ರೈತರಿಗೆ ಮೊದಲ ಜಯ, ಕೃಷಿ ಕಾಯ್ದೆಗಳಿಗೆ ತಡೆ ನೀಡಲು ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ, ಜನವರಿ 11: ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಹಲವು ತಿಂಗಳಿನಿಂದ ಹೋರಾಟ ನಡೆಸುತ್ತಿರುವ ರೈತ ಒಕ್ಕೂಟಗಳಿಗೆ ಮೊದಲ ಜಯ ದೊರಕಿದೆ. ಕೃಷಿ ಕಾಯ್ದೆಗಳ ಜಾರಿಗೆ ಸುಪ್ರೀಂಕೋರ್ಟ್ ತಡೆ ನೀಡಲು ಮುಂದಾಗಿದೆ. ಇದರಿಂದ ಕೃಷಿ ಕಾಯ್ದೆಗಳ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.
ಕೃಷಿ ಕಾಯ್ದೆಗಳ ವಿರುದ್ಧ ದಾಖಲಾಗಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೃಷಿ ಕಾಯ್ದೆಗಳಿಗೆ ನೀವು ತಡೆ ನೀಡುತ್ತೀರೋ, ಅಥವಾ ನಾವೇ ತಡೆ ನೀಡಬೇಕೋ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು. ಅಲ್ಲದೆ, ಈ ಕಾಯ್ದೆಗಳ ಒಳಿತು ಕೆಡಕುಗಳ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸುವಂತೆ ಆದೇಶಿಸಿತು.
ಕೃಷಿ ಕಾಯ್ದೆಗಳು ಒಳ್ಳೆಯವು ಎಂದು ಹೇಳುವ ಒಂದೇ ಒಂದು ಅರ್ಜಿ ಕೂಡ ಇದುವರೆಗೂ ದಾಖಲಾಗಿಲ್ಲ. ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೃದ್ಧರು, ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಏನಾಗುತ್ತಿದೆ ಇಲ್ಲಿ? ಎಂದು ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಪ್ರಶ್ನಿಸಿದರು.
ಇಲ್ಲಿ ಯಾವ ಮಾತುಕತೆಗಳು ನಡೆಯುತ್ತಿವೆಯೋ ನಮಗೆ ಗೊತ್ತಿಲ್ಲ. ಕೆಲವು ಸಮಯದವರೆಗೆ ಕೃಷಿ ಕಾಯ್ದೆಗಳನ್ನು ತಡೆಹಿಡಿಯಬಹುದೇ? ಎಂದು ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿ ರಮಣ ಅವರನ್ನು ಒಳಗೊಂಡ ನ್ಯಾಯಪೀಠ ಪ್ರಶ್ನಿಸಿತು. ಮುಂದೆ ಓದಿ.
ಕೇಂದ್ರದಿಂದ ನಿರಾಶೆಯಾಗಿದೆ
ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಸಿಜೆಐ ಬೊಬ್ಡೆ, 'ನಾವು ಕಠೋರ ಹೇಳಿಕೆಗಳನ್ನು ನೀಡಲು ಬಯಸುವುದಿಲ್ಲ. ಆದರೆ ಕೇಂದ್ರದ ಬಗ್ಗೆ ತೀವ್ರ ನಿರಾಶೆಯಾಗಿದೆ. ಯಾವ ರೀತಿಯ ಸಮಾಲೋಚನೆ ಪ್ರಕ್ರಿಯೆ ನಡೆಸಲಾಗಿದೆಯೋ ಗೊತ್ತಿಲ್ಲ. ಏನಾಗುತ್ತಿದೆ ಎಂದು ನಮಗೆ ದಯವಿಟ್ಟು ಹೇಳಿ' ಎಂದು ತೀಕ್ಷ್ಣವಾಗಿ ಹೇಳಿದರು.
ಏಕೆ ಪ್ರತಿಕ್ರಿಯೆ ಇಲ್ಲ
'ನಮ್ಮ ಉದ್ದೇಶ ಸೌಹಾರ್ದಯುತ ಪರಿಹಾರ ತರುವುದು. ಕಾನೂನುಗಳನ್ನು ಅಮಾನತುಗೊಳಿಸುವ ಸಲಹೆಗೆ ಏಕೆ ಪ್ರತಿಕ್ರಿಯೆ ಇಲ್ಲ? ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳ ಜಾರಿಯನ್ನು ಸ್ಥಗಿತಗೊಳಿಸಿದರೆ, ಚರ್ಚೆಗೆ ಕೂರುವಂತೆ ರೈತರಿಗೆ ನಾವು ಸೂಚಿಸುತ್ತೇವೆ' ಎಂದರು.
ನೀವು ತಡೆ ನೀಡುತ್ತೀರೋ? ನಾವೇ ಮಾಡುವುದೋ?
'ನೀವು ಕೃಷಿ ಕಾಯ್ದೆಗಳನ್ನು ತಡೆಹಿಡಿಯುತ್ತೇವೆ ಎಂದು ಹೇಳಿ. ಇಲ್ಲವೇ ನ್ಯಾಯಾಲಯ ಅದನ್ನು ಮಾಡುತ್ತದೆ' ಎಂದು ಮುಖ್ಯ ನ್ಯಾಯಮೂರ್ತಿ, ಪ್ರತಿಭಟನೆ ಸ್ಥಳದಲ್ಲಿ ಸಾವುಗಳಾಗಿವೆ ಮತ್ತು ಆತ್ಮಹತ್ಯೆಗಳು ಆಗಿವೆ. ,ಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವ ಅಗತ್ಯವಿದೆ' ಎಂದು ತಿಳಿಸಿದರು.
ರೈತರಿಗೆ ಪ್ರತಿಭಟನೆ ಹಕ್ಕಿದೆ
ಜನರಿಗೆ ತೀವ್ರ ತೊಂದರೆಗಳಾಗುತ್ತಿರುವುರಿಂದ ಕಾನೂನು ಜಾರಿಯನ್ನು ತಡೆದ ಬಳಿಕ ಪ್ರತಿಭಟನೆ ನಡೆಯುತ್ತಿರುವ ಜಾಗವನ್ನು ಬದಲಿಸಬಹುದೇ ಎಂದು ಸುಪ್ರೀಂಕೋರ್ಟ್ ಕೇಳಿತು. ಸುಪ್ರೀಂಕೋರ್ಟ್ ಪ್ರತಿಭಟನೆಯನ್ನು ತಡೆಯುತ್ತಿಲ್ಲ. ನಾವು ಪ್ರತಿಭಟನಾ ಸ್ಥಳದ ಬದಲಾವಣೆ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತಿದ್ದೇವೆ ಎಂದು ಹೇಳಿತು.