ಕರಿ ಕಬ್ಬಿಲ್ಲದೇ ಪೂರ್ಣವಾಗುವುದಿಲ್ಲ ಬೊಂಬೆ ನಾಡಿನ ಸಂಕ್ರಾಂತಿ
ರಾಮನಗರ, ಜನವರಿ 14: ವರ್ಷದ ಮೊದಲ ಹಬ್ಬ ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲ ಹಂಚಿ ಒಳ್ಳೆಯ ಮಾತನಾಡು ಎನ್ನುವ ಮಾತಿದೆ. ಅದೇ ರೀತಿ ಕರಿ ಕಬ್ಬು ಇಲ್ಲದೆ ಹಬ್ಬ ಪೂರ್ಣವಾಗುವುದಿಲ್ಲ. ಹಾಗಾಗಿ ಕರಿ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ.
ರಾಜ್ಯದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಕಬ್ಬು ಬೆಳೆಯುತ್ತಿದ್ದರೂ, ಕರಿ ಕಬ್ಬು ಬೆಳೆಯುವ ರೈತರು ಮತ್ತು ಗ್ರಾಮಗಳು ಮಾತ್ರ ರಾಜ್ಯದಲ್ಲಿ ಅತಿ ವಿರಳ.
ಉತ್ತರಾಯಣದ ಹೆಬ್ಬಾಗಿಲ ತೋರಣ,ಮಕರ ಸಂಕ್ರಮಣ
ಆದರೆ ಬೊಂಬೆಯ ನಗರಿ ಚನ್ನಪಟ್ಟಣದ 2-3 ಗ್ರಾಮಗಳು ಮಾತ್ರ ಕರಿ ಕಬ್ಬು ಗ್ರಾಮ ಎಂದೇ ಹೆಸರುವಾಸಿ ಪಡೆದಿದೆ. ಬೊಂಬೆಗಳ ನಾಡು ಖ್ಯಾತಿಯ ಚನ್ನಪಟ್ಟಣ ತಾಲೂಕಿನ ಪಟ್ಲು, ತಿಟ್ಟಮಾರನಹಳ್ಳಿ, ಚಿಕ್ಕನದೊಡ್ಡಿ ಗ್ರಾಮದ ರೈತರು ಕರಿ ಕಬ್ಬಿನ ಬೇಸಾಯವನ್ನೇ ಹೆಚ್ಚಾಗಿ ಮಾಡುತ್ತಾರೆ.
ಸಂಕ್ರಾಂತಿಯಲ್ಲಿ ಕರಿ ಕಬ್ಬಿಗೆ ವಿಶೇಷ ಸ್ಥಾನ
ಈ ಗ್ರಾಮಗಳ ಈ ಕರಿ ಕಬ್ಬಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದೊಡ್ಡ ನಗರ ಪಟ್ಟಣಗಳಲ್ಲಿ ಹೆಚ್ಚು ಬೇಡಿಕೆ ಇದೆ. ಈ ಕಬ್ಬಿನ ಬೇಡಿಕೆ ರಾಜ್ಯವನ್ನೂ ದಾಟಿದೆ. ನೆರೆಯ ಕೇರಳ, ತಮಿಳುನಾಡು, ಗುಜರಾತ್ ರಾಜ್ಯಗಳಿಗೂ ಇಲ್ಲಿನ ಕಬ್ಬು ರಪ್ತಾಗುತ್ತದೆ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಹುತೇಕರ ಮನೆಯ ಅತಿಥಿಯಾಗುವ ಕರಿ ಕಬ್ಬನ್ನು ಬೆಳೆಯುವುದು ಚನ್ನಪಟ್ಟಣದಲ್ಲಿ ಅತ್ಯಧಿಕ. ಈ ಕಬ್ಬನ್ನು ಮೂರೂ ಗ್ರಾಮಗಳಲ್ಲಿ 40 ರಿಂದ 50 ವರ್ಷಗಳಿಂದ ಬೆಳೆಸಿಕೊಂಡು ಬರಲಾಗುತ್ತಿದೆ.
ಚನ್ನಪಟ್ಟಣದ ಮೂರು ಗ್ರಾಮಗಳಲ್ಲಿ ಕರಿ ಕಬ್ಬು ಬೆಳೆಯುತ್ತಾರೆ
ಸಂಕ್ರಾಂತಿ ಹಬ್ಬದ ವೇಳೆ ಎಳ್ಳು ಬೆಲ್ಲದ ಜೊತೆಗೆ ಈ ಕರಿ ಕಬ್ಬಿನ ಒಂದು ತುಂಡನ್ನ ನೀಡುವುದು ಹಾಗೂ ಈ ಹಬ್ಬದ ಸಂದರ್ಭದಲ್ಲಿ ಒಂದು ಗೇಣು ಕರಿ ಕಬ್ಬು ತಿಂದರೆ ನೆಮ್ಮದಿ ಎಂಬ ವಾಡಿಕೆ ಕೂಡ ಜನರಲ್ಲಿ ಮನೆ ಮಾಡಿದೆ.
ಈ ಗ್ರಾಮಗಳ ಬಹುತೇಕ ರೈತರು ಕರಿ ಕಬ್ಬಿನ ವ್ಯವಸಾಯವನ್ನೇ ನೆಚ್ಚಿಕೊಂಡಿದ್ದಾರೆ. ಸುಮಾರು 40-50 ಎಕರೆಗೂ ಹೆಚ್ಚು ಪ್ರದೇಶಗಳಲ್ಲಿ ಈ ಕಬ್ಬನ್ನು ವಾಣಿಜ್ಯ ಬೆಳೆಯಾಗಿ ಗ್ರಾಮಸ್ಥರು ಬೆಳೆದಿದ್ದು, ಇಲ್ಲಿನ ರೈತರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಬೇಡಿಕೆಯಿದ್ದರೂ, ಬೆಲೆ ಇಲ್ಲ
ಒಂದು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ಸುಮಾರು 50 ರಿಂದ 60 ಸಾವಿರ ಖರ್ಚಾದರೆ, 1.50 ಲಕ್ಷ ರೂ, ಗಳಿಗೂ ಹೆಚ್ಚು ಲಾಭ ದೊರೆಯುತ್ತದೆ. ಒಂದು ವರ್ಷಕ್ಕೆ ಒಂದೇ ಬೆಳೆಯಾದ್ದರಿಂದ ಖರ್ಚು ತುಸು ಹೆಚ್ಚು ಎಂಬುದು ಕಬ್ಬು ಬೆಳೆಗಾರರ ಮಾಹಿತಿ. ಸಂಕ್ರಾಂತಿ ಸಮಯದಲ್ಲಿ ಮಾತ್ರ ಈ ಕಬ್ಬು ಚೆನ್ನಾಗಿ ಬರುತ್ತದೆ. ಹಾಗಾಗಿ ಸಂಕ್ರಾಂತಿ ಸಮಯದಲ್ಲಿ ಈ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ ಇದೆ.
ಸಂಕ್ರಾತಿಯಲ್ಲಿ ಜನರ ಬಾಯನ್ನು ಸಿಹಿ ಮಾಡುವ ಕರಿ ಕಬ್ಬು, ಅದನ್ನು ಬೆಳೆದ ರೈತನಿಗೆ ಕಹಿಯಾಗಿ ಪರಿಣಮಿಸಿದೆ. ವರ್ಷಕ್ಕೊಮ್ಮೆ ವಿಶೇಷವಾಗಿ ಬೆಳೆಯುವ ಈ ಕರಿ ಕಬ್ಬನ್ನು ರೈತರು ವಿದ್ಯುತ್ ಹಾಗೂ ನೀರಿನ ಕೊರತೆಯ ನಡುವೆಯು ಬಹಳ ಮುತುರ್ವಜಿಯಿಂದ ಬೆಳೆಸುತ್ತಾರೆ.
ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಕಬ್ಬು ಬೆಳೆಗಾರರು
ಆದರೆ ಸೂಕ್ತ ಬೆಲೆ ದೊರೆಯುತ್ತಿಲ್ಲ ಎನ್ನುವುದು ರೈತನ ಅಳಲು. ಕಳೆದ ಬಾರಿ ಒಂದು ಕಟ್ಟು ಕಬ್ಬಿಗೆ 500 ರಿಂದ 600 ರೂ, ಬೆಲೆ ಸಿಗುತ್ತಿತ್ತು. ಈ ಬಾರಿ 400 ರಿಂದ 450 ರೂ, ಮಾತ್ರ ಸಿಗುತ್ತಿದೆ.
ಮಾರುಕಟ್ಟೆಯಲ್ಲಿ ಮಧ್ಯವರ್ತಿ ಹಾವಳಿ ಹೆಚ್ಚಾಗಿದೆ, ರೈತರ ಲಾಭವನ್ನು ತಿಂದುಹಾಕುತ್ತಿದ್ದಾರೆ. ಸರ್ಕಾರ ಮಧ್ಯ ಪ್ರವೇಶಮಾಡಿ ಕರಿ ಕಬ್ಬಿಗೆ ಬೆಂಬಲ ಬೆಲೆ ನೀಡಿ ಕರಿಕಬ್ಬು ಬೆಳೆಗಾರರನ್ನು ರಕ್ಷಣೆ ಮಾಡಬೇಕು ಎನ್ನುವುದು ಚನ್ನಪಟ್ಟಣ ರೈತರ ಆಗ್ರಹವಾಗಿದೆ.