ಯಾವ ಪಕ್ಷದ ಮುಖಂಡರು ರೈತರಿಗೆ ಎಷ್ಟು ಬಾಕಿ ಉಳಿಸಿಕೊಂಡಿದ್ದಾರೆ? ಇಲ್ಲಿದೆ ಮಾಹಿತಿ
Recommended Video
ಬೆಂಗಳೂರು, ನವೆಂಬರ್ 20: ಕಬ್ಬು ಬೆಳೆಗಾರರು ಬೀದಿಗೆ ಇಳಿದಿದ್ದಾರೆ. ತಾವು ಬೆಳೆದ ಕಬ್ಬಿಗೆ ನ್ಯಾಯಯುತವಾಗಿ ನೀಡಬೇಕಿದ್ದ ಹಣವನ್ನು ಸಕ್ಕರೆ ಕಾರ್ಖಾನೆಗಳು ನೀಡಿಲ್ಲ ಎಂದು ಅವರು ಆಕ್ರೋಶಗೊಂಡಿದ್ದಾರೆ.
ಸರ್ಕಾರವು ಮಧ್ಯಸ್ಥಿಕೆ ವಹಿಸಿ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರ ಬಾಕಿ ಮೊತ್ತವನ್ನು ವಾಪಸ್ ಕೊಡಿಸಬೇಕು ಎಂದು ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಅದರ ಫಲವಾಗಿ ಇಂದು ಸಿಎಂ ಕುಮಾರಸ್ವಾಮಿ ಅವರು ಕಬ್ಬು ಬೆಳೆಗಾರರ ಬಾಕಿ ಹಣವನ್ನು ಕೊಡಿಸುವ ಭರವಸೆ ನೀಡಿದ್ದಾರೆ.
ಆದರೆ ಭರವಸೆ ನೀಡಿದಷ್ಟು ಬಾಕಿ ಹಣ ಕೊಡಿಸುವುದು ಸುಲಭವಲ್ಲ. ಸರ್ಕಾರದ ಭಾಗವಾಗಿರುವ ಎಷ್ಟೋ ಪ್ರಮುಖ ಸಚಿವರ, ಶಾಸಕರ ಸಕ್ಕರೆ ಕಾರ್ಖಾನೆಗಳೇ ಕೋಟ್ಯಂತರ ರೈತರ ಹಣವನ್ನು ಬಾಕಿ ಉಳಿಸಿಕೊಂಡಿವೆ. ಆಡಳಿತ ಪಕ್ಷದ, ವಿರೋಧ ಪಕ್ಷದ ಶಾಸಕರು, ಸಚಿವರಿಗೆ ಸೇರಿದ ಸಕ್ಕರೆ ಕಾರ್ಖಾನೆಗಳೇ ರೈತರಿಗೆ ಹಣ ನೀಡಿಲ್ಲ.
ಸಿಎಂ-ರೈತರ ಸಭೆ ಮುಕ್ತಾಯ, ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ಆರಂಭ
ಹಾಗಿದ್ದರೆ ಯಾವ ಪಕ್ಷದ ಶಾಸಕರು ಮುಖಂಡರು ರೈತರಿಗೆ ಕೊಡಬೇಕಾದ ಎಷ್ಟು ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.
ಬಿಜೆಪಿ ಮುರಗೇಶ ನಿರಾಣಿ ಕೊಡಬೇಕಾದ ಬಾಕಿ
ಬಿಜೆಪಿ ಶಾಸಕ ಮುರಗೇಶ ನಿರಾಣಿ ಅವರ ಮುಧೋಳ ನಿರಾಣಿ ಸಕ್ಕರೆ ಕಾರ್ಖಾನೆಯು ಸಕ್ಕರೆ ಕಾರ್ಖಾನೆ 2017-18 ಸಾಲಿನಲ್ಲಿ 28.12 ಕೋಟಿ ಬಾಕಿ ಹಣ ನೀಡಬೇಕಿದೆ. ಇವರದ್ದೇ ಮಾಲೀಕತ್ವದ ಸಾಯಿಪ್ರಿಯಾ ಕಾರ್ಖಾನೆಯು 11.09 ಕೋಟಿ ಪಾವತಿಸಬೇಕಿದೆ.
ಕೀಟನಾಶಕ ಸೇವಿಸಿ ಮಂಡ್ಯದಲ್ಲಿ ವೃದ್ಧ ರೈತ ದಂಪತಿ ಆತ್ಮಹತ್ಯೆ
ಆನಂದ್ ನ್ಯಾಮಗೌಡ ಮಾಲೀಕತ್ವದ ಕಾರ್ಖಾನೆ
ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಮಾಲೀಕತ್ವದ ಜಮಖಂಡಿ ಸಕ್ಕರೆ ಕಾರ್ಖಾನೆಯು 2017-18 ಸಾಲಿನಲ್ಲಿ 17.46 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಬಿಜೆಪಿ ಮುಖಂಡ ಜಗದೀಶ್ ಗುಡಗುಂಟಿ ಅವರ ಪ್ರಭುಲಿಂಗೇಶ್ವರ ಶುಗರ್ಸ್ ಕಾರ್ಖಾನೆಯು 24.83 ಕೋಟಿ ಬಾಕಿ ಹಣ ರೈತರಿಗೆ ನೀಡಬೇಕಿದೆ.
ರೈತ ಮಹಿಳೆಗೆ ಬೈಗುಳ, ವಿವಾದಕ್ಕೆ ಸ್ಪಷ್ಟನೆ ಕೊಟ್ಟರು ಕುಮಾರಸ್ವಾಮಿ
ಶಾಮನೂರು ಶಿವಶಂಕರಪ್ಪ ಉಳಿಸಿಕೊಂಡಿರುವ ಬಾಕಿ
ಬಿಜೆಪಿ ಮುಖಂಡ ರಾಮಣ್ಣ ತಾಳೇವಾಡ ಅವರು ಅಧ್ಯಕ್ಷರಾಗಿರುವ ರನ್ನ ಸಕ್ಕರೆ ಕಾರ್ಖಾನೆಯು 7.20 ಕೋಟಿ ಬಾಕಿಯನ್ನು ರೈತರಿಗೆ ಕೊಡಬೇಕಿದೆ. ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮಾಲೀಕತ್ವದ ಐಸಿಪಿಎಲ್ ಶುಗರ್ಸ್ ಕಾರ್ಖಾನೆಯು 18.18 ಕೋಟಿ ಬಾಕಿ ನೀಡಬೇಕಿದೆ.
ಎಸ್ಆರ್ ಪಾಟೀಲ್ ಮಾಲೀಕತ್ವದ ಕಾರ್ಖಾನೆ
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ್ ಮಲಘಾಣ ಅವರ ಸಾವರಿನ್ ಶುಗರ್ಸ್ ಕಾರ್ಖಾನೆಯು 9.08 ಕೋಟಿ ಬಾಕಿಯನ್ನು ರೈತರಿಗೆ ನೀಡಬೇಕು. ಒಮ್ಮೆ ಇವರ ಕಾರ್ಖಾನೆ ಎದುರು ಕಬ್ಬು ಬೆಳೆಗಾರನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಕಾಂಗ್ರೆಸ್ ಮಾಜಿ ಸಚಿವ ಎಸ್ಆರ್ ಪಾಟೀಲ್ ಮಾಲೀಕತ್ವದ ಬೀಳಗಿ ಶುಗರ್ಸ್ ಫ್ಯಾಕ್ಟರಿಯು 9.72 ಕೋಟಿ ಹಣ ಪಾವತಿ ಮಾಡಬೇಕಿದೆ.
ಜಾರಕಿಹೊಳಿ ಸಹೋದರರು ಕೊಡಬೇಕಾದ ಹಣ
ಸಚಿವ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮಿ ಕಾರ್ಖಾನೆ 20 ಕೋಟಿ, ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಒಡೆತನದ ಸತೀಶ ಶುಗರ್ಸ್ ಹಾಗೂ ಬೆಳಗಾವಿ ಶುಗರ್ಸ್ ಕಾರ್ಖಾನೆಯು 42 ಕೋಟಿ ಬಾಕಿ ಉಳಿಸಿಕೊಂಡಿದೆ. ಚಂದ್ರ ಜಾರಕಿಹೊಳಿ ಒಡೆತನದ ಘಟಪ್ರಭಾ ಸಕ್ಕರೆ ಕಾರ್ಖಾನೆ 4 ಕೋಟಿ ಬಾಕಿ ಉಳಿಸಿಕೊಂಡಿದೆ.
ಉಮೇಶ್ ಕತ್ತಿ ನೀಡಬೇಕಾದ ಹಣ ಎಷ್ಟು?
ಬಿಜೆಪಿ ಶಾಸಕ ಉಮೇಶ ಕತ್ತಿ ಒಡೆತನದ ವಿಶ್ವನಾಥ ಶುಗರ್ಸ್ ಸಂಸ್ಥೆಯು 15 ಕೋಟಿ ಬಾಕಿ ಉಳಿಸಿಕೊಂಡಿದೆ. ಬಿಜೆಪಿ ಮುಖಂಡ ವಿಠಲ್ ಹಲೇಗರಕ್ ಅವರ ಲೈಲಾ ಶುಗರ್ಸ್ ಕಾರ್ಖಾನೆ 6 ಕೋಟಿ ಬಾಕಿ ಉಳಿಸಿಕೊಂಡಿದೆ. ಮಹಾರಾಷ್ಟ್ರದ ರಾಜಕಾರಣಿ ಶಿಂಧೆ ಅವರ ಪುತ್ರನ ಒಡೆತನದ ಇಂಡಿಯನ್ ಶುಗರ್ಸ್ ಕಾರ್ಖಾನೆಯು 6 ಕೋಟಿ ಬಾಕಿ ಉಳಿಸಿಕೊಂಡಿದೆ. ಬಿಜೆಪಿಯ ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಒಡೆತನದ ಜ್ಞಾನಯೋಗಿ ಶಿವಕುಮಾರ ಸಕ್ಕರೆ ಕಾರ್ಖಾನೆಯು 6 ಕೋಟಿ ಬಾಕಿ ಉಳಿಸಿಕೊಂಡಿದೆ.
ಮಾಜಿ ಶಾಸಕ ಜೆಟಿ ಪಾಟೀಲ ನೀಡಬೇಕಾದ ಹಣ
ಕಾಂಗ್ರೆಸ್ ಮಾಜಿ ಶಾಸಕ ಜೆಟಿ ಪಾಟೀಲ ಅವರ ಸಹೋದರರ ಮಾಲೀಕತ್ವದ ಮನಾಲಿ ಶುಗರ್ಸ್ 6 ಕೋಟಿ ಬಾಕಿ ಉಳಿಸಿಕೊಂಡಿದೆ. ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಸಂಬಂಧಿಗಳದ್ದು ಎನ್ನಲಾಗುವ ಕೆಪಿಆರ್ ಸಕ್ಕರೆ ಕಾರ್ಖಾನೆಯು 11 ಕೋಟಿ ಉಳಿಸಿಕೊಂಡಿದೆ.
ರಾಜಕಾರಣಿಗಳ ಲೆಕ್ಕ ಮಾತ್ರ
ಮೇಲಿನವು ಕೇವಲ ರಾಜಕಾರಣಿಗಳಿಗೆ ಸೇರಿದ ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಹಣ. ಉದ್ದಿಮೆಗಳ ಮಾಲೀಕತ್ವದ ಹಾಗೂ ಸಹಕಾರಿ ಸಕ್ಕರೆ ಕಾರ್ಖಾನೆಗಳು ಸಹ ಕೋಟ್ಯಂತರ ಹಣವನ್ನು ಬಾಕಿ ಉಳಿಸಿಕೊಂಡಿದೆ.