ಜ.26ರಂದು ಟ್ರ್ಯಾಕ್ಟರ್ ರ್ಯಾಲಿ; ರೈತರಿಗೆ ಸುಪ್ರೀಂ ಕೋರ್ಟ್ ನೋಟೀಸ್
ನವದೆಹಲಿ, ಜನವರಿ 12: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿ ಗಡಿಗಳಲ್ಲಿ ಹೋರಾಟ ನಡೆಸುತ್ತಿದ್ದು, ಪ್ರತಿಭಟನೆ ಭಾಗವಾಗಿ ಜನವರಿ 26, ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಳ್ಳುವುದಾಗಿ ರೈತ ಸಂಘಟನೆಗಳು ತಿಳಿಸಿದ್ದವು.
ಇದಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರ, ಟ್ರ್ಯಾಕ್ಟರ್ ರ್ಯಾಲಿ ಕೈಗೊಳ್ಳದಂತೆ ರೈತರಿಗೆ ಆದೇಶ ನೀಡಲು ಕೋರಿಕೊಂಡಿತ್ತು. ಮಂಗಳವಾರ ಈ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ರೈತ ಸಂಘಗಳಿಗೆ ನೋಟೀಸ್ ಜಾರಿ ಮಾಡಿದೆ.
ಜನವರಿ 26ರಂದು ಭದ್ರತಾ ವ್ಯವಸ್ಥೆಯ ಕಾರಣವಾಗಿ ರ್ಯಾಲಿ ತಡೆಯಬೇಕು ಎಂದು ದೆಹಲಿ ಪೊಲೀಸರು ಅರ್ಜಿಯಲ್ಲಿ ಕೇಳಿಕೊಂಡಿದ್ದು, ಇದಕ್ಕೆ ಸ್ಪಂದಿಸಿರುವ ಕೋರ್ಟ್, "ಕಾನೂನು ಸುವ್ಯವಸ್ಥೆ ಪೊಲೀಸರಿಗೆ ಬಿಟ್ಟ ವಿಷಯ. ಪ್ರತಿಭಟನಾ ಮೆರವಣಿಗೆಗೆ ದೆಹಲಿ ನಗರದ ಒಳಗೆ ಅವಕಾಶ ನೀಡುವುದಾದರೆ ನಿರ್ದಿಷ್ಟ ಜನರನ್ನು ಬಿಡಬಹುದು. ಪೊಲೀಸರ ಅನುಮತಿ ದೊರೆತರಷ್ಟೆ ರ್ಯಾಲಿಗೆ ಅವಕಾಶ" ಎಂದು ಹೇಳಿದೆ.
ಸದ್ಯಕ್ಕೆ ವಿವಾದಿತ ಮೂರು ಕೃಷಿ ಕಾಯ್ದೆಗಳಿಗೆ ತಡೆಯೊಡ್ಡಿರುವ ಸುಪ್ರೀಂ ಕೋರ್ಟ್, ಸಮಿತಿಯನ್ನು ರಚಿಸಿದೆ. ಎಚ್ ಎಸ್ ಮನ್, ಪ್ರಮೋದ್ ಕುಮಾರ್ ಜೋಶಿ, ಅಶೋಕ್ ಗುಲಾಟಿ ಹಾಗೂ ಅನಿಲ್ ಧನ್ವಂತರ ಅವರನ್ನು ಈ ಸಮಿತಿ ಒಳಗೊಂಡಿದ್ದು, ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರನ್ನೊಳಗೊಂಡ ಪೀಠ ಇಂದು ವಿಚಾರಣೆ ನಡೆಸಿದೆ.