ಕೋಟದ ಈ ಕಾಲೇಜಲ್ಲಿ ಪಠ್ಯದ ಜೊತೆ ಕೃಷಿ ಪಾಠವೂ ನಡೆಯುತ್ತೆ!
ಉಡುಪಿ, ಫೆಬ್ರವರಿ 10: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪದವಿ ಪೂರ್ವ ಕಾಲೇಜು ಆವರಣಕ್ಕೆ ನೀವು ಒಮ್ಮೆ ಪ್ರವೇಶಿಸಿದರೆ ನಿಮಗೆ ಖಂಡಿತ ಆಶ್ಚರ್ಯ ಕಾದಿರುತ್ತದೆ. ಇಲ್ಲಿ ಆಟ ಪಾಠದ ಜೊತೆ ಜೊತೆ ಕೃಷಿ ಪಾಠ ಕೂಡ ನಡೆಯುತ್ತದೆ.
ವಿದ್ಯಾರ್ಥಿ ದೆಸೆಯಿಂದಲೇ ಕೃಷಿಯ ಜೊತೆ ನಂಟು ಬೆಳೆಸುವ ಉದ್ದೇಶದಿಂದ ಮತ್ತು ಕೃಷಿಯ ಮಾರುಕಟ್ಟೆಯ ಮಾಹಿತಿಗಾಗಿ ಇಲ್ಲಿ ಪ್ರತಿ ವರ್ಷ ಈ ಪ್ರಯೋಗ ನಡೆಯುತ್ತದೆ. ಡಾ.ಶಿವರಾಮ ಕಾರಂತರ ಸಹೋದರ ಕೋ.ಲ. ಕಾರಂತರು ಸ್ಥಾಪಿಸಿದ ಕೋಟ ವಿವೇಕ ವಿದ್ಯಾಸಂಸ್ಥೆಯ ವಿಶೇಷತೆ ಇದು.
"ರಾಮಮಂದಿರ ಟ್ರಸ್ಟ್ ಗೆ ನೇಮಿಸಿದ್ದು ದಕ್ಷಿಣ ಭಾರತಕ್ಕೇ ಸಂದ ಗೌರವ"
ಇಲ್ಲಿ ಪದವಿ ಪೂರ್ವ ಕಾಲೇಜು, ಬಾಲಕರ ಪ್ರೌಢಶಾಲೆ, ಬಾಲಕಿಯರ ಪ್ರೌಢಶಾಲೆ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಹೀಗೆ ಬೇರೆ ಬೇರೆ ವಿಭಾಗಗಳಿವೆ. ಆದರೆ ಬಾಲಕರ ಪ್ರೌಢಶಾಲೆಯಲ್ಲಿ ಈ ಕೃಷಿ ಪಾಠದ ವಿಶೇಷತೆ ಸುಮಾರು 70 ವರ್ಷಗಳಿಂದ ನಡೆದುಕೊಂಡು ಬಂದಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ
ಶಿಕ್ಷಕರೇ ವಿದ್ಯಾರ್ಥಿಗಳಿಗೆ ಕೃಷಿಯ ಕುರಿತು ಮಾರ್ಗದರ್ಶನ ನೀಡುವುದಲ್ಲದೆ ವಿದ್ಯಾರ್ಥಿಗಳ ಕೈಯಿಂದಲೇ ಕೃಷಿ ಮಾಡಿಸಲಾಗುತ್ತದೆ. ಯಾವುದೇ ಸಿಲೇಬಸ್ ನಲ್ಲೂ ಇಲ್ಲದ ಈ ಕೃಷಿ ಪಾಠ ಮಕ್ಕಳಿಗೆ ಮುದ ನೀಡುವುದರ ಜೊತೆ ಒಂದಿಷ್ಟು ಕೃಷಿ ಮಾಹಿತಿ ನೀಡುತ್ತಾ ಬಂದಿದೆ.
ಶಾಲೆಯ ಪ್ರಾರಂಭದ ದಿನದಿಂದಲೇ ಇಲ್ಲಿ ಪ್ರತಿ ತರಗತಿಯಲ್ಲೂ ನಾಲ್ಕು ವಿಭಾಗಗಳನ್ನು ಮಾಡಲಾಗುತ್ತದೆ. ಅಶೋಕ, ಶಿವಾಜಿ, ಸುಭಾಶ್ ಮತ್ತು ಪ್ರತಾಪ್ ಎನ್ನುವ ತಂಡಗಳಿಗೆ ಕ್ರಮವಾಗಿ ವಿದ್ಯಾರ್ಥಿಗಳನ್ನು ಸೇರಿಸಲಾಗುತ್ತದೆ.
ಸಂಪೂರ್ಣ ಸಾವಯುವ ಕೃಷಿ
ಈ ತಂಡಗಳನ್ನು ತರಗತಿಯ ಸ್ವಚ್ಛತೆ, ಶಿಸ್ತು, ಶಾಲೆಯ ವಾರ್ಷಿಕ ಕ್ರೀಡಾಕೂಟ ಮತ್ತು ಕೃಷಿ ಚಟುವಟಿಕೆಯಲ್ಲಿ ಉತ್ಸಾಹ ಮತ್ತು ಸ್ಪರ್ಧೆಗಾಗಿ ರಚಿಸಲಾಗುತ್ತದೆ. ನಾಲ್ಕು ತಂಡಗಳಿಗೆ ಪ್ರತಿ ತರಗತಿಗೆ ನಾಲ್ಕು ತರಕಾರಿ ಗಿಡಗಳ ಸಾಲನ್ನು ಕೈ ತೋಟದಲ್ಲಿ ನೀಡಲಾಗುತ್ತದೆ.
ವಿದ್ಯಾರ್ಥಿಗಳು ತಮ್ಮ ತಂಡದ ಸದಸ್ಯರ ಜೊತೆಗೂಡಿ ಸೊಪ್ಪು, ತರಕಾರಿ ಗಿಡಗಳನ್ನು ನೆಡುವ ಮತ್ತು ಅವುಗಳನ್ನು ಪೋಷಿಸುವ ಕಾರ್ಯ ಮಾಡುತ್ತಾರೆ. ಸಂಪೂರ್ಣ ಸಾವಯವ ರೀತಿಯಲ್ಲಿ ತರಕಾರಿಗಳನ್ನು ಬೆಳಸುವುದು ಇಲ್ಲಿನ ವಿಶೇಷತೆಗಳಲ್ಲಿ ಒಂದು.
ಉಡುಪಿಯಲ್ಲಿ ಕೊರೊನಾ ಭೀತಿ: ಒಂದೇ ಕುಟುಂಬದ ಮೂವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ವಾರಕ್ಕೊಮ್ಮೆ ಕಟಾವು ಮಾಡಲಾಗುವುದು
ಪ್ರತಿ ದಿನ ಬೆಳಗ್ಗೆ ತರಗತಿಗೆ ತೆರಳುವ ಮುನ್ನ ಗಿಡಗಳಿಗೆ ನೀರು ಹಾಕುತ್ತಾರೆ, ಅಲ್ಲದೇ ಎಲೆಗಳಲ್ಲಿ ಕೀಟಗಳಿದ್ದರೆ ಬೂದಿ ಹಾಕಿ ಅವುಗಳನ್ನು ವಿದ್ಯಾರ್ಥಿಗಳೇ ಆರೈಕೆ ಮಾಡುತ್ತಾರೆ.
ತರಕಾರಿ ಸೊಪ್ಪುಗಳು ಬೆಳೆದ ನಂತರ ಅವುಗಳನ್ನು ವಾರಕ್ಕೊಮ್ಮೆ ಕಟಾವು ಮಾಡಿ ನಿಗದಿತ ಸ್ಥಳದಲ್ಲಿ ತರಗತಿ ಹೆಸರು, ತಂಡದ ಹೆಸರು ಮತ್ತು ತರಕಾರಿ ಮೂಲ ಬೆಲೆ ಹಾಕಿ ವಿದ್ಯಾರ್ಥಿಗಳೇ ಏಲಂ ಮಾಡುತ್ತಾರೆ.
ಬಂದ ಹಣದಿಂದ ಪಠ್ಯ ಸಾಮಾಗ್ರಿ ಖರೀದಿ
ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಬೆಲೆ ಏಲಂ ಬರೆಯುತ್ತಾರೆ. ಅಂತಿಮವಾಗಿ ಅತೀ ಹೆಚ್ಚು ಬೆಲೆ ಯಾರು ಬರೆದಿರುತ್ತಾರೆ ಅವರಿಗೆ ತರಕಾರಿ ನೀಡಲಾಗುತ್ತದೆ. ಹೀಗೆ ಬಂದ ಹಣವನ್ನು ವಿದ್ಯಾರ್ಥಿಗಳು ತಮ್ಮ ಪಠ್ಯ ಸಾಮಾಗ್ರಿ ಖರೀದಿಗೆ ಬಳಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಕೈತೋಟ ಸಾಮಾನ್ಯ. ಆದರೆ ಕೋಟದ ವಿವೇಕ ಶಾಲೆಯಲ್ಲಿ ಇದನ್ನು ತುಂಬ ವೈಜ್ಞಾನಿಕವಾಗಿ ಮಾಡಲಾಗುತ್ತದೆ ಮಾತ್ರವಲ್ಲದೇ, ವಿದ್ಯಾರ್ಥಿಗಳು ಸಂಪೂರ್ಣವಾಗಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ಶಾಲೆಗೊಮ್ಮೆ ಭೇಟಿ ಕೊಟ್ಟರೆ ಇಲ್ಲಿನ ಹಸಿರು ಕಂಡು ನಿಮ್ಮ ಮೈಮನ ಪುಳಕಗೊಳ್ಳುವುದು ಗ್ಯಾರಂಟಿ.