ಮೈಸೂರಿನಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಟೆಂಡರ್
ಮೈಸೂರು, ಏಪ್ರಿಲ್ 14: ಮೈಸೂರಿನ ಎಪಿಎಂಸಿ ಆವರಣದಲ್ಲಿ ಕೋಲ್ಡ್ ಸ್ಟೋರೇಜ್ ಇಲ್ಲದಿರುವ ಹಿನ್ನೆಲೆಯಲ್ಲಿ ರೈತರ ಅಪಾರ ಉತ್ಪನ್ನಗಳು ಹಾಳಾಗುತ್ತಿದ್ದವು. ಹಾನಿಯನ್ನು ತಪ್ಪಿಸುವ ಉದ್ದೇಶದಿಂದ ಮೈಸೂರಿನಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಮೈಸೂರು ಜಿಲ್ಲಾಡಳಿತದಿಂದ ಏರ್ಪಡಿಸಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಪ್ರತಿಮೆಗೆ ಮಾರ್ಲಾಪಣೆ ಮಾಡಿ ನಂತರ ಮಾತನಾಡಿದ ಅವರು, ಜ್ಯುಬಿಲಿಯಂಟ್ ಕಾರ್ಖಾನೆಯು ಕೊರೊನಾ ವೈರಸ್ ಗೆ ಕಾರಣವಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದರು.
ಜ್ಯುಬಿಲಿಯಂಟ್ ಕಾರ್ಖಾನೆಗೆ ಲೆಕ್ಕ ಪರಿಶೋಧಕರು ಬಂದಿದ್ದರು, ಅಲ್ಲದೇ ವಿದೇಶದಿಂದ ಕೂಡ ಕಂಟೈನರ್ ಬಂದಿದ್ದ ವಿಷಯದಲ್ಲಿ ತನಿಖೆ ನಡೆಯುತ್ತಿದೆ. ಕಂಟೈನರ್ ವರದಿ ಸೂಕ್ಷ್ಮ ವಿಚಾರ ಎಂದು ತಿಳಿಸಿದರು.
ಕೊರೊನಾ ವೈರಸ್ ವಿಶೇಷಾಧಿಕಾರಿಯನ್ನಾಗಿ ಹರ್ಷಗುಪ್ತಾ ಅವರನ್ನು ಜ್ಯುಬಿಲಿಯಂಟ್ ತನಿಖೆಗಾಗಿ ನೇಮಿಸಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಮೈಸೂರು ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದರ ಬಗ್ಗೆ ನಿಗಾವಹಿಸಲು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡುವಂತೆ ಕೇಳಿದ್ದೇವು, ಹಾಗಾಗಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.