ದೆಹಲಿಗೂ ಪಪ್ಪಾಯ ಕಳಿಸಿ ಮಾದರಿಯಾದ ಕೊಪ್ಪಳದ ರೈತ
ಕೊಪ್ಪಳ, ಮೇ 07 : ಕೊಪ್ಪಳ ಜಿಲ್ಲೆಯ ರೈತರೊಬ್ಬರು ಕಷ್ಟಪಟ್ಟು ಪಪ್ಪಾಯ ಬೆಳೆದಿದ್ದರು. ಇನ್ನೇನು ಫಲಸು ಕೈಗೆ ಬಂತು ಎನ್ನುವಾಗ ಕೊರೊನಾದಿಂದಾಗಿ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಆದರೆ, ತೋಟಗಾರಿಕಾ ಇಲಾಖೆ ಅಧಿಕಾರಿಗಳ ಸಹಾಯದಿಂದ ರೈತ ಪಪ್ಪಾಯ ಮಾರಾಟ ಮಾಡುತ್ತಿದ್ದಾರೆ.
ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಜಾರಿಯಲ್ಲಿದ್ದರೂ ರೈತರ ಸಂಕಷ್ಟಕ್ಕೆ ಕೊಪ್ಪಳದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ಇದರಿಂದಾಗಿ ಕರ್ನಾಟಕದ ವಿವಿಧ ಜಿಲ್ಲೆ ಮಾತ್ರವಲ್ಲ ದೆಹಲಿಯ ಮಾರುಕಟ್ಟೆಗೂ ಕೊಪ್ಪಳದ ಪಪ್ಪಾಯ ತಲುಪಿದೆ.
ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ!
ಗಂಗಾವತಿ ತಾಲೂಕಿನ ಬೊಮಚ್ಚಿಹಾಳ ಗ್ರಾಮದ ರೈತ ದುರಗನಗೌಡ 2019ರ ಜುಲೈನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ 'ತೈವಾನ್-786' ಎನ್ನುವ ಪಪ್ಪಾಯ ತಳಿಯನ್ನು ನಾಟಿ ಮಾಡಿದ್ದರು.
ನೇರ ಮಾರುಕಟ್ಟೆ; ಲಾಕ್ ಡೌನ್ ನಡುವೆ ಲಾಭ ಕಂಡ ರೈತ
6*6 ಅಡಿ ಅಂತರದಲ್ಲಿ 4 ಎಕರೆಗೆ ಸುಮಾರು 4,800 ಸಸಿಗಳನ್ನು ನಾಟಿ ಹಾಕಲಾಗಿತ್ತು. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ವೆಚ್ಚ ಮತ್ತು ಸಾಮಾಗ್ರಿ ವೆಚ್ಚಗಳು ಸೇರಿ ರೂ. 1.64 ಲಕ್ಷ ಖರ್ಚು ಮಾಡಲಾಗಿತ್ತು. ಆದರೆ, ಬೆಳೆ ಕೈಗೆ ಬಂದ ಸಮಯಕ್ಕೆ ಸರಿಯಾಗಿ ಕೊರೊನಾ ಲಾಕ್ ಡೌನ್ ತಂದಿತು.
ಲಾಕ್ ಡೌನ್; ದ್ರಾಕ್ಷಿ ಬೆಳೆದ ಕೊಪ್ಪಳದ ರೈತ ಎಲ್ಲರಿಗೂ ಮಾದರಿ
ರೈತನಿಗೆ ಸಂಕಷ್ಟ ತಂದ ಕೊರೊನಾ
ಗಂಗಾವತಿ ತಾಲೂಕಿನ ರೈತ ದುರಗನಗೌಡ ತೋಟಗಾರಿಕೆ ಅಧಿಕಾರಿಗಳ ಮಾರ್ಗದರ್ಶನ ಪಡೆದು ಪೋಷಕಾಂಶ ಮತ್ತು ಕೀಟನಾಶಕಗಳ ಬಳಕೆ ಮಾಡಿ ಉತ್ತಮ ಫಸಲು ಪಡೆದಿದ್ದರು. ಫೆಬ್ರುವರಿ 2020ರಿಂದಲೇ ಪಪ್ಪಾಯ ಕಾಯಿ ಬಿಡಲು ಆರಂಭಿಸಿ ಉತ್ತಮ ಫಸಲು ಬಂದಿತು. ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿಯೂ ರೈತರು ಇದ್ದರು ಆಗ ಹೆಮ್ಮಾರಿಯಂತೆ ಕೋವಿಡ್-19 ಅಪ್ಪಳಿಸಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದರು.
ಅಧಿಕಾರಿಗಳ ಕಷ್ಟ ಹೇಳಿದರು
ರೈತ ಗಂಗಾವತಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಪ್ಪ ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡರು. ಶಿವಯೋಗಪ್ಪ ವಿವಿಧ ಮಾರುಕಟ್ಟೆಗಳನ್ನು ಸಂಪರ್ಕಿಸಿದರು. 17 ಟನ್ ಪಪ್ಪಾಯವನ್ನು ದೆಹಲಿ ಮಾರುಕಟ್ಟೆಗೆ ರೂ.7 ಪ್ರತಿ ಕೆ.ಜಿ.ಯಂತೆ ಕಳುಹಿಸಲಾಯಿತು. ದರ ಕಡಿಮೆ ಆಯಿತೆಂದು ರೈತ ದುರಗನಗೌಡರು ತಮ್ಮ ಕಳವಳ ವ್ಯಕ್ತಪಡಿಸಿದರು. ಉಡುಪಿ ಹಾಗೂ ಮಂಗಳೂರು ಮಾರುಕಟ್ಟೆ ಸಂಪರ್ಕಿಸಿ ರೂ. 17 ರಂತೆ ಸಾಗಾಣಿಕೆ ವೆಚ್ಚ ಸೇರಿ ದರವನ್ನು ನಿಗದಿ ಪಡಿಸಿ ಈಗಾಗಲೇ 3 ಟನ್ ಕಳುಹಿಸಿದ್ದಾರೆ.
ಸಕಲ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ
ಪ್ರತಿ ವಾರ 2ಟನ್ ಗಳಷ್ಟು ಪಪ್ಪಾಯ ಹಣ್ಣಿಗೆ ಬೇಡಿಕೆ ಇದೆ. ಮಾರುಕಟ್ಟೆಗಳಿಗೆ ದುರಗನಗೌಡರು ಉತ್ಪನ್ನಗಳನ್ನು ಕಳುಹಿಸಿಕೊಡುವ ವ್ಯವಸ್ಥೆಯನ್ನು ಇಲಾಖೆಯಿಂದ ಒದಗಿಸಿಕೊಡಲಾಗಿದೆ. ಅಲ್ಲದೇ ಉತ್ಪನ್ನವನ್ನು ಮಾರಾಟ ಮತ್ತು ಸಾಗಾಣಿಕೆ ಮಾಡಲು ಪರವಾನಿಗೆ ಪತ್ರವನ್ನು ನೀಡಿ ಸಹಕರಿಸಲಾಗಿದೆ. ಲಾಕ್ಡೌನ್ ಒಂದು ತಾತ್ಕಾಲಿಕ ಸಮಸ್ಯೆ, ರೈತರು ಆತಂಕ ಪಡದೆ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ಹೆಚ್ಚಿನ ಆದಾಯ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ರೈತ
ರೈತ ದುರುಗನಗೌಡ ಅವರು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. "ಫಸಲನ್ನು ಚೆನ್ನಾಗಿ ಬೆಳೆಯಲು ಮಾರ್ಗದರ್ಶನ ನೀಡಿದ ತೋಟಗಾರಿಕೆ ಅಧಿಕಾರಿಗಳು ನನ್ನ ಉತ್ಪನ್ನವನ್ನು ಮಾರಾಟ ಮಾಡಲೂ ಮಾರುಕಟ್ಟೆ ಒದಗಿಸಿ ಕೊಟ್ಟಿದ್ದಾರೆ, ನಾನು ಅವರಿಗೆ ಚಿರಋಣಿ" ಎಂದು ಹೇಳಿದ್ದಾರೆ.
ಪಪ್ಪಾಯ ಬೆಳೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ರೈತ ದುರಗನಗೌಡ 990598814, ಸಹಾಯಕ ತೋಟಗಾರಿಕೆ ಅಧಿಕಾರಿ 7760424441ಗಳನ್ನು ಸಂಪರ್ಕಿಸಬಹುದಾಗಿದೆ.