಳುತ್ತಿದೆ. ಚಳವಳಿ ಹತ್ತಿಕ್ಕುವ ನಾಯಕರು ಮತ್ತು ಮಾಧ್ಯಮಗಳಿಗೆ ಹೆದರುವ ಮಾತೇ ಇಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.