ಬಾಗಲಕೋಟೆ: ಕೃಷಿಯಲ್ಲಿ ಕುಬೇರನಾದ ರೈತ ಮಲ್ಲಪ್ಪ ಮೇಟಿ!
ಬಾಗಲಕೋಟೆ, ಜುಲೈ, 26: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಅನಗವಾಡಿ ಗ್ರಾಮದ ಮಲ್ಲಪ್ಪ ಮೇಟಿ ಎಂಬ ರೈತ 32 ಎಕರೆ ಜಮೀನನ್ನು ಖರೀಸಿದಿ ಸಾಧನೆ ಮಾಡಿದ್ದಾರೆ. ಬರೀ 4 ಎಕರೆಯಿಂದ 32 ಎಕರೆ ಹೊಲ ಮಾಡಿಕೊಂಡು ಇನ್ನಿತರ ರೈತರಿಗೆ ಮಲ್ಲಪ್ಪ ಸ್ಪೂರ್ತಿಯಾಗಿದ್ದಾರೆ.
ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯಕ್ಕಾಗಿ ಮಲ್ಲಪ್ಪನವರು 8 ಎಕರೆ ಹೊಲವನ್ನು ಕಳೆದುಕೊಂಡಿದ್ದರು. ಇವರಷ್ಟೇ ಅಲ್ಲದೇ ಲಕ್ಷಾಂತರ ರೈತರು ಭೂಮಿ, ಮನೆ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಇದಕ್ಕೆ ಸರ್ಕಾರ ಪರಿಹಾರವನ್ನು ಕೊಟ್ಟಿದೆ. ಎಷ್ಟೋ ಜನ ಪರಿಹಾರದ ಹಣವನ್ನು ವ್ಯರ್ಥ ಮಾಡಿದ್ದಾರೆ. ಮಲ್ಲಪ್ಪ ಮೇಟಿ ಮಾತ್ರ ಸರ್ಕಾರ ಕೊಟ್ಟ ಚಿಲ್ಲರೆ ಹಣದಲ್ಲೇ 4 ಹೊಲ ಖರೀದಿಸಿದ್ದರು. ಇದೀಗ ಒಟ್ಟಾರೆಯಾಗಿ 32 ಎಕರೆ ಹೊಲ ಖರೀದಿಸಿದ್ದು, ತಿಂಗಳಿಗೆ ಒಂದೂವರೆ ಲಕ್ಷ ಲಾಭ ಗಳಿಸಿ ಅಚ್ಚರಿ ಮೂಡಿಸಿದ್ದಾರೆ.
ರೈತ ಮಲ್ಲಪ್ಪ ಹೊಲದಲ್ಲಿ ದ್ರಾಕ್ಷಿ ಬೆಳೆ, ಇನ್ನೊಂದು ಕಡೆ ಹೊಲದಲ್ಲಿ ಶೇಂಗಾ, ಕಬ್ಬು, ಅಲಸಂದಿ, ಉದ್ದಿನ ಬೆಳೆ ಬೆಳೆದಿದ್ದಾರೆ. ಇನ್ನು ಮನೆಯಲ್ಲಿ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಇವರು ಮೊದಲಿಗೆ ತುಂಬಾ ಬಡತನದಲ್ಲಿ ಬೆಳೆದಿದ್ದರು. ಈಗ 32 ಎಕರೆ ಹೊಲ ಮಾಡಿಕೊಂಡು ಊರಿಗೆ ಶ್ರೀಮಂತರಾಗಿದ್ದಾರೆ.
ಇದೀಗ ಆಧುನಿಕ ಕೃಷಿಯಲ್ಲಿ ಕ್ರಾಂತಿ
ಮಲ್ಲಪ್ಪ ಮೇಟಿ ಆಲಮಟ್ಟಿ ಜಲಾಶಯಕ್ಕಾಗಿ ತಮ್ಮ ತಮ್ಮ 8 ಎಕರೆ ಹೊಲವನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರು. ಈಗ ಇವರು ಕೃಷಿಯಲ್ಲಿ ಕ್ರಾಂತಿ ಮಾಡಿ ಲಕ್ಷ ಲಕ್ಷ ಲಾಭ ಪಡೆಯುತ್ತಿದ್ದಾರೆ. ಹೊಲದಲ್ಲಿ 2 ಎಕರೆ ದ್ರಾಕ್ಷಿ, 24 ಎಕರೆ ಕಬ್ಬು, ಉಳಿದ ಭಾಗದಲ್ಲಿ ಶೇಂಗಾ, ಗೋವಿನಜೋಳ ಸೇರಿದಂತೆ ಮುಂತಾದ ಬೆಳೆಗಳನ್ನು ಬೆಳೆದಿದ್ದಾರೆ. ಇದರ ಜೊತೆಗೆ ಹೈನುಗಾರಿಕೆಯನ್ನು ಮಾಡುತ್ತಿದ್ದು, ಎಮ್ಮೆ ಹಸುಗಳು, ಎತ್ತುಗಳು ಸೇರಿ 20 ಜಾನುವಾರುಗಳನ್ನು ಸಾಕುತ್ತಿದ್ದಾರೆ. ಹೈನುಗಾರಿಕೆ, ಕೃಷಿ ಮೂಲಕ ವರ್ಷಕ್ಕೆ ಎಲ್ಲ ಖರ್ಚುವೆಚ್ಚ ತೆಗೆದು 20 ಲಕ್ಷ ಆದಾಯ ಪಡೆಯುತ್ತಿದ್ದಾರೆ.ಇವರು ಆಧುನಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದು, ಯಾವುದೇ ಸರ್ಕಾರಿ, ಕಾರ್ಪೊರೇಟ್ ಉದ್ಯೋಗಿಗಳಿಗೂ ಕಡಿಮೆಯಿಲ್ಲದಂತೆ ಆದಾಯ ಗಳಿಸುತ್ತಿದ್ದಾರೆ.
ಬಿ. ಎಸ್. ಯಡಿಯೂರಪ್ಪನವರಿಂದ ರಾಜ್ಯ ಪ್ರಶಸ್ತಿ
ಕೃಷಿಯಲ್ಲಿ ಈ ಹಿಂದೆ ಒಂದು ಎಕರೆಗೆ 117 ಟನ್ ಕಬ್ಬು ಬೆಳೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದರು. 2009ರಲ್ಲಿ ಯಡಿಯೂರಪ್ಪ ಅವರಿಂದ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಲಭಿಸಿದೆ. ಜೊತೆಗೆ ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಸನ್ಮಾನಗಳನ್ನು ಸ್ವೀಕರಿಸಿದ್ದಾರೆ. ಸರದಿಯಲ್ಲಿ ಮಲ್ಲಪ್ಪನವರಿಗೆ ಸನ್ಮಾನಗಳ ಹಬ್ಬವೇ ಆಗಿದೆ. ಇನ್ನು ಕೂಡ ಹಲವಾರು ಸಂಘಸಂಸ್ಥೆಗಳಿಂದ ಮಲ್ಲಪ್ಪನಿಗೆ ಆಹ್ವಾಗಳು ಬರುತ್ತಲೇ ಇವೆ.
ಊರಿಗೆ ಕುಬೇರನಾದ ರೈತ ಮಲ್ಲಪ್ಪ ಮೇಟಿ
ಮಲ್ಲಪ್ಪ ಮೇಟಿ ಜೊತೆಗೆ ಅವರ ಮಗ ಬಸವರಾಜ ಮೇಟಿ ಕೂಡ ಕೃಷಿಗೆ ಸಾಥ್ ನೀಡಿದ್ದಾರೆ. ಬಿಎಸ್ಸಿ ಪದವೀಧರನಾಗಿರುವ ಬಸವರಾಜ ತಂದೆ ಜೊತೆಗೆ ಕೃಷಿಯಲ್ಲಿ ತೊಡಗಿದ್ದಾರೆ. ದ್ರಾಕ್ಷಿ ಬೆಳೆಯುವ ಮೂಲಕ ವರ್ಷಕ್ಕೆ ಖರ್ಚು ವೆಚ್ಚ ತೆಗೆದು 8 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಕಬ್ಬು, ಶೇಂಗಾ, ಉದ್ದು, ಗೋವಿನ ಜೋಳ, ಹೈನುಗಾರಿಕೆ ಮೂಲಕ 12 ಲಕ್ಷ ಗಳಿಸುತ್ತಿದ್ದಾರೆ. ಎಲ್ಲ ಸೇರಿ ಒಟ್ಟು 20 ಲಕ್ಷ ಆದಾಯ ಇವರ ಕೈಸೇರುತ್ತಿದೆ.
ಕುಬೇರನಾದ ರೈತ ಮಲ್ಲಪ್ಪನ ಇತಿಹಾಸ
ಮೊದಲು ಇವರು ಬರೀ 4 ಎಕರೆ ಜಮೀನನ್ನು ಹೊಂದಿದ್ದರು. ನಂತರ ವರ್ಷಗಳು ಕಳೆದಂತೆ 32 ಎಕರೆ ಜಮೀನನ್ನು ಮಾಡಿ ಸಾಧನೆ ಮಾಡಿದ್ದಾರೆ. ಮಲ್ಲಪ್ಪ ಮೇಟಿ ಅವರ 8 ಎಕರೆ ಭೂಮಿ ಮುಳುಗಡೆ ಆಗಿ ಎಕರೆಗೆ 74 ಸಾವಿರ ಮಾತ್ರ ಪರಿಹಾರಧನ ಬಂದಿತ್ತು. ಅದೇ ಹಣದಲ್ಲಿ 4 ಎಕರೆ ಹೊಲ ಕೊಂಡುಕೊಂಡಿದ್ದರು. ಹೈನುಗಾರಿಕೆ ಆರಂಭಿಸಿ ಅದರಿಂದ ಬಂದ ಆದಾಯದಿಂದ ಇಂದು ಹೆಚ್ಚುವರಿಯಾಗಿ 28 ಎಕರೆ ಹೊಲ ಖರೀದಿಸಿದ್ದು, ಒಟ್ಟು 32 ಎಕರೆ ಆಸ್ತಿ ಮಾಡಿದ್ದಾರೆ. ಕೃಷಿ ಹೈನುಗಾರಿಕೆ ಮೂಲಕವೇ ಇಷ್ಟೊಂದು ಹೊಲ ಖರೀಧಿಸಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇವರ ಕೃಷಿ ಕ್ರಾಂತಿ ಕಂಡು ರೈತರು ಅವರ ಹೊಲಕ್ಕೆ ಭೇಟಿ ನೀಡಿ ಮಾರ್ಗದರ್ಶನ ಪಡೆಯುತ್ತಿದ್ದಾರೆ.
ಹೀಗೆ ಮಲ್ಲಪ್ಪ ಅವರ ಕೃಷಿ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ನಿವೃತ್ತ ಸೈನಿಕರಾದ ಶ್ರೀಶೈಲ್ ಕೂಗಲಿ ಸಂತೋಷ ವ್ಯಕ್ತಪಡಿಸಿದರು. ಸಂತ್ರಸ್ತರಾಗಿದ್ದ ಮಲ್ಲಪ್ಪ ಮೇಟಿ ಇಂದು ಸಂತೃಪ್ತ ರೈತರಾಗಿದ್ದಾರೆ. ಮಣ್ಣನ್ನು ನಂಬಿ ಕೆಟ್ಟವರಿಲ್ಲ ಎನ್ನುವಂತೆ ಭೂತಾಯಿ ನಂಬಿದ ಇವರು ಕೃಷಿಯಲ್ಲಿ ಕಮಾಲ್ ಮಾಡಿದ್ದಾರೆ ಎಂದರು