ಬನ್ನೂರು: ಕಂಪನಿ ಬೀಜದಲ್ಲಿ ವ್ಯತ್ಯಾಸ, ಭತ್ತದ ಬೆಳೆಯಲ್ಲಿ ಜೊಳ್ಳು
ಮೈಸೂರು, ಜನವರಿ 2: ಬನ್ನೂರು ವ್ಯಾಪ್ತಿಯ ಕೆಲವೆಡೆ ಭತ್ತ ಬೆಳೆದಿದ್ದ ಗದ್ದೆಗಳಲ್ಲಿ ತೆನೆ ಕಾಯಿಕಟ್ಟದೆ ಜೊಳ್ಳಾಗಿದ್ದು, ಬರದ ನಡುವೆಯೂ ಭತ್ತ ಬೆಳೆದ ರೈತ ತನಗಾದ ಸಂಕಷ್ಟದಿಂದ ತಲೆಮೇಲೆ ಕೈಹೊತ್ತು ಕೂರುವ ಪರಿಸ್ಥಿತಿಗೆ ಬಂದು ತಲುಪಿದ್ದಾನೆ.
ಈ ಬಾರಿ ಮಳೆ ಸಮರ್ಪಕವಾಗಿ ಆಗದ ಕಾರಣ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದಿಲ್ಲ. ಆದರೂ ಕೆಲ ರೈತರು ಶ್ರಮವಹಿಸಿ ಭತ್ತ ಬೆಳೆದರೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ.
ಮೊದಲೆಲ್ಲ ಭತ್ತ ಬೆಳೆಯುವ ರೈತರು ತಮ್ಮದೇ ಬಿತ್ತನೆ ಬೀಜಗಳನ್ನು ಸಂರಕ್ಷಿಸಿಟ್ಟುಕೊಂಡು ಅದನ್ನೇ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಹಲವು ತಳಿಯ ಭತ್ತದ ಬಿತ್ತನೆ ಬೀಜಗಳು ಮಾರುಕಟ್ಟೆಗೆ ಬಂದಿರುವ ಕಾರಣ ಬೇಗ ಫಸಲು ಬರುವ, ರೋಗನಿರೋಧಕ ತಳಿಗಳ ಬಿತ್ತನೆ ಬೀಜಗಳನ್ನು ಖರೀದಿಸಿ ಕೃಷಿಗೆ ಬಳಸಿಕೊಳ್ಳುತ್ತಿದ್ದಾರೆ. ಇದು ಮುಂದುವರೆದುಕೊಂಡು ಹೋಗುತ್ತಿದೆ. ಆದರೆ ಇದೀಗ ಬನ್ನೂರು ವ್ಯಾಪ್ತಿಯ ರೈತರು ತಾವು ಖರೀದಿಸಿದ ಬಿತ್ತನೆ ಬೀಜ ಮೊಳಕೆಯೊಡೆದು, ನಾಟಿ ಮಾಡಿದ ಬಳಿಕ ಚೆನ್ನಾಗಿ ಬೆಳೆದಿದ್ದರೂ ಫಸಲು ನೀಡುವ ಸಂದರ್ಭ ಕೈಕೊಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.[ನೀವು ತಿನ್ನುವ ಅಕ್ಕಿ ಯಾವುದರಿಂದ ಮಾಡಿದ್ದು!?]
ಕಾವೇರಿ ನದಿಯ ರಾಮಸ್ವಾಮಿ ಹಾಗೂ ರಾಜಪರಮೇಶ್ವರಿ ಸಿಡಿಎಸ್ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬಹುತೇಕ ರೈತರು ಖಾಸಗಿ ಅಂಗಡಿಗಳು ಹಾಗೂ ಕೃಷಿ ಪತ್ತಿನ ಸಹಕಾರ ಸಂಘದಿಂದ ಟಾಟಾ ಸೀಡ್ಸ್ ನ ಡಿಆರ್ಎಚ್ 836, ಎಂಸಿ 13 ತಳಿಗಳ ಬಿತ್ತನೆ ಬೀಜವನ್ನು ಖರೀದಿಸಿ, ಕೃಷಿ ಮಾಡಿದ್ದು, ಬೆಳೆ ಫಸಲಿಗೆ ಬಂದಿದೆಯಾದರೂ ಭತ್ತ ಜೊಳ್ಳಾಗುತ್ತಿದೆ. ಇದರಿಂದ ರೈತರು ನಷ್ಟದ ಮೇಲೆ ನಷ್ಟ ಅನುಭವಿಸುವಂತಾಗಿದೆ.[ ಕೊಡಗಿನ ಭತ್ತದ ಬೆಳೆಗಾರರನ್ನು ಕಂಗೆಡಿಸಿದ ಮಳೆ]
ನೊಂದ ರೈತರು ಬಿತ್ತನೆ ಬೀಜ ಮಾರಾಟ ಮಾಡಿದ ಕಂಪನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲದೆ, ತಮಗಾದ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಕಳೆದ ವರ್ಷವೂ ಇದೇ ಕಂಪನಿಯಿಂದ ಬಿತ್ತನೆ ಬೀಜ ಖರೀದಿಸಿ ಕೆಲವರು ನಷ್ಟ ಅನುಭವಿಸಿದ್ದರು. ಈ ಬಾರಿಯೂ ಪುನರಾವರ್ತನೆಯಾಗಿದ್ದು, ಭತ್ತ ಬೆಳೆದ ರೈತರು ಕಂಗಾಲಾಗಿದ್ದಾರೆ.
ಭತ್ತದ ಫಸಲು ಜೊಳ್ಳಾಗಿ ನಷ್ಟ ಅನುಭವಿಸುತ್ತಿರುವ ರೈತರು ತಾವೇನು ಮಾಡಬೇಕೆಂದು ತೋಚದ ಸ್ಥಿತಿಗೆ ಬಂದು ತಲುಪಿದ್ದಾರೆ. ಭತ್ತದಲ್ಲಿ ಜೊಳ್ಳು ಹೆಚ್ಚಾಗಿರುವ ಕಾರಣ 80 ರಿಂದ 90 ಮೂಟೆ ಭತ್ತ ಬೆಳೆಯುತ್ತಿದ್ದ ಜಮೀನಿನಲ್ಲಿ ಇದೀಗ ಕೇವಲ 12 ಮೂಟೆ ದೊರೆಯುವಂತಾಗಿದೆ. ಇಷ್ಟು ಫಸಲು ಸಿಕ್ಕರೆ ಏನು ಮಾಡುವುದು. ಯಾರ ಸಾಲ ತೀರಿಸುವುದು. ಮುಂದೆ ಕೃಷಿ ಹೇಗೆ ಮಾಡುವುದು ಎಂಬ ಪ್ರಶ್ನೆಗಳು ರೈತರನ್ನು ಕಿತ್ತು ತಿನ್ನುತ್ತಿವೆ.