ದೀಪಾವಳಿ ನಂತರ ಕಾವೇರಿ ಹಂಚಿಕೆ ವಿಚಾರಣೆ: ಸುಪ್ರೀಂಕೋರ್ಟ್
ನವದೆಹಲಿ, ನ.02: ಕರ್ನಾಟಕದಲ್ಲಿ ಸರಿಯಾಗಿ ಮಳೆ ಕಾಣದೆ ರೈತರು ಸಾಲ ಮಾಡಿ, ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆಗೀಡಾಗುತ್ತಿರುವ ನೋವಿನ ಸಂದರ್ಭದಲ್ಲೇ ತಮಿಳುನಾಡಿನಿಂದ ಕಹಿ ಸುದ್ದಿ ಬಂದಿದೆ. ಕರ್ನಾಟಕದಿಂದ ನಮ್ಮ ಪಾಲಿನ ನೀರು ಕೊಡಿಸಿ ಎಂದು ಸುಪ್ರೀಂಕೋರ್ಟಿಗೆ ಜಯಲಲಿತಾ ಅವರ ಸರ್ಕಾರ ಮೊರೆ ಹೊಕ್ಕಿದೆ.
ತಮಿಳುನಾಡು ಸರ್ಕಾರ 53 ಟಿಎಂಸಿ ನೀರು ಬಿಡಲು ಕರ್ನಾಟಕಕ್ಕೆ ಸೂಚಿಸಬೇಕು ಎಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ. ತಮಿಳುನಾಡಿನ ಸುಮಾರು 15 ಲಕ್ಷ ಎಕರೆ ಜಮೀನು ಹಾಗೂ 40 ಲಕ್ಷಕ್ಕೂ ಅಧಿಕ ಮಂದಿಗೆ ನೀರಿನ ಅಗತ್ಯ ಹೆಚ್ಚಾಗಿದೆ.
ಜನವರಿ 2015ರ ತನಕ ತಮಿಳುನಾಡಿನ ರೈತರು ಭತ್ತದ ನಾಟಿ ಕಾರ್ಯದಲ್ಲಿ ತೊಡಗಿರುತ್ತಾರೆ. ವರ್ಷಕ್ಕೆ ಮೂರು ಬಾರಿ ಮುಂಗಾರು-ಹಿಂಗಾರು ಮಳೆ ಆಟದೊಡನೆ ಗುದ್ದಾಡಬೇಕಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ಮಳೆಯಾಗದ ಕಾರಣ ಮೆಟ್ಟೂರು ಅಣೆಕಟ್ಟಿನಲ್ಲಿರುವ ನೀರಿನ ಸಂಗ್ರಹ ರೈತರಿಗೆ ಒದಗಿಸಲು ಸಾಕಾಗುತ್ತಿಲ್ಲ ಎಂದು ತನ್ನ ಅರ್ಜಿಯಲ್ಲಿ ಹೇಳಿಕೊಂಡಿದೆ.
ತಮಿಳುನಾಡು ಸರ್ಕಾರದ ಅರ್ಜಿಯನ್ನು ಸ್ವೀಕರಿಸಿದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರಿರುವ ನ್ಯಾಯಪೀಠ, ದೀಪಾವಳಿ ಹಬ್ಬದ ಬಳಿಕ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದೆ. ದೀಪಾವಳಿ ಹಬ್ಬದ ವೇಳೆ ಸಾಲು ಸಾಲು ರಜೆಗಳಿರುವುದರಿಂದ ಈಗ ವಿಚಾರಣೆ ತ್ವರಿತವಾಗಿ ನಡೆಸಲು ಸಾಧ್ಯವಿಲ್ಲ ಎನ್ನಲಾಗಿದೆ.
ಮಳೆ ಕೊರತೆಯ ನಡುವೆ ಕರ್ನಾಟಕ ಸರ್ಕಾರ ಹೊಸ ಹೊಸ ನೀರಾವರಿ ಯೋಜನೆ ಘೋಷಿಸುತ್ತಿರುವುದಕ್ಕೆ ತಮಿಳುನಾಡು ಸರ್ಕಾರ ಆಕ್ಷೇಪಣೆ ಸಲ್ಲಿಸಿದೆ. ಕಾವೇರಿ ನ್ಯಾಯಾಧಿಕರಣ ನೀಡಿರುವ ತೀರ್ಪಿನ ಅನ್ವಯ ಯೋಜನೆಗಳನ್ನು ಜಾರಿಗೊಳಿಸುವುದು ಹಾಗೂ ನೀರು ಹಂಚಿಕೆಯ ಮೇಲೆ ನಿಗಾ ವಹಿಸಲು ಮೇಲುಸ್ತುವಾರಿ ಸಮಿತಿ ನೇಮಿಸುವಂತೆ ತಮಿಳುನಾಡು ಕೋರಿದೆ. (ಒನ್ ಇಂಡಿಯಾ ಸುದ್ದಿ)