ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಾದ ಸೂರ್ಯಕಾಂತಿ ಬೆಳೆ
ಕಲಬುರಗಿ ಜೂನ್ 24: ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ರೈತರು ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ ಬೆಳೆಯನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆದಿದ್ದಾರೆ. ಇದನ್ನು ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ ಸುಮಾರು ನಾಲ್ಕು ಪಟ್ಟು ಅಧಿಕ ಎನ್ನಬಹುದು.
ಮಾನ್ಸೂನ್ ಬೆಳೆಗಳ (ಖಾರೀಫ್) ಪೈಕಿ ಸೂರ್ಯಕಾಂತಿ ಬೆಳೆಯನ್ನು ಈ ಬಾರಿ ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವ್ಯಾಪ್ತಿಯ ರೈತರು ಹೇರಳವಾಗಿ ಬೆಳೆದಿದ್ದಾರೆ. ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ 2021ರಲ್ಲಿ 3,400 ಹೆಕ್ಟೇರ್ಗೂ ಅಧಿಕ ಸೂರ್ಯಕಾಂತಿ ಬೆಳೆಯಲಾಗಿತ್ತು.
ಅದೇ ಈ ವರ್ಷ ಒಟ್ಟು ಸುಮಾರು 17,000 ಹೆಕ್ಟೇರ್ ಪ್ರದೇಶಲ್ಲಿ ಸೂರ್ಯಕಾಂತಿ ಬೆಳೆಯುವ ಮೂಲಕ ಅಧಿಕ ಇಳುವರಿ ಪಡೆಯಲು ಮುಂದಾಗಿದ್ದಾರೆ. ಇದರಿಂದ ಈ ಜಿಲ್ಲೆಯಲ್ಲಿ ಈ ಸಲ ಸೂರ್ಯಕಾಂತಿ ಬೆಳೆಯ ಪ್ರಮಾಣ ನಾಲ್ಕು ಪಟ್ಟು ಅಧಿಕವಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ರಷ್ಯಾ ಹಾಗೂ ಉಕ್ರೇನ್ ಯುದ್ಧದ ಪರಿಣಾಮ ಸೂರ್ಯ ಕಾಂತಿ ಅಡುಗೆ ಎಣ್ಣೆ (ಸನ್ ಫ್ಲವರ್) ಅತ್ಯಧಿಕ ಬೇಡಿಕೆ ಸೃಷ್ಟಿಯಾಗಿತ್ತು. ಪ್ರತಿ ಕೆಜಿ ಸನ್ ಫ್ಲವರ್ ಆಯಿಲ್ ಬೆಲೆ ಗಗನಕ್ಕೇರಿದ್ದು, ಈಗಲೂ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಇದು ಕೂಡ ಸೂರ್ಯ ಕಾಂತಿ ಬೆಳೆ ಬೆಳೆಯುವ ಪ್ರಮಾಣ ಹೆಚ್ಚಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಅಧಿಕ ಆಮದು ವಿದೇಶಗಳಿಂದಲೇ
ಸೂರ್ಯ ಕಾಂತಿ ತೈಲ ಪೂರೈಸುವ ದೇಶಗಳ ಪೈಕಿ ರಷ್ಯಾ ಮತ್ತು ಉಕ್ರೇನ್ ದೇಶಗಳು ಅಗ್ರಗಣ್ಯ. ಭಾರತಕ್ಕೆ ಶೇ.90ರಷ್ಟು ಸೂರ್ಯಕಾಂತಿ ಎಣ್ಣೆ ರಷ್ಯಾ, ಉಕ್ರೇನ್ ದೇಶಗಳಿಂದಲೇ ಆಮದಾಗುತ್ತಿತ್ತು. ಅಂದಾಜು 13.2ಮಿಲಿಯನ್ ಟನ್ ಗಳಷ್ಟು ಖಾದ್ಯ ತೈಲ ಆಮದು ಮಾಡಿಕೊಂಡರೆ, ಅದರಲ್ಲಿ ಬಹುಪಾಲು ಅಂದರೆ ಸುಮಾರು 2.2ಮಿಲಿಯನ್ ಟನ್ ಗಳಷ್ಟು ಸೂರ್ಯಕಾಂತಿ ಎಣ್ಣೆಯನ್ನೇ ಆಮದು ಮಾಡಿಕೊಂಡಿತ್ತು.
ಈ ಎರಡು ದೇಶಗಳ ನಡುವಿನ ಯುದ್ಧದಿಂದಾಗಿ ಭಾರತ ಒಪ್ಪಂದ ಮಾಡಿಕೊಂಡಷ್ಟು ಸೂರ್ಯಕಾಂತಿ ಎಣ್ಣೆ ಆಮದಾಗಲಿಲ್ಲ ಎಂಬ ಮಾತು ಒಂದೆಡೆ ಕೇಳಿ ಬಂದರೆ, ಮತ್ತೊಂದೆಡೆ ಅಗತ್ಯದಷ್ಟು ಎಣ್ಣೆ ಭಾರತಕ್ಕೆ ಆಮದಾಗಿದ್ದರೂ, ಮಧ್ಯವರ್ತಿಗಳು ದುರಾಸೆಗೆ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಿಸಿದ್ದಾರೆ ಎನ್ನಲಾಗಿತ್ತು. ಈ ಎಲ್ಲ ಕಾರಣಗಳೇ ಇಂದು ಕರ್ನಾಟಕದಲ್ಲಿ ಸೂರ್ಯಕಾಂತಿ ಬೆಳೆಗಳ ಪ್ರಮಾಣ ಏರಿಕೆಗೆ ದಾರಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ರಾಜ್ಯ ಸರ್ಕಾರದ ಪ್ರೋತ್ಸಾಹ
ಮೂರು ವರ್ಷಗಳ ನಂತರ ಕೃಷಿ ಇಲಾಖೆ ಸೂರ್ಯ ಕಾಂತಿ ಬೀಜಗಳನ್ನು ರೈತರಿಗೆ ಪೂರೈಸುತ್ತಿದೆ. ಬೇಡಿಕೆ ಹೆಚ್ಚಾಗಿದ್ದರಿಂದ ಹಾಗೂ ಲಾಭದಾಯಕ ಬೆಲೆ ದೊರೆಯುವ ಹಿನ್ನೆಲೆ ರಾಜ್ಯ ಸರ್ಕಾರ ಸೂರ್ಯಕಾಂತಿ ಹೆಚ್ಚು ಬೆಳೆಯುವಂತೆ ರೈತರನ್ನು ಉತ್ತೇಜಿಸಲು ಸೂಚಿಸಿತ್ತು. ಅದರಂತೆ ಈ ಬಾರಿ ಸೂರ್ಯಕಾಂತಿ ಕೃಷಿಯಲ್ಲಿ ಏರಿಕೆ ಕಂಡು ಬಂದಿದೆ.
ಈ ವರ್ಷ ಸೂರ್ಯಕಾಂತಿ ಮುಂದಿನ ವರ್ಷ ಮುಂಗಾರು ಸಮಯದಲ್ಲಿ ರೈತರು ಮತ್ತೊಂದು ಎಣ್ಣೆ ಕಾಳು ಬಳೆಯಾದ ನೆಲಗಡಲೆ ಯನ್ನು ಆಯ್ಕೆ ಮಾಡಿಕೊಂಡು ಅದನ್ನೇ ಹೆಚ್ಚಾಗಿ ಬೆಳೆಯಬಹುದು ಎಂದು ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದುಪ್ಪಟ್ಟು ಸೋಯಾ ಬೆಳೆ ನಿರೀಕ್ಷೆ
ಸೂರ್ಯಕಾಂತಿ ಜತೆಗೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಈವರ್ಷ ಸೋಯಾಬಿನ್ ಬೆಳೆಯೂ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ವರ್ಷ 12ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಬೆಳೆಯಲಾಗಿತ್ತು. ಈವರ್ಷ ಅದರ ಪ್ರಮಾಣ ದುಪ್ಪಟ್ಟು ಅಂದರೆ ಸುಮಾರು 30 ಸಾವಿರ ಹೆಕ್ಟೇರ್ ಗೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಸೂರ್ಯಕಾಂತಿ ಬೆಳೆಯುವಂತೆ ಉತ್ತೇಜನ
ಅದೇ ರೀತಿ ಬೀದರ್ ನಲ್ಲಿ ಕಳೆದ ವರ್ಷ 1.80ಲಕ್ಷ ಹೆಕ್ಟೇರ್ ನಷ್ಟಿದ್ದ ಸೋಯಾ ಬೆಳೆ ಈ ಬಾರಿ 2.6ಲಕ್ಷ ಹೆಕ್ಟೇರ್ ಗೆ ಏರಿಕೆ ಆಗಿದೆ. ಇಲ್ಲಿಯೂ ಸಹ ರೈತರಿಗೆ ಸೂರ್ಯಕಾಂತಿ ಬೆಳೆಯುವಂತೆ ಪ್ರೋತ್ಸಾಹಿಸಲಾಗಿದೆ. ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಳೆಗಳಿಗೆ ಬೇಡಿಕೆ ಸೃಷ್ಟಿಯಾಗಿರುವುದರಿಂದ ರೈತರು ಆ ಬೆಳೆಗಳತ್ತ ಹೆಚ್ಚು ವಾಲುತ್ತಿರುವುದು ಕಂಡು ಬಂದಿದೆ.
Recommended Video