ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವನೆ ತಿರಸ್ಕರಿಸಿದ ರಾಜ್ಯದ ರೈತರು!
ಬೆಂಗಳೂರು, ಅ. 16: ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ದರ (FRP)ವನ್ನು ತಿರಸ್ಕರಿಸಿದ್ದು, ಪ್ರತಿ ಟನ್ ಗೆ 3,300 ರೂ. ದರ ನೀಡುವಂತೆ ಕರ್ನಾಟಕದ ಕಬ್ಬು ಬೆಳೆಗಾರರು ಹಾಗೂ ರೈತ ಸಂಘಟನೆಗಳು ಆಗ್ರಹಿಸಿವೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ದರವನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘ ಕೂಡ ತಿರಸ್ಕಾರ ಮಾಡಿದೆ.
ವಿಕಾಸಸೌಧದಲ್ಲಿ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ನೇತೃತ್ವದಲ್ಲಿ ಕಬ್ಬು ಖರೀದಿ ದರ ನಿಗದಿ ಮಂಡಳಿ ಸಭೆ ನಡೆಯಿತು. ಕೇಂದ್ರ ಸರ್ಕಾರ ನಿಗದಿಪಡಿಸಿರುವ 2,850 ರೂಪಾಯಿ ಎಫ್ಆರ್ಪಿ ದರವನ್ನು ತಿರಸ್ಕರಿಸಿದ್ದೇವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸಭೆಯ ಬಳಿಕ ಹೇಳಿದ್ದಾರೆ. ರಾಜ್ಯ ಸರ್ಕಾರ ಹೆಚ್ಚುವರಿ ಬೆಲೆ ನಿಗದಿ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಲಾಗಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಚಿವರು ಶಿವರಾಮ್ ಹೆಬ್ಬಾರ್ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.
ಕೇಂದ್ರದ ದರ ನಿಗದಿ ಒಪ್ಪಿಲ್ಲ
ಕಬ್ಬು ಬೆಳೆಗೆ ರಾಜ್ಯ ಸಲಹಾ ಬೆಲೆ ನಿಗದಿ ಮಾಡುತ್ತೇವೆ ಎಂದು ಸರ್ಕಾರ ಒಪ್ಪಿದೆ. ನಾವೂ ಕಾದು ನೋಡುತ್ತೇವೆ. ಕೇಂದ್ರ ನಿಗದಿಪಡಿಸಿರುವ ಎಫ್ಆರ್ ಪಿ ದರಕ್ಕೆ ನಮ್ಮ ಒಪ್ಪಿಗೆ ಇಲ್ಲ. ರೈತರ ಎಲ್ಲಾ ಉತ್ಪನ್ನಗಳ ಬೆಲೆ ಜಾಸ್ತಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಎಫ್ಆರ್ ಪಿ ಬೆಲೆಯನ್ನು ನಾವು ಒಪ್ಪಲ್ಲ. ಎಫ್ಆರ್ ಪಿ ದರದ ಮೂಲಕ ರೈತರಿಗೆ ಚಳ್ಳೆಹಣ್ಣು ತಿನ್ನಿಸುವ ಕೆಲಸ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ಟನ್ಗೆ 3,330 ರೂ. ಬೆಲೆ ನಿಗದಿ ಮಾಡಿ
ಈ ಸಂಬಂಧ ಕೇಂದ್ರ ಸರ್ಕಾರಕ್ಕೆ FRP ದರ ಪುನರ್ ಪರಿಶೀಲನೆ ಮಾಡಲು ಒತ್ತಡ ಹೇರುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಪ್ರತಿ ಟನ್ ಗೆ 3,330 ಬೆಲೆ ನಿಗದಿ ಮಾಡುವಂತೆ ಬೇಡಿಕೆ ಇಟ್ಟಿದ್ದೇವೆ. ಒಂದು ವಾರ ಸರ್ಕಾರದ ನಿರ್ಧಾರಕ್ಕೆ ಕಾದು ನೋಡುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ರೈತರಿಗೆ ಬೆಲೆಯಲ್ಲಿ ಮೋಸ
ಕಬ್ಬಿನ ಹಣ ಪಾವತಿ ಮಾಡುವುದು ವಿಳಂಬವಾಗುತ್ತಿದೆ. ರೈತರಿಗೆ ಸಕ್ಕರೆ ಇಳುವರಿಯನ್ನು ಎಲ್ಲ ಸಕ್ಕರೆ ಕಾರ್ಖಾನೆಗಳು ಕಡಿಮೆ ತೋರಿಸುತ್ತಿವೆ. ಇದರಿಂದ ರೈತರಿಗೆ ಬೆಲೆಯಲ್ಲಿ ಮೋಸ ಆಗುತ್ತಿದೆ. ಉಪ ಉತ್ಪನ್ನಗಳ ಲಾಭ ಹಂಚಿಕೆಯಲ್ಲೂ ಅನ್ಯಾಯವಾಗುತ್ತಿದೆ.
ಸಕ್ಕರೆ ಇಳುವರಿ ಕಡಿಮೆ ತೋರಿಸುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದ್ದೇವೆ. ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ರಚಿಸಿ ಎಲ್ಲೆಲ್ಲಿ ಇಳುವರಿ ಕಡಿಮೆ ತೋರಿಸ್ತಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂಬ ಬಗ್ಗೆ ತೀರ್ಮಾನ ಆಗಿದೆ ಎಂದು ತಿಳಿಸಿದರು.
700 ಕೋಟಿ ರೂ. ಕಬ್ಬಿನ ಬಿಲ್ ಬಾಕಿ
ರಾಜ್ಯ ಸರ್ಕಾರ 190 ಕೋಟಿ ರೂ. ಮಾತ್ರ ಕಬ್ಬಿನ ಬಿಲ್ ಬಾಕಿ ಇದೆ ಎಂದು ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಸುಮಾರು 700 ಕೋಟಿ ರೂ. ಕಬ್ಬಿನ ಬಿಲ್ ಬಾಕಿ ಇದೆ ಎಂದು ಸಭೆಯಲ್ಲಿ ಸಚಿವರಿಗೆ ತಿಳಿಸಿದ್ದೇವೆ ಎಂದು ಕುರುಬೂರು ಸ್ಪಷ್ಟಪಡಿಸಿದ್ದಾರೆ.