ಚಾಮರಾಜನಗರ: ಸಾಂಬಾರ್ ಈರುಳ್ಳಿ ಬೆಳೆದ ರೈತನಿಗೆ ಸಂಕಷ್ಟ!
ಚಾಮರಾಜನಗರ, ಆಗಸ್ಟ್ 21: ಆರ್ಥಿಕ ದೃಷ್ಠಿಯಿಂದ ಸಾಂಬಾರ್ ಈರುಳ್ಳಿ ಬೆಳೆದರೆ ಒಂದಷ್ಟು ಲಾಭ ತರಬಹುದು ಎಂಬ ಚಾಮರಾಜನಗರ ಜಿಲ್ಲೆಯ ರೈತರ ಲೆಕ್ಕಾಚಾರ ತಲೆಕೆಳಗಾಗಿದೆ.
ಕಳೆದ ವರ್ಷ ಕೊರೊನಾ ಸೋಂಕಿನ ನಡುವೆಯೂ ರೈತರು ಸಾಂಬಾರ್ ಈರುಳ್ಳಿ ಬೆಳೆದಿದ್ದರು. ಉತ್ತಮ ಇಳುವರಿ ಬಂದಿತ್ತಾದರೂ, ಹೊರ ರಾಜ್ಯದ ಸಂಪರ್ಕ ನಿಷೇಧ ಮಾಡಿದ್ದರಿಂದ ಉತ್ತಮ ಬೆಲೆ ಸಿಗದೆ ರೈತರು ಸಂಕಷ್ಟ ಅನುಭವಿಸುವಂತಾಗಿತ್ತು. ಆದರೆ ಈ ಬಾರಿ ರೈತರಿಗೆ ಮತ್ತೊಂದು ತೊಂದರೆಯಾಗಿದೆ ಅದು ಏನೆಂದರೆ ಮಳೆ ಹೆಚ್ಚು ಸುರಿದ ಪರಿಣಾಮ ಈರುಳ್ಳಿ ಜಮೀನಿನಲ್ಲಿಯೇ ಕೊಳೆಯಲಾರಂಭಿಸಿದೆ.
ನೀರಾವರಿ ಜಮೀನು ಹೊಂದಿರುವ ಒಂದಷ್ಟು ರೈತರು ಸಾಂಬಾರ್ ಈರುಳ್ಳಿಯನ್ನು ಹಿಂದಿನಿಂದಲೂ ಬೆಳೆಯುತ್ತಾ ಬಂದಿದ್ದಾರೆ. ಇಲ್ಲಿನ ಸಾಂಬಾರ್ ಈರುಳ್ಳಿಗೆ ಕೇರಳ ಮತ್ತು ತಮಿಳುನಾಡಿನಲ್ಲಿ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಈ ಭಾಗದ ರೈತರು ಬೆಳೆದ ಈರುಳ್ಳಿ ತಮಿಳುನಾಡು, ಕೇರಳ ಸೇರುತ್ತದೆ. ಹೀಗಾಗಿ ಪ್ರತಿ ವರ್ಷವೂ ಉತ್ತಮ ಬೆಲೆ ಸಿಗಬಹುದು ಎಂಬ ಆಶಾ ಭಾವನೆಯನ್ನಿಟ್ಟುಕೊಂಡು ರೈತರು ಸಾಂಬಾರ್ ಈರುಳ್ಳಿಯನ್ನು ಬೆಳೆಯಲು ಮುಂದಾಗುತ್ತಾರೆ.
ಮಳೆಯಿಂದಾಗಿ ಬೆಲೆ ಕುಸಿತ
ಆದರೆ ಈ ಬಾರಿ ರೈತರ ಲೆಕ್ಕಾಚಾರದಂತೆ ನಡೆದಿಲ್ಲ. ಬೆಳೆ ಉತ್ತಮವಾಗಿಯೇ ಬಂದಿತ್ತಾದರೂ ಕಟಾವು ಸಮಯದಲ್ಲಿ ಮಳೆ ಸುರಿಯುತ್ತಿರುವ ಕಾರಣ ಬೆಲೆ ಕುಸಿತವನ್ನು ರೈತರು ಅನುಭವಿಸಬೇಕಾಗಿದೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ ಮೂರು ಸಾವಿರದಷ್ಟು ಇದ್ದರೂ ರೈತರಿಂದ ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಏಕೆಂದರೆ ಈರುಳ್ಳಿ ಕೀಳುವ ಸಮಯದಲ್ಲಿಯೇ ಮಳೆ ಬಂದು ತೇವವಾಗಿರುವುದರಿಂದ ಈರುಳ್ಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂಬುದು ರೈತರ ಅಳಲಾಗಿದೆ.
ಮಿಶ್ರಬೆಳೆಯಾಗಿ ಸಾಂಬಾರ್ ಈರುಳ್ಳಿ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನೀರಾವರಿ ಸೌಲಭ್ಯ ಪಡೆದಿರುವ ರೈತರು ಬಾಳೆ, ತರಕಾರಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ವಾಣಿಜ್ಯ ಬೆಳೆಗಳಾದ ಅರಿಸಿನ, ಸಾಂಬಾರ್ ಈರುಳ್ಳಿ, ಕಬ್ಬು, ಸೂರ್ಯಕಾಂತಿ, ಮುಸುಕಿನ ಜೋಳ ಮೊದಲಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ, ಬಹಳಷ್ಟು ರೈತರು ಮುಂಗಾರು ಆರಂಭವಾಗುತ್ತಿದ್ದಂತೆಯೇ ಅರಿಸಿನ ಬೆಳೆಯನ್ನು ನಾಟಿ ಮಾಡುತ್ತಾರೆ. ಆದರೆ ಅರಿಸಿನ ಬೆಳೆಯು ವರ್ಷದ ಬೆಳೆಯಾಗಿರುವ ಕಾರಣ ಇದರ ಜತೆಗೆ ಮಿಶ್ರ ಬೆಳೆಯಾಗಿ ಸಾಂಬಾರ್ ಈರುಳ್ಳಿಯನ್ನು ಬೆಳೆಯುತ್ತಾರೆ.
ಈರುಳ್ಳಿ ಬೆಳೆದರೆ ಮೂರು ತಿಂಗಳ ಬೆಳೆ
ಹೀಗೆ ಮಾಡುವುದರಿಂದ ಒಂದಷ್ಟು ಲಾಭವಾಗುತ್ತದೆ. ಅದು ಹೇಗೆಂದರೆ, ಅರಿಸಿನ ಬಿತ್ತನೆ ಮಾಡಿ ಮೊಳಕೆ ಬರಲು ಒಂದು ತಿಂಗಳಷ್ಟು ಸಮಯ ಬೇಕಾಗುತ್ತದೆ. ಇದರ ಮಧ್ಯೆ ಸಾಂಬಾರ್ ಈರುಳ್ಳಿ ಬೆಳೆದರೆ ಅದು ಮೂರು ತಿಂಗಳ ಬೆಳೆಯಾಗಿರುವುದರಿಂದ ಅರಿಸಿನ ಬೆಳೆ ಬೆಳೆವಣಿಗೆ ಆರಂಭಿಸುವ ವೇಳೆಗೆ ಸಾಂಬಾರ್ ಈರುಳ್ಳಿ ಕೊಯ್ಲುಗೆ ಬಂದು ಬಿಡುತ್ತದೆ. ಹೀಗಾಗಿ ಒಂದಷ್ಟು ಕೆಲಸಗಳನ್ನು ಎರಡು ಬೆಳೆಗೂ ಒಂದೇ ಖರ್ಚಿನಲ್ಲಿ ಮಾಡಲು ಸಾಧ್ಯವಾಗುತ್ತದೆ. ಇದೆಲ್ಲ ಲೆಕ್ಕಾಚಾರ ಹಾಕಿಕೊಂಡು ರೈತರು ಸಾಂಬಾರ್ ಈರುಳ್ಳಿ ಬೆಳೆದರೂ ಇದೀಗ ಒಂದಷ್ಟು ಸಮಸ್ಯೆಗಳು ರೈತರನ್ನು ಕಾಡಲು ಆರಂಭಿಸಿದೆ.
ತಲೆಕೆಳಗಾದ ರೈತರ ಲೆಕ್ಕಾಚಾರ
ಮುಂಗಾರು ಮುನ್ನವೇ ಸಾಂಬಾರ್ ಈರುಳ್ಳಿ ಬಿತ್ತನೆ ಮಾಡಿದ ರೈತರು ಕಟ್ಟಾವು ಮಾಡಿ ಕ್ವಿಂಟಾಲ್ಗೆ ಮೂರು ಸಾವಿರಕ್ಕಿಂತ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ. ಆದರೆ ತಡವಾಗಿ ಬಿತ್ತನೆ ಮಾಡಿದ ರೈತರು ಸ್ವಲ್ಪ ಕಿತ್ತು ಮಾರಾಟ ಮಾಡಿದ್ದು, ಕಿತ್ತಿರುವ ಈರುಳ್ಳಿ ಬೆಳೆಯು ಮಳೆಗೆ ಸಿಲುಕಿ ತೇವಾಂಶ ಹೊಂದಿರುವ ಕಾರಣ ಅದರ ಬೆಲೆ ಕುಸಿದಿದೆ. ಜತೆಗೆ ತೇವವಿರುವ ಈರುಳ್ಳಿಯನ್ನು ಖರೀದಿಸಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ.
ಸಾಂಬಾರ್ ಈರುಳ್ಳಿ ಕೃಷಿಯಿಂದ ರೈತರಿಗೆ ಒಂದಷ್ಟು ಆದಾಯ ಬಂದರೆ, ಮತ್ತೊಂದಷ್ಟು ಮಂದಿಗೆ ಕೂಲಿಯೂ ಸಿಗುತ್ತಿತ್ತು. ಈರುಳ್ಳಿ ಕಿತ್ತು ಶುಚಿ ಮಾಡುವುದಕ್ಕೆ ಕೆಜಿಗೆ ಮೂರು ರೂಪಾಯಿಯಂತೆ ದರ ವಿಧಿಸಲಾಗಿದ್ದು, ಕೂಲಿ ಮಾಡುವವರಿಗೆ ಒಂದಿಷ್ಟು ಆದಾಯ ಬರುತ್ತಿತ್ತು. ಆದರೆ ಈಗ ಅದ್ಯಾವುದೂ ಸಾಧ್ಯವಾಗದಂತಾಗಿದೆ. ಮೇಲಿಂದ ಮೇಲೆ ಸಮಸ್ಯೆಗಳು ಎದುರಾದರೆ ಕೃಷಿ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ರೈತರದ್ದಾಗಿದೆ.