ಕಾವೇರಿ ನದಿ ಮುಖಜಭೂಮಿ: ತಮಿಳುನಾಡು ಮಹತ್ವದ ತೀರ್ಮಾನ
ಚೆನ್ನೈ, ಫೆಬ್ರವರಿ 10: ಕಾವೇರಿ ನದಿ ನೀರನ್ನು ಆಹಾರ ಉತ್ಪಾದನೆಗೆ ಮಾತ್ರ ಬಳಸಿಕೊಳ್ಳುವ ಸಂಬಂಧ ತಮಿಳುನಾಡು ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಕಾವೇರಿ ನದಿ ಮುಖಜಭೂಮಿ ಪ್ರದೇಶವನ್ನು ವಿಶೇಷ ಸಂರಕ್ಷಿತ ಕೃಷಿ ವಲಯ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ.
ರಾಜ್ಯದಲ್ಲಿ ಆಹಾರ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ವಿವಿಧ ರಾಜಕೀಯ ಪಕ್ಷಗಳು ಮತ್ತು ರೈತ ಸಂಘಟನೆಗಳು ಈ ನಿರ್ಧಾರವನ್ನು ಸ್ವಾಗತಿಸಿದ್ದು, ವಿರೋಧಪಕ್ಷ ಡಿಎಂಕೆ, ಇದು ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ತಂತ್ರ ಎಂದು ಆರೋಪಿಸಿದೆ.
'ಕಾವೇರಿ ಕೂಗು' ಯೋಜನೆಗೆ ಹಣ ಸಂಗ್ರಹ: ಸದ್ಗುರು ಫೌಂಡೇಷನ್ಗೆ ಹೈಕೋರ್ಟ್ ತರಾಟೆ
ಸೇಲಂ ಜಿಲ್ಲೆಯ ತಮ್ಮ ತವರು ಗ್ರಾಮ ಥಲೈವಸಲ್ನಲ್ಲಿ ಸರ್ಕಾರದ ಕಾರ್ಯಕ್ರಮವೊಂದರಲ್ಲಿ ಭಾನುವಾರ ಮಾತನಾಡಿದ ಅವರು, ಕಾವೇರಿ ನದಿ ಮುಖಜಭೂಮಿ ಪ್ರದೇಶಗಳಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆಯಂತಹ ಯಾವುದೇ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದರು.
ಕೇಂದ್ರದ ಯೋಜನೆಗೆ ಅನುಮತಿ ಇಲ್ಲ
'ನಾನೊಬ್ಬ ರೈತ ಮತ್ತು ರಾಜ್ಯ ಸರ್ಕಾರವು ರೈತರ ಜೀವನೋಪಾಯಕ್ಕೆ ಹಾನಿಯುಂಟುಮಾಡುವಂತಹ ಯಾವುದೇ ಯೋಜನೆಗಳಿಗೆ ಎಂದಿಗೂ ಅನುಮತಿ ನೀಡುವುದಿಲ್ಲ. ನೆಡುವಸಲ್ನಲ್ಲಿ ಕೇಂದ್ರ ಸರ್ಕಾರ ಯಾವುದೇ ಯೋಜನೆ ಜಾರಿಗೆ ತಂದರೂ ರಾಜ್ಯ ಸರ್ಕಾರದ ಎನ್ಓಸಿ ಸಿಗದೆ ಅದು ಅನುಷ್ಠಾನಕ್ಕೆ ಬರುವುದಿಲ್ಲ' ಎಂದು ಹೇಳಿದರು.
ಇಲ್ಲಿ ಕೃಷಿಗೆ ಆದ್ಯತೆ
ಕಾವೇರಿ ನದಿ ಮುಖಜಭೂಮಿಯು ತಮಿಳುನಾಡಿನಲ್ಲಿ ಅತ್ಯಂತ ಪ್ರಮುಖ ಕೃಷಿ ಪ್ರದೇಶವಾಗಿದೆ. ಹವಾಮಾನ ವೈಪರೀತ್ಯಗಳ ನಡುವೆಯೂ ಜನರು ಇಲ್ಲಿ ಕೃಷಿ ಮುಂದುವರಿಸಿದ್ದಾರೆ. ಹೈಡ್ರೋಕಾರ್ಬನ್ ಜಲ ವಿದ್ಯುತ್ನಂತಹ ಯೋಜನೆಗಳು ರೈತರು ಮತ್ತು ಕೃಷಿ ಅವಲಂಬಿತ ಕಾರ್ಮಿಕರಲ್ಲಿ ಕಳವಳ ಮೂಡಿಸಿವೆ. ನದಿ ಮುಖಜಭೂಮಿಯು ಸಮುದ್ರಕ್ಕೆ ಹತ್ತಿರವಿರುವುದರಿಂದ ಈ ಪ್ರದೇಶದ ಸುರಕ್ಷತೆ ನೋಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ಸರ್ಕಾರಕ್ಕೆ ಛಾಟಿ ಬೀಸಿದ ಕರ್ನಾಟಕ ಹೈಕೋರ್ಟ್, ಯಾಕೆ ಗೊತ್ತಾ?
ಎಂಟು ಜಿಲ್ಲೆಗಳಲ್ಲಿ ಕೃಷಿ ವಲಯ
ಕಾವೇರಿ ನದಿ ಮುಖಜಭೂಮಿ ಪ್ರದೇಶದ ತಂಜಾವೂರು, ತಿರುವರೂರ್, ನಾಗಪಟ್ಟಿಣಂ, ಪುಡುಕೊಟ್ಟೈ, ಅರಿಯಲೂರ್, ಕುಡ್ಡಲೋರ್, ಕರೂರು ಮತ್ತು ತಿರುಚಿರಾಪಳ್ಳಿ ಜಿಲ್ಲೆಗಳನ್ನು ವಿಶೇಷ ಸಂರಕ್ಷಿತ ಕೃಷಿ ವಲಯವಾಗಿ ಪರಿವರ್ತಿಸಲಾಗುವುದು. ಈ ಬಗ್ಗೆ ಕಾನೂನು ಪರಿಣತರೊಂದಿಗೆ ಸಮಾಲೋಚನೆ ನಡೆಸಿದ್ದು, ಇದಕ್ಕೆ ವಿಶೇಷ ಶಾಸನ ಸಿದ್ಧಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಡಿಎಂಕೆಯಿಂದಲೇ ಶುರುವಾಗಿದ್ದು...
1996ರಲ್ಲಿ ಪೆಟ್ರೋಲಿಯಂ ಕೇಂದ್ರ ಸಚಿವರಾಗಿದ್ದ ಡಿಎಂಕೆ ಮುಖಂಡ ಟಿ.ಆರ್. ಬಾಲು, ರಾಜಸ್ಥಾನದ ಮರುಭೂಮಿಯಲ್ಲಿ ಮೀಥೇನ್ ಅನಿಲ ಕಂಡುಬಂದಿದ್ದರಿಂದ 2010ರಲ್ಲಿ ತಮಿಳುನಾಡಿನಲ್ಲಿ ಯೋಜನೆ ಆರಂಭಿಸಲು ಮುಂದಾಗಿದ್ದರು. 2011ರಲ್ಲಿ ಡಿಎಂಕೆ ಸರ್ಕಾರ, ಈ ಪ್ರದೇಶಗಳಲ್ಲಿ ಬೋರ್ವೆಲ್ಗಳನ್ನು ತೋಡಿ ನಾಲ್ಕು ವರ್ಷಗಳವರೆಗೆ ಹುಡುಕಾಟ ನಡೆಸಲು ಗ್ರೇಟ್ಸ್ ಈಸ್ಟರ್ನ್ ಎನರ್ಜಿ ಕಾರ್ಪೊರೇಷನ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಆಗ ಸ್ಟಾಲಿನ್ ಉಪ ಮುಖ್ಯಮಂತ್ರಿಯಾಗಿದ್ದರು. ಈಗ ಅವರೇ ಈ ಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಾ ಜನರ ನಡುವೆ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.